ನಾಳೆ ಮಹಾರಾಷ್ಟ್ರ ಸಂಪುಟ ವಿಸ್ತರಣೆ
![ನಾಳೆ ಮಹಾರಾಷ್ಟ್ರ ಸಂಪುಟ ವಿಸ್ತರಣೆ ನಾಳೆ ಮಹಾರಾಷ್ಟ್ರ ಸಂಪುಟ ವಿಸ್ತರಣೆ](https://www.varthabharati.in/sites/default/files/images/articles/2016/07/7/VidhanBhavan_2923028f.jpg)
ಮುಂಬೈ, ಜು.7: ಮಹಾರಾಷ್ಟ್ರದ ಮಂತ್ರಿ ಮಂಡಲವು ಶುಕ್ರವಾರ ವಿಸ್ತರಣೆಗೊಳ್ಳುವ ನಿರೀಕ್ಷೆಯಿದೆ. ಬಿಜೆಪಿಯ ಐವರಿಗೆ ಹಾಗೂ ಶಿವಸೇನೆಯ ಇಬ್ಬರಿಗೆ ಸಂಪುಟದಲ್ಲಿ ಸ್ಥಾನ ಸಿಗುವ ಸಂಭವವಿದೆಯೆಂದು ಮೂಲಗಳು ತಿಳಿಸಿವೆ.
ಇತ್ತೀಚಿನ ಕೇಂದ್ರ ಸಂಪುಟ ಪುನಾರಚನೆಯ ವೇಳೆ ಮಿತ್ರಪಕ್ಷ ಶಿವಸೇನೆಗೆ ಸ್ಥಾನ ನೀಡಿಲ್ಲ. ಅದಕ್ಕಾಗಿ ಪಕ್ಷವನ್ನು ಸಮಾಧಾನಗೊಳಿಸಲು ದೇವೇಂದ್ರ ಫಡ್ನವೀಸ್ ಸಂಪುಟ ವಿಸ್ತರಣೆಗೆ ತೀರ್ಮಾನಿಸಿದ್ದಾರೆನ್ನಲಾಗಿದೆ.
20 ತಿಂಗಳು ಪ್ರಾಯದ ಫಡ್ನವೀಸ್ ಸರಕಾರವು ಹಿರಿಯ ಸಚಿವನಾಗಿದ್ದ ಏಕನಾಥ ಖಡ್ಸೆ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ ಬಳಿಕ ತೆರವಾಗಿರುವ ಸ್ಥಾನಗಳನ್ನು ತುಂಬಲಿದೆ.
ಖಡ್ಸೆಯವರ ಬಳಿಯಿದ್ದ 10 ಖಾತೆಗಳು ತಾತ್ಕಾಲಿಕವಾಗಿ ಮುಖ್ಯಮಂತ್ರಿಯ ಕೈಯಲ್ಲಿವೆ.
ಸಂಪುಟ ವಿಸ್ತರಣೆ ನಾಳೆ ನಡೆಯಲಿದೆಯೆಂದು ಹಿರಿಯ ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯ ಮಳೆಗಾಲದ ಅಧಿವೇಶನ ಜು.18ರಂದು ಆರಂಭಗೊಳ್ಳಲಿದೆ. ಜು.10ರಂದು ಫಡ್ನವೀಸ್ ನಾಲ್ಕು ದಿನಗಳ ರಶ್ಯಾ ಪ್ರವಾಸಕ್ಕೆ ಹೊರಡಲಿದ್ದಾರೆ. ಅದರ ಮುಂಚಿತವಾಗಿ ಸಂಪುಟ ವಿಸ್ತರಣೆ ನಡೆಯಲಿದೆ.
ಫಡ್ನವೀಸ್ರ ಸರಕಾರದಲ್ಲಿ 19 ಸಂಪುಟ ದರ್ಜೆ ಹಾಗೂ 10 ಸಹಾಯಕ ದರ್ಜೆಯ ಸಚಿವರಿದ್ದು, 14 ಸ್ಥಾನಗಳು ತೆರವಾಗಿವೆ. ಶುಕ್ರವಾರ ಈ ಎಲ್ಲ ಸ್ಥಾನಗಳನ್ನು ತುಂಬಲಾಗುವುದೇ ಎಂಬುದು ತಿಳಿದುಬಂದಿಲ್ಲ.
ಬಿಜೆಪಿಯ ಮಿತ್ರ ಪಕ್ಷಗಳಾದ ಸ್ವಾಭಿಮಾನಿ ಪಕ್ಷದ ಸದಾಭಾವೂ ಖೋಟ್ ಹಾಗೂ ರಾಷ್ಟ್ರೀಯ ಸಮಾಜ ಪಕ್ಷದ ಮಹಾದೇವ ಜನ್ಕರ್ ಸಂಪುಟ ಸೇರುವ ನಿರೀಕ್ಷೆಯಿದೆ.