ಹುಟ್ಟೂರಿನತ್ತ ಡಿವೈಎಸ್ಪಿ ಗಣಪತಿ ಪಾರ್ಥಿವ ಶರೀರ

ಮಡಿಕೇರಿ, ಜು.8: ಇಲ್ಲಿನ ಲಾಡ್ಜೊಂದರಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿರುವ ಡಿವೈಎಸ್ಪಿ ಎಂ.ಕೆ. ಗಣಪತಿ ಪಾರ್ಥಿವ ಶರೀರವನ್ನು ಆ್ಯಂಬುಲೆನ್ಸ್ ಮೂಲಕ ಹುಟ್ಟೂರು ಸೋಮವಾರಪೇಟೆ ತಾಲೂಕಿನ ರಂಗಸಮುದ್ರದತ್ತ ಕೊಂಡೊಯ್ಯಲಾಗಿದೆ.
ಕೊಡಗು ಜಿಲ್ಲಾಸ್ಪತ್ರೆಯ ಬಳಿ ಮೃತದೇಹದ ಬಳಿ ಧರಣಿ ನಿರತರಾದವರನ್ನು ಕೊಡಗು ಜಿಲ್ಲಾಧಿಕಾರಿ, ಐಜಿಪಿ, ಎಸ್ಪಿ ಮನವೊಲಿಸುವಲ್ಲಿ ಯಶಸ್ವಿಯಾದ ಬಳಿಕ ಮೃತದೇಹವನ್ನು ಹುಟ್ಟೂರಿಗೆ ಕೊಂಡೊಯ್ಯಲಾಯಿತು. ಮಧ್ಯಾಹ್ನ ಎರಡು ಗಂಟೆ ಬಳಿಕ ಅಂತ್ಯಕ್ರಿಯೆ ನಡೆಯಲಿದೆ.
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ ಸಿಐಡಿ ತನಿಖೆಗೆ ಆದೇಶಿಸಿದೆ.
ಹಿರಿಯ ಅಧಿಕಾರಿಗಳು ನಿರಂತರ ಕಿರುಕುಳ ನೀಡುತ್ತಿದ್ದರೆಂಬ ಬಗ್ಗೆ ನನ್ನ ಪತಿ ನನಗೆ ಮನೆಯಲ್ಲಿ ಆಗಾಗ ಹೇಳುತ್ತಿದ್ದರು. ಮಾಧ್ಯಮಗಳ ಮುಂದೆ ನನ್ನ ಪತಿ ಹೇಳಿರುವುದೆಲ್ಲಾ ಸತ್ಯ ಎಂದು ಗಣಪತಿ ಪತ್ನಿ ಪಾವನಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘‘ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ತುಂಬಾನೆ ದುರಾದೃಷ್ಟಕರ ಘಟನೆ. ಕೇಸ್ನ ಸಂಬಂಧ ಸಿಐಡಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ’’ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
‘‘ನನ್ನ ವಿರುದ್ಧ ಆರೋಪ ಸತ್ಯಕ್ಕೆ ದೂರವಾದುದು. ಗಣಪತಿ ಸಾವಿಗೆ ಸಂತಾಪ ಸೂಚಿಸುತ್ತೇನೆ’’ ಎಂದು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಕುರಿತು ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ.ಜೆ. ಜಾರ್ಜ್ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.







