ಮಂಗಳೂರು: ನೀರು ಪಾಲಾದ ಯುವಕರ ಮೃತದೇಹ ಪತ್ತೆ
ಮಂಗಳೂರು,ಜು. 7: ಮರವೂರು ಫಲ್ಗುಣಿ ನದಿ ಡ್ಯಾಂನಲ್ಲಿ ಮಂಗಳವಾರ ನೀರು ಪಾಲಾದ ಮೂಡುಶೆಡ್ಡೆಯ ಅವಿನಾಶ್ (26) ಹಾಗೂ ಜೈಸನ್ (24) ಅವರ ಮೃತದೇಹ ಇಂದು ತಣ್ಣೀರುಬಾವಿ ಬೀಚ್ನಲ್ಲಿ ಪತ್ತೆಯಾಗಿದೆ.
ಬುಧವಾರವೂ ಅಗ್ನಿಶಾಮಕ ದಳದ ಸಿಬ್ಬಂದಿ ನದಿಯಲ್ಲಿ ಹಾಗೂ ಇಲ್ಲಿನ ಪರಿಸರದಲ್ಲಿ ಹುಡುಕಾಟ ನಡೆಸಿದ್ದಾರಾದರೂ ಯಾವುದೇ ಕುರುಹು ಲಭಿಸಿರಲಿಲ್ಲ. ಇಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರುಬಾವಿ ಬೀಚ್ ಬಳಿ ಪತ್ತೆಯಾಗಿದೆ. ಜೈಸನ್ ಹಾಗೂ ಅವಿನಾಶ್ ಇತರ 6 ಮಂದಿ ಗೆಳೆಯರೊಂದಿಗೆ ಮಧ್ಯಾಹ್ನ ಮರವೂರು ಡ್ಯಾಮ್ ಸಮೀಪ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದು, ಜೈಸನ್ ಅಲ್ಲೇ ಇರುವ ರೈಲ್ವೆ ಟ್ರ್ಯಾಕ್ನ ಮೇಲೆ ಹೋಗಿ ಬಳಿಕ ನದಿಗೆ ಇಳಿದಿದ್ದ. ಈ ವೇಳೆ ಆತ ನೀರಿನ ಸೆಳೆತಕ್ಕೆ ಸಿಲುಕಿ ರಕ್ಷಣೆಗೆ ಬೊಬ್ಬೆ ಹಾಕಿದ್ದು, ಆತನ ರಕ್ಷಣೆಗೆ ಧಾವಿಸಿದ ಅವಿನಾಶ್ ಕೂಡ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು.
Next Story