ಕಾಡುಹಂದಿಗಳ ಬೇಟೆಗೆ ಸ್ಫೋಟಕ ವಸ್ತುಗಳ ಬಳಕೆ
ಕಾಸರಗೋಡು, ಜು.8: ಕಾಡು ಹಂದಿಗಳ ಬೇಟೆಗೆ ಕೋವಿ, ಉರುಳು ಹಾಗೂ ವಿದ್ಯುತ್ ತಂತಿ ಬಳಸಲಾಗುತ್ತಿದ್ದರೂ ಇದೀಗ ಸ್ಫೋಟಕ ವಸ್ತುಗಳನ್ನು ಹೆಚ್ಚಾಗಿ ಬಳಸಲಾಗುತ್ತಿದ್ದು, ಇದು ಕೆಲವೊಮ್ಮೆ ಸಾಕು ಪ್ರಾಣಿಗಳ ಜೀವಗಳಿಗೂ ಎರವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕೃಷಿ ಸ್ಥಳಗಳಿಗೆ ನುಗ್ಗುವ ಹಂದಿಗಳನ್ನು ಹಿಡಿಯಲು ಪಟಾಕಿ ಮಾದರಿಯ ಸ್ಫೋಟಕಗಳನ್ನು ಬಳಸಲಾಗುತ್ತಿದೆ. ಇಂತಹ ಸ್ಫೋಟಕಗಳನ್ನು ಕಚ್ಚಿದ ಸಂದರ್ಭ ಹಲವು ಸಾಕುಪ್ರಾಣಿ ಸೇರಿದಂತೆ ಮೃಗಗಳು ಬಲಿಯಾಗುತ್ತಿವೆ ಎನ್ನಲಾಗಿದೆ.
ಬದಿಯಡ್ಕ ಸಮೀಪದ ನಾರಂಪಾಡಿಯಲ್ಲಿ ಖಾಸಗಿ ವ್ಯಕ್ತಿಯೋರ್ವರು ಹಂದಿಗಿಟ್ಟಿದ್ದ ಸ್ಫೋಟಕ ಸಿಡಿದು ಸಾಕು ನಾಯಿಯ ತಲೆ ಚಿಂದಿಯಾಗಿ ಸಾವಿಗೀಡಾಗಿತ್ತು. ಆದರೆ ಪ್ರಾಣಿಯಾದುದರಿಂದ ಇದು ಸುದ್ದಿಯಾಗುತ್ತಿಲ್ಲ. ಕೋಳಿ ತ್ಯಾಜ್ಯಗಳಲ್ಲಿ ಈ ಸ್ಫೋಟಕವನ್ನು ಇರಿಸಲಾಗುತ್ತಿದೆ. ನಾಯಿ, ಜಾನುವಾರು ಸೇರಿದಂತೆ ಹಲವು ಪ್ರಾಣಿಗಳು ಇದನ್ನು ಕಚ್ಚಿದ್ದಲ್ಲಿ ಸ್ಫೋಟಗೊಳ್ಳುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬದಿಯಡ್ಕ, ಆದೂರು, ಕಾಞಂಗಾಡ್, ಬೋವಿಕ್ಕಾನ, ಮುಳ್ಳೇರಿಯಾ, ಬೇಡಡ್ಕ ಮೊದಲಾದ ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಇಂತಹ ಸ್ಫೋಟಕಗಳನ್ನು ಬಳಸಲಾಗುತ್ತಿದೆ ಎನ್ನಲಾಗಿದೆ. ಹಂದಿಗಳ ಬೇಟೆಯ ವೇಳೆ ಮನುಷ್ಯ ಸೇರಿದಂತೆ ಇತರ ಹಲವು ಜೀವಗಳು ಈಗಾಗಲೇ ಬಲಿಯಾಗಿದೆ ಎಂಬ ಮಾಹಿತಿ ಇದೆ.