‘ಬಿಜೆಪಿ ಉತ್ತರ ಪ್ರದೇಶದಲ್ಲಿ ಪರಿಣಾಮ ಎದುರಿಸಲಿದೆ’
ಪದಚ್ಯುತ ಕೇಂದ್ರ ಸಚಿವ ಕಥೇರಿಯ ಬೆದರಿಕೆ
ಹೊಸದಿಲ್ಲಿ, ಜು.6: ಕೇಂದ್ರ ಸಂಪುಟ ಪುನಾರಚನೆ ವೇಳೆ ಪದಚ್ಯುತಗೊಂಡ, ವಿವಾದಾತ್ಮಕ ಸಚಿವ ರಾಮ್ ಶಂಕರ್ ಕಥೇರಿಯ ಈಗ ಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.
ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವರಾಗಿ ನಿನ್ನೆವರೆಗೂ ಅಧಿಕಾರದಲ್ಲಿದ್ದ ಕಥೇರಿಯ, ಪ್ರಚೋದಕ, ಮುಸ್ಲಿಂ ವಿರೋಧಿ ಹೇಳಿಕೆಗಳ ಮೂಲಕ (ಕು)ಖ್ಯಾತರಾದವರು. ಸಂಪುಟದಿಂದ ಇವರನ್ನು ಕಿತ್ತುಹಾಕಿರುವ ಬಗ್ಗೆ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಸ್ವ ಇಚ್ಛೆಯಿಂದಲೇ ಸಚಿವ ಸ್ಥಾನ ತ್ಯಜಿಸಿದ್ದರೂ, ಬೆಂಬಲಿಗರು ಇದರಿಂದ ನಿರಾಶರಾಗಿದ್ದಾರೆ. ಬಿಜೆಪಿ ಇದರ ಪರಿಣಾಮವನ್ನು ಮುಂದಿನ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎದುರಿಸಲಿದೆ ಎಂದು ಕಥೇರಿಯ ಗುಡುಗಿದ್ದಾರೆ.
ನಾನು ಪಕ್ಷಕ್ಕಾಗಿ ಕೆಲಸ ಮಾಡುವಂತೆ ಅಮಿತ್ ಶಾ ಸೂಚಿಸಿದ್ದಾರೆ. ಆದರೆ ಈ ನಿರ್ಧಾರದಿಂದ ಮುಂದಿನ ವಿಧಾನಸಬಾ ಚುನಾವಣೆಯಲ್ಲಿ ಸಾಕಷ್ಟು ಹಾನಿ ಆಗಲಿದೆ ಎಂದು ಸೂಚ್ಯವಾಗಿ ಹೇಳಿದ್ದಾರೆ.
ದಲಿತ ಸಚಿವನಾಗಿ ನಾನು ಒಳ್ಳೆಯ ಕೆಲಸ ಮಾಡಿದ್ದೆ. ನನ್ನ ಉತ್ತಮ ಕಾರ್ಯದಿಂದಾಗಿ ಇಟಾವಾದಲ್ಲಿ ಮಾಯಾವತಿಯ ಪ್ರಭಾವ ಕಡಿಮೆಯಾಗಿದೆ. ಇದೀಗ ನನ್ನ ಬೆಂಬಲಿಗರು ಸಿಟ್ಟಾಗಿದ್ದಾರೆ ಎಂದು ಕಥೇರಿಯ ಹೇಳಿದ್ದನ್ನು ಜನತಾ ಕಾ ರಿಪೋರ್ಟರ್ ಉಲ್ಲೇಖಿಸಿದೆ.