ಜಿಲ್ಲೆಗೆ ಸಿಐಡಿ ವಿಭಾಗದ ಉನ್ನತ ಅಧಿಕಾರಿಗಳ ತಂಡ ಭೇಟಿ

ಮಡಿಕೇರಿ, ಜು. 8: ಡಿವೈಎಸ್ಪಿಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ವಿಭಾಗದ ಉನ್ನತ ಅಧಿಕಾರಿಗಳ ತಂಡ ಶುಕ್ರವಾರ ಮಧ್ಯಾಹ್ನ ಜಿಲ್ಲೆಗೆ ಭೇಟಿ ನೀಡಿದೆ. ಸಿಐಡಿ ವಿಭಾಗದ ವರಿಷ್ಠಾಧಿಕಾರಿ ಕುಮಾರಸ್ವಾಮಿ ನೇತೃತ್ವದಲ್ಲಿ ಡಿವೈಎಸ್ಪಿ ಶ್ರೀಧರ್, ಇನ್ಸ್ಪೆೆಕ್ಟರ್ ಚನ್ನೇಗೌಡ ಮತ್ತು ಸಿಬ್ಬಂದಿಯ ತಂಡ ಗಣಪತಿ ಅವರ ಹುಟ್ಟೂರು ರಂಗಸಮುದ್ರಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಲ್ಲಿ ಮಾಹಿತಿ ಕಲೆಹಾಕಿದೆ.
ಗಣಪತಿ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಹಾಗೂ ಪ್ರಸಕ್ತ ವಿದ್ಯಮಾನಗಳ ಬಗ್ಗೆ ತಂಡದ ಸದಸ್ಯರು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಸೇರಿದಂತೆ ಹಲವರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಿದರು. ಗಣಪತಿ ಅವರು ತಂಗಿದ್ದ ಮಡಿಕೇರಿಯ ವಿನಾಯಕ ಲಾಡ್ಜ್, ಸಂದರ್ಶನ ನೀಡಿದ್ದ ಖಾಸಗಿ ಟಿವಿ ವಾಹಿನಿ ಹಾಗೂ ವಿವಿಧೆಡೆ ಅಧಿಕಾರಿಗಳ ತಂಡ ಮಾಹಿತಿಯ ಸಂಗ್ರಹದಲ್ಲಿ ತೊಡಗಿದೆೆ. ಇನ್ನೆರಡು ದಿನಗಳ ಕಾಲ ಸಿಐಡಿ ತಂಡ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಲಿದೆ ಎಂದು ತಿಳಿದು ಬಂದಿದೆ.
ಮತ್ತೊಂದೆಡೆ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಬಿಕ್ರಮ್ ಕುಮಾರ್ ಸಿಂಗ್ ಅವರು ಶುಕ್ರವಾರ ಕುಶಾಲನಗರದ ಡಿವೈಎಸ್ಪಿ ಕಚೇರಿಗೆ ಭೇಟಿ ನೀಡಿ ಡಿವೈಎಸ್ಪಿಗಣಪತಿ ಅವರ ಆತ್ಮಹತ್ಯೆ ಪ್ರಕರಣದ ಕುರಿತು ಕೊಡಗು ಜಿಲ್ಲಾಧಿಕಾರಿ ಡಾ.ಆರ್.ವಿ. ಡಿಸೋಜ ಮತ್ತು ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಅಲ್ಲದೆ, ಸಿಐಡಿ ಉನ್ನತ ಅಧಿಕಾರಿಗಳೊಂದಿಗೂ ಚರ್ಚೆ ನಡೆಸಿದರು.





