ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲದಂತಾಗಿದೆ: ಸುರೇಶ್ ಅತ್ರೆಮಜಲು
![ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲದಂತಾಗಿದೆ: ಸುರೇಶ್ ಅತ್ರೆಮಜಲು ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲದಂತಾಗಿದೆ: ಸುರೇಶ್ ಅತ್ರೆಮಜಲು](https://www.varthabharati.in/sites/default/files/images/articles/2016/07/9/9uppbjp-(1).jpg)
ಉಪ್ಪಿನಂಗಡಿ, ಜು.9: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲದಂತಾಗಿದ್ದು, ಅವರು ನಿರಂತರ ದೌರ್ಜನ್ಯ ಎದುರಿಸುವಂತಾಗಿದೆ. ಇದರಿಂದ ಕೆಲವರು ಆತ್ಮಹತ್ಯೆಯ ಹಾದಿ ತುಳಿದರೆ, ಕೆಲವರು ರಾಜೀನಾಮೆ ನೀಡಿ ಸರಕಾರಿ ನೌಕರಿಯಿಂದಲೇ ಹೊರಬರುವ ನಿರ್ಧಾರ ತೆಗೆದುಕೊಳ್ಳುವಂತಾಗಿದೆ ಬಿಜೆಪಿಯ ಉಪ್ಪಿನಂಗಡಿ ಗ್ರಾಮ ಸಮಿತಿ ಅಧ್ಯಕ್ಷ ಸುರೇಶ್ ಅತ್ರೆಮಜಲು ತಿಳಿಸಿದರು.
ಬಿಜೆಪಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಉಪ್ಪಿನಂಗಡಿಯಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ಚರ್ಚಿಸಲು ಉಪ್ಪಿನಂಗಡಿ ಬಿಜೆಪಿ ಗ್ರಾಮ ಸಮಿತಿಯ ವತಿಯಿಂದ ಇಲ್ಲಿನ ಸಿಎ ಬ್ಯಾಂಕ್ ಸಭಾಂಗಣದಲ್ಲಿ ಕರೆದ ಗ್ರಾಮ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯ ಸರಕಾರದ ದಮನಕಾರಿ, