ಕುಟುಂಬಕ್ಕೆ ಪಾರ್ಥಿವ ಶರೀರ ಒಪ್ಪಿಸಲು ನಿರಾಕರಿಸಿದ ಶಾಸಕದ್ವಯರು!
ಮೃತದೇಹ ಮುಂದಿಟ್ಟುಬಿಜೆಪಿಯಿಂದ ರಾಜಕೀಯ

ಮಡಿಕೇರಿ, ಜು.8 : ಆತ್ಮಹತ್ಯೆಗೈದ ಡಿವೈಎಸ್ಪಿ ಎಂ. ಕೆ. ಗಣಪತಿ ಅವರ ಮೃತದೇಹವನ್ನು ಒಪ್ಪಿಸಿ ಎಂದು ಕುಟುಂಬಸ್ಥರು ರಾಜಕಾರಣಿಗಳ ಜೊತೆಗೆ ಬೇಡಿದರೂ, ಬಿಜೆಪಿ ನಾಯಕರು ಮೃತದೇಹವನ್ನು ಬಿಟ್ಟುಕೊಡಲು ನಿರಾಕರಿಸಿದ ಘಟನೆ ಇಂದು ನಡೆಯಿತು.
ಮೃತ ಗಣಪತಿ ಅವರ ಮೃತದೇಹವನ್ನು ಅಂತ್ಯ ಸಂಸ್ಕಾರಕ್ಕೆ ಬಿಟ್ಟುಕೊಡಿ ಎಂದು ಅವರ ತಂದೆ ಕುಶಾಲಪ್ಪ ಮತ್ತು ಸಹೋದರ ಡಿವೈಎಸ್ಪಿ ಎಂ.ಕೆ.ತಮ್ಮಯ್ಯ ಕೋರಿದರು ಬಿಜೆಪಿ ಮುಖಂಡರು ಮೃತದೇಹವನ್ನು ಕುಟುಂಬಕ್ಕೆ ಒಪ್ಪಿಸಲು ನಿರಾಕರಿಸಿದರು.
ಗಣಪತಿ ಅವರು ತೀವ್ರ ಖಿನ್ನತೆಯ ಕಾಯಿಲೆಯಿಂದ ನರಳುತ್ತಿದ್ದರು ಎಂದು ತಂದೆ ಕುಶಾಲಪ್ಪ ಈ ಮೊದಲು ಮಾಧ್ಯಮ ಗಳಿಗೆ ತಿಳಿಸಿದ್ದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ಕೆ.ಮನುಮುತ್ತಪ್ಪ, ಶಾಸಕದ್ವಯರಾದ ಎಂ.ಪಿ. ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ ಅವರು ಮೃತದೇಹದ ಅಂತ್ಯ ಸಂಸ್ಕಾರಕ್ಕೆ ಅಡ್ಡಿ ಪಡಿಸಿದರು. ಕೊಡಗಿನ ಹೆಮ್ಮೆಯ ಅಧಿಕಾರಿಯಾಗಿರುವುದರಿಂದ ಶವ ಸಂಸ್ಕಾರದ ಹೊಣೆ ಜಿಲ್ಲೆಯ ಜನರ ಮೇಲೂ ಇದ್ದು, ಸರಕಾರ ಬೇಡಿಕೆಗಳಿಗೆ ಸ್ಪಂದಿಸುವವರೆಗೆ ಶವ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಶಾಸಕದ್ವಯರು ತಿಳಿಸಿದರು.
ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರು ಪ್ರತಿಭಟನಾಕಾರರ ಮನವೊಲಿಸಲು ಮಾಡಿದ ಪ್ರಯತ್ನ ವಿಫಲವಾಯಿತು. ಸ್ಥಳಕ್ಕೆ ಗೃಹ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳು ಬರಬೇಕು, ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ಇದನ್ನು ಕೊಲೆ ಪ್ರಕರಣವನ್ನಾಗಿ ಬದಲಾಯಿಸಬೇಕು ಈ ಬೇಡಿಕೆ ಈಡೇರುವವರೆಗೂ ಶವ ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ರಸ್ತೆ ಪ್ರತಿಭಟನೆ ನಡೆದ ನಂತರ ಸ್ಥಳಕ್ಕಾಮಿಸಿದ ಐಜಿ ಬಿ.ಕೆ.ಸಿಂಗ್, ಈಗಾಗಲೇ ಸಿಒಡಿಯ ಐಜಿ, ಒಬ್ಬರು ಎಸ್ಪಿ ಹಾಗೂ ಇಬ್ಬರು ಡಿವೈಎಸ್ಪಿಗಳನ್ನೊಳಗೊಂಡ ತನಿಖಾ ತಂಡ ಆಗಮಿಸುತ್ತಿದೆ ಎಂದರು. ತಮ್ಮಿಂದಿಗೆ ಅಧಿಕಾರಿಗಳು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಶಾಸಕದ್ವಯರ ಮನವೊಲಿಸಿದರು.
