ರಾಜಸ್ಥಾನ ಯುವಕನ ಹೃದಯ ದಿಲ್ಲಿ ರೋಗಿಯ ಜೀವ ಉಳಿಸಿತು!
ಹೊಸದಿಲ್ಲಿ, ಜು.7: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕೃಿಯಗೊಂಡಿದ್ದ 22ರ ಹರೆಯದ ಯುವಕನ ಹೃದಯವನ್ನು ರಾಜಸ್ಥಾನದಿಂದ ದಿಲ್ಲಿಗೆ ಕೊಂಡೊಯ್ದು ಹೃದಯ ವೈಫಲ್ಯಕ್ಕೆ ಒಳಗಾಗಿದ್ದ 54ರ ಹರೆಯದ ವ್ಯಕ್ತಿಗೆ ಕಸಿ ಮಾಡಿರುವ ಅಪರೂಪದ ಘಟನೆ ನಡೆದಿದೆ.
ಜೈಪುರ ಹಾಗೂ ದಿಲ್ಲಿಯ ನಡುವಿನ 241 ಕಿ.ಮೀ.ದೂರವನ್ನು ಕೇವಲ 56 ನಿಮಿಷಗಳಲ್ಲಿ ಕ್ರಮಿಸಲಾಗಿತ್ತು. ಏರ್ಪೋರ್ಟ್ನಿಂದ ಫೋರ್ಟಿಸ್ ಎಸ್ಕೊರ್ಟ್ಸ್ ಹಾರ್ಟ್ ಸಂಸ್ಥೆಯ ನಡುವೆ ಗ್ರೀನ್ ಕಾರಿಡಾರ್ನ್ನು ನಿರ್ಮಿಸಲಾಗಿತ್ತು. 18.2 ಕಿ.ಮೀ. ದೂರವನ್ನು 16 ನಿಮಿಷಗಳಲ್ಲಿ ತಲುಪಲಾಗಿತ್ತು.
ಹೃದಯ ಕಸಿ ಮಾಡಿಸಿಕೊಂಡಿರುವ ರೋಗಿಯು ದೀರ್ಘಸಮಯದಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿತ್ತು. ಹೃದಯ ಕಸಿ ಮಾಡುವುದು ಉಳಿದ ಕೊನೆಯ ಆಯ್ಕೆ ಎಂದು ವೈದ್ಯರು ಹೇಳಿದ್ದರು.
ಹೃದ್ರೋಗಿ ಎರಡು ತಿಂಗಳ ಹಿಂದೆಯೇ ಫೊರ್ಟಿಸ್ ಎಸ್ಕೊರ್ಟ್ಸ್ ಹಾರ್ಟ್ ಸಂಸ್ಥೆಯಲ್ಲಿ ಕಸಿ ಮಾಡಿಸಿಕೊಳ್ಳುವವರ ಪಟ್ಟಿಯಲ್ಲಿ ಹೆಸರು ದಾಖಲಿಸಿದ್ದರು. ಅವರಿಗೆ ಸೂಕ್ತವಾಗುವ ಹೃದಯಕ್ಕಾಗಿ ಕಾಯಲಾಗುತ್ತಿತ್ತು. ಮಂಗಳವಾರ ರಾತ್ರಿ ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕೃಿಯಗೊಂಡಿರುವ ರೋಗಿಯ ಹೃದಯ ಲಭ್ಯವಿರುವ ಬಗ್ಗೆ ಎಸ್ಕೊರ್ಟ್ಸ್ ಆಸ್ಪತ್ರೆಗೆ ಫೋನ್ ಕರೆ ಬಂದಿತ್ತು.
ಹೃದಯವನ್ನು ಮನುಷ್ಯನ ದೇಹದಿಂದ ನಾಲ್ಕು ಗಂಟೆ ಮಾತ್ರ ಹೊರಗಿಡಬಹುದು. ಆ ನಂತರ ಹೃದಯ ಕಸಿ ಮಾಡಲು ಸಾಧ್ಯವಿಲ್ಲ.
ಕಸಿ ಮಾಡಿಸಿಕೊಳ್ಳುವ ರೋಗಿಗಳ ಪಟ್ಟಿಯು ಗಣನೀಯವಾಗಿ ಹೆಚ್ಚುತ್ತಿದೆ. ಕಸಿ ಮಾಡಿಸಿಕೊಳ್ಳಲು ಕಾಯುತ್ತಿರುವ ರೋಗಿಗಳು ಮರಣ ಹೊಂದುತ್ತಿದ್ದಾರೆ. ಭಾರತದಲ್ಲಿ ವರ್ಷಕ್ಕೆ ಸುಮಾರು 50,000 ಹೃದಯಗಳ ಅಗತ್ಯವಿದೆ.