ಹೈದರಾಬಾದ್ ಸರಕಾರಿ ಆಸ್ಪತ್ರೆಯಲ್ಲಿ ಎಡವಟ್ಟು
ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡ ಏಳು ಮಂದಿ
ಹೈದರಾಬಾದ್, ಜು.7: ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಏಳು ಮಂದಿ ರೋಗಿಗಳು ತಮ್ಮ ಒಂದು ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡ ಧಾರುಣ ಘಟನೆ ಸಂಭವಿಸಿದೆ.
ಸರೋಜಿನಿದೇವಿ ಕಣ್ಣಿನ ಆಸ್ಪತ್ರೆಯಲ್ಲಿ ಇವರಿಗೆ ಜೂನ್ 30ರಂದು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಆಗಿತ್ತು. ಆದರೆ ವೈದ್ಯರ ಎಡವಟ್ಟು ಬುಧವಾರವಷ್ಟೇ ಬೆಳಕಿಗೆ ಬಂದಿದೆ. ಸಂತ್ರಸ್ತರಲ್ಲಿ ನಾಲ್ವರು ಮಹಿಳೆಯರು ಹಾಗೂ ಮೂವರು ಪುರುಷರು ಸೇರಿದ್ದು ಎಲ್ಲರೂ 50 ರಿಂದ 70 ವರ್ಷ ವಯಸ್ಸಿನವರು. ಸೂಪರ್ಬಗ್ ಕ್ಲೆಬಸೆಲ್ಲಾ ಎಂಬ ಬ್ಯಾಕ್ಟೀರಿಯಾ ಸೋಂಕಿನಿಂದ ಇದು ಸಂಭವಿಸಿದೆ ಎಂದು ಹೇಳಲಾಗಿದೆ.
ಪ್ರಯೋಗಾಲಯ ತಪಾಸಣಾ ವರದಿಯ ಪ್ರಕಾರ, ರೋಗಿಗಳಿಗೆ ಗ್ಲೂಕೋಸ್ ನೀಡುವ ವೇಳೆ ಈ ಬ್ಯಾಕ್ಟೀರಿಯಾ ತಗುಲಿದೆ. ಈ ಹಿನ್ನೆಲೆಯಲ್ಲಿ ವೈದ್ಯರ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 338ರ ಅನ್ವಯ, ವ್ಯಕ್ತಿಯೊಬ್ಬನ ಜೀವಕ್ಕೆ ಅಪಾಯ ಒಡ್ಡಿದ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣವನ್ನು ಮುಚ್ಚಿಹಾಕಲು ಆಸ್ಪತ್ರೆ ಅಧಿಕಾರಿಗಳು ಯತ್ನಿಸುತ್ತಿದ್ದಾರೆ ಎಂದು ರೋಗಿಗಳು ಆಪಾದಿಸಿದ್ದಾರೆ.
ನನ್ನ ಕಣ್ಣಿನ ದೃಷ್ಟಿ ಯಾವಾಗ ಮರಳಿ ಬರುತ್ತದೆ ಎಂದು ಕೇಳಲು ವೈದ್ಯರೇ ಇಲ್ಲ ಎಂದು 70 ವರ್ಷದ ಅಂಜಿ ರೆಡ್ಡಿ ಹೇಳುತ್ತಾರೆ. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಗಳ ಕಣ್ಣಿನಲ್ಲಿ ಅಸಾಧ್ಯ ನೋವು ಹಾಗೂ ಕೀವು ಕಂಡುಬಂದಿತ್ತು. ಎಡವಟ್ಟು ಆಗಿರುವ ವಿಷಯವನ್ನು ನಮ್ಮ ಗಮನಕ್ಕೇ ತಂದಿಲ್ಲ. ವೈದ್ಯರು ಹಲವು ಬಾರಿ ನಮ್ಮನ್ನು ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದೊಯ್ದು ತಪಾಸಣೆ ಮಾಡುತ್ತಿದ್ದರು ಎಂದು ಎಂ.ಪದ್ಮಾವತಿ ವಿವರಿಸಿದರು.
ಆಸ್ಪತ್ರೆಯ ಉಪ ಅಧೀಕ್ಷಕ ಡಾ.ರಾಜೇಂದ್ರ ಗುಪ್ತಾ ಅವರ ಪ್ರಕಾರ, 21 ರೋಗಿಗಳ ಶಸ್ತ್ರಚಿಕಿತ್ಸೆ ನಡೆಸಿದ್ದರೂ, ಕೇವಲ 13 ಮಂದಿಗೆ ಮಾತ್ರ ಸೋಂಕು ಕಾಣಿಸಿಕೊಂಡಿದೆ.