ಡಿವೈಎಸ್ಪಿ ಎಂ.ಕೆ.ಗಣಪತಿ ಅವರ ಸಾವಿನ ಪ್ರಕರಣವನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿರು ನಗರದಲ್ಲಿ ಬೃಹತ್ ರಸ್ತೆ ತಡೆ ಪ್ರತಿಭಟನೆ ನಡೆಸಿದರು. ರಾಜ್ಯ ಸರಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಸಚಿವ ಕೆ.ಜೆ.ಜಾರ್ಜ್ ಅವರ ವಿರುದ್ಧ ಮೊಕದ್ದಮೆ ದಾಖಲಿಸಿ ಬಂಧಿಸಬೇಕೆಂದು ಒತ್ತಾಯಿಸಿದರು.
ನಂತರ ಶವವನ್ನು ಮೃತ ಡಿವೈಎಸ್ಪಿ ಅವರ ಸ್ವಗ್ರಾಮ ರಂಗಸಮುದ್ರಕ್ಕೆ ಮೃತ ದೇಹವನ್ನು ಕೊಂಡೊಯ್ಯಲಾಯಿತು. ಸುಮಾರು ಎರಡು ಗಂಟೆ ಕಾಲ ರಸ್ತೆ ತಡೆ ಪ್ರತಿಭಟನೆ ನಡೆದ ಕಾರಣ ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತು.
ಗುರುವಾರ ನಗರದ ವಿನಾಯಕ ಲಾಡ್ಜ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಗಣಪತಿ ಅವರ ಮೃತದೇಹವನ್ನು ರಾತ್ರಿ 2 ಗಂಟೆ ಸುಮಾರಿಗೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಒಯ್ಯಲಾಯಿತು. ಪೂರ್ವಾಹ್ನ 8 ಗಂಟೆಯಿಂದ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಹಿರಿಯ ಅಧಿಕಾರಿಗಳಿಂದ ಒತ್ತಡವಿತ್ತು: ಹಿರಿಯ ಅಧಿಕಾರಿಗಳಿಂದ ಒತ್ತಡವಿದ್ದ ಬಗ್ಗೆ ಪತಿ ಗಣಪತಿ ಅವರು ತಮ್ಮ ಬಳಿ ಹೇಳಿಕೊಂಡಿದ್ದರು ಎಂದು ಮೃತ ಡಿವೈಎಸ್ಪಿ ಎಂ.ಕೆ. ಗಣಪತಿ ಪತ್ನಿ ಪಾವನಾ ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳ ಒತ್ತಡದಿಂದಲೇ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದ ಅವರು, ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಿಂದಲೂ ಸಾಕಷ್ಟು ಒತ್ತಡ ಅನುಭವಿಸಿದ್ದರು ಎಂದು ಹೇಳಿದರು.
ಒತ್ತಡದ ಕುರಿತು ಹಲವಾರು ಬಾರಿ ನನ್ನೊಂದಿಗೆ ಚರ್ಚಿಸಿದ್ದಾರೆ. ಸಾಯುವ ಮೊದಲು ಟಿವಿಗೆ ನೀಡಿರುವ ಹೇಳಿಕೆ ಗಳೆಲ್ಲವೂ ಸತ್ಯದಿಂದ ಕೂಡಿವೆ ಸಚಿವ ಜಾರ್ಜ್ ಅವರ ಬಗ್ಗೆಯೂ ನನ್ನೊಂದಿಗೆ ಹೇಳಿಕೊಂಡಿದ್ದಾರೆ ಎಂದು ಪಾವನಾ ಹೇಳಿದರು.
ಗಣಪತಿ ಅವರು ಖಿನ್ನತೆಗೆ ಗುರಿಯಾಗಿದ್ದರು ಎಂದು ಅವರ ತಮ್ಮ ಎಂ.ಕೆ. ತಮ್ಮಯ್ಯ ಅವರು ನೀಡಿರುವ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ ನನಗೇನು ಗೊತ್ತಿಲ್ಲ ಎಂದ ಪಾವನಾ, ಕುಟುಂಬದವರು ಯಾಕೆೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಗೊತ್ತಿಲ್ಲ. ಆದರೆ ಖಿನ್ನತೆಗೆ ಸಂಬಂಧಿಸಿದಂತೆ ಗಣಪತಿ ಅವರು ಎಲ್ಲಿಯೂ ಚಿಕಿತ್ಸೆ ಪಡೆದಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.
ಅಣ್ಣ ಮಾಡಿರುವ ಆರೋಪ ಕಾಲ್ಪನಿಕ : ಆತ್ಮಹತ್ಯೆಗೂ ಮೊದಲು ಸಚಿವ ಜಾರ್ಜ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಅಣ್ಣ ಮಾಡಿರುವ ಆರೋಪ ಕಾಲ್ಪನಿಕವೆಂದು ಮೃತ ಗಣಪತಿ ಅವರ ತಮ್ಮ ರಾಮನಗರದ ಡಿವೈಎಸ್ಪಿ ಎಂ.ಕೆ. ತಮ್ಮಯ್ಯ ತಿಳಿಸಿದ್ದಾರೆ. ನಗರದ ಜಿಲ್ಲಾಸ್ಪತ್ರೆಯ ಶವಗಾರದ ಬಳಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಖಿನ್ನತೆಗೆ ಒಳಗಾಗಿದ್ದ ನನ್ನ ಅಣ್ಣ ಗಣಪತಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಭ ಮಾಡಿರುವ ಆರೊಪಗಳು ಕಾಲ್ಪನಿಕ ಎಂದು ಹೇಳಿದ್ದಾರೆ.
ಯಾರನ್ನೂ ಸಮರ್ಥಿಸಿಕೊಳ್ಳುವುದಕ್ಕಾಗಿ ನಾನು ಈ ಹೇಳಿಕೆಯನ್ನು ನೀಡುತ್ತಿಲ್ಲ ಎಂದಿರುವ ತಮ್ಮಯ್ಯ, ಎರಡು ದಿನಗಳಿಗೊಮ್ಮೆಯಾದರೂ ದೂರವಾಣಿ ಮೂಲಕ ನಾವು ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದೆವು. ನನ್ನ ಮತ್ತು ಅಣ್ಣನ ನಡುವಿನ ಬಾಂಧವ್ಯ ಉತ್ತಮ ರೀತಿಯಲ್ಲಿತ್ತು. ತಾನು ರಾಮನಗರಕ್ಕೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಒಂದು ವಾರದಿಂದ ಅಣ್ಣನ ಸಂಪರ್ಕಕ್ಕೆ ಬಂದಿರಲಿಲ್ಲ ಎಂದರು.
ಸಮಸ್ಯೆಗಳು ಬರುವುದು ಸಹಜ, ಅಣ್ಣನಿಗೂ ತೊಂದರೆಗಳು ಎದುರಾಗಿರಬಹುದು. ಆದರೆ, ಅದನ್ನು ಸಮರ್ಥವಾಗಿ ಎದುರಿಸಬೇಕಾಗಿತ್ತು ಎಂದು ತಮ್ಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಡಿವೈಎಸ್ಪಿಗಣಪತಿ ಅವರ ಸಾವಿನ ಕುರಿತು ಮಡಿಕೇರಿಯಲ್ಲಿ ಸಿಆರ್ಪಿಸಿ 174 ರ ಪ್ರಕಾರ ಕಿಮಿನಲ್ ಮೊಕದ್ದಮೆ ದಾಖಲಿಸಿ ಕೊಳ್ಳಲಾಗಿದೆ. ಸರಕಾರ ಪ್ರಕರಣದ ಮುಂದಿನ ತನಿಖೆಯನ್ನು ಸಿಐಡಿ ವಿಭಾಗಕ್ಕೆ ವಹಿಸಿದೆ. ಓರ್ವ ಎಸ್ಪಿಹಾಗೂ ಎರಡು ಡಿವೈಎಸ್ಪಿಗಳ ನೇತೃತ್ವದ ತಂಡ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲಿದೆ.
<
ಬಿಕ್ರಮ್ ಕುಮಾರ್ ಸಿಂಗ್ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕರು







