ಪ್ರತಿಭಾ ಪಲಾಯನಕ್ಕೆ ತಡೆ ಬೀಳಲಿ: ಪ್ರೊ. ಡಾ.ಕೆ. ಬೈರಪ್ಪ
ಸಂತ ಅಲೋಶಿಯಸ್ ಕಾಲೇಜು ಪದವಿ ದಿನಾಚರಣೆ
ಮಂಗಳೂರು,ಜು.9: ಯುವಕರು ಗುಣಮಟ್ಟದ ಶಿಕ್ಷಣದ ಅಭಿಲಾಷೆಯಿಂದ ಉನ್ನತ ವ್ಯಾಸಾಂಗಕ್ಕಾಗಿ ವಿದೇಶಕ್ಕೆ ಹೋಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಪ್ರತಿಭಾ ಪಲಾಯನಕ್ಕೆ ಪೂರ್ಣ ವಿರಾಮ ಹಾಕುವ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯಾಗಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ. ಡಾ. ಕೆ. ಬೈರಪ್ಪ ಹೇಳಿದ್ದಾರೆ.
ಅವರು ಇಂದು ನಗರದ ಸಂತ ಅಲೋಶಿಯಸ್ ಕಾಲೇಜಿ(ಸ್ವಾಯತ್ತ)ನ 6ನೆ ಪದವಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಆಧುನೀಕರಣಗೊಳಿಸುವ ಮೂಲಕ ನಮ್ಮ ದೇಶವು ತಾಂತ್ರಿಕವಾಗಿ, ನೈತಿಕವಾಗಿ ಅಧಿಕ ಸಂಖ್ಯೆಯಲ್ಲಿ ಪದವೀದರನ್ನು ಹೊಂದಲು ಅವಕಾಶ ಕಲ್ಪಿಸಬೇಕಾಗಿದೆ. ಸ್ವತಂತ್ರ ಭಾರತದಲ್ಲಿ ಉನ್ನತ ಶಿಕ್ಷಣವು ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಪ್ರಗತಿ ಮತ್ತು ರಾಜಕೀಯ ಪ್ರಭುತ್ವಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದೆ. ಹಾಗಿದ್ದರೂ ಈ ನೆಲೆಯಲ್ಲಿ ಇನ್ನಷ್ಟು ಗಂಭೀರವಾಗಿ ಚಿಂತಿಸಬೇಕಾಗಿದೆ. ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯು ಪ್ರಮಾಣಿತ ಹಾಗೂ ಗುಣಮಟ್ಟದ ಬೇಡಿಕೆಯ ಹೊರೆಯನ್ನು ಹೊತ್ತಿದೆ. ಸರಕಾರಿ ಶಿಕ್ಷಣ ಸಂಸ್ಥೆಗಳಿಗೆ ಉನ್ನತ ಶಿಕ್ಷಣಕ್ಕಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ಅಧಿಕವಾಗಿದ್ದು, ವಿಶ್ವವಿದ್ಯಾನಿಲಯಗಳ ಸಂಖ್ಯೆ ಹೆಚ್ಚಳವಾಗಬೇಕಾಗಿದೆ. ಇದರ ಜೊತೆಯಲ್ಲೇ ಗುಣಮಟ್ಟದ ಶಿಕ್ಷಣಕ್ಕೆ ಪ್ರಮುಖ ಆದ್ಯತೆಯನ್ನು ನೀಡಬೇಕು ಎಂದು ಅವರು ಅಭಿಪ್ರಾಯಿಸಿದರು.
ಪದವೀಧರರಾದರು ಕೂಡಾ ಸಮಾಜದೊಂದಿಗೆ ಸಂಪರ್ಕ ಹೊಂದುತ್ತಾ, ಗ್ರಾಮೀಣ ಅಭಿವೃದ್ದಿ ಹಾಗೂ ಪ್ರಾಥಮಿಕ ಶಿಕ್ಷಣಕ್ಕೆ ಕೊಡುಗೆಯನ್ನು ನೀಡುವ ಬಗ್ಗೆ ಗಮನ ಹರಿಸಬೇಕು ಎಂದು ಯುವ ಪದವೀಧರರಿಗೆ ಕರೆ ನೀಡಿದ ಪ್ರೊ. ಬೈರಪ್ಪ, ಶಿಕ್ಷಣ ಸಂಸ್ಥೆಗಳು ಸಂಶೋಧನೆಗೆ ಹೆಚ್ಚು ಒತ್ತು ನೀಡುವ ಜತೆಗೆ ಇತರ ಅತ್ಯುತ್ತಮ ಸಂಸ್ಥೆಗಳ ಜತೆ ಸಹಭಾಗಿತ್ವಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ 579 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ, 924 ವಿದ್ಯಾರ್ಥಿಗಳಿಗೆ ಪದವಿ ಹಾಗೂ ಡಿಪ್ಲೊಮಾ ಪದವಿ ಸೇರಿದಂತೆ ಒಟ್ಟು 1638 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಇದೇ ವೇಳೆ ಸ್ನಾತಕೋತ್ತರ ಹಾಗೂ ವಿವಿಧ ಪದವಿ ತರಗತಿಗಳಲ್ಲಿ ರ್ಯಾಂಕ್ ವಿಜೇತರಿಗೆ ಸಂಸ್ಥೆ ವತಿಯಿಂದ ನೀಡಲಾಗುವ ವಿವಿಧ ಗೌರವ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಮಂಗಳೂರು ಜೂಯಿಸ್ಟ್ಎಜುಕೇಶನಲ್ ಸೊಸೈಟಿ ಮತ್ತು ಪ್ರಾವಿನ್ಸಿಯಲ್ನ ಅಧ್ಯಕ್ಷ ರೆ. ಡಾ. ಸ್ಟಾನಿಸ್ಲಾಸ್ ಡಿಸೋಜಾ, ಸಂತ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ರೆ.ಫಾ. ಡಿನೊಯಿಸಿಯಸ್ ವಾಝ್ ಪದವೀಧರರನ್ನುದ್ದೇಶಿಸಿ ಮಾತನಾಡಿದರು.
ರಿಜಿಸ್ಟ್ರಾರ್ ಡಾ.ಎ.ಎಂ. ನರಹರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ರೆ. ಫಾ. ಸ್ವೀಬರ್ಟ್ ಡಿಸಿಲ್ವಾ ಸ್ವಾಗತಿಸಿದರು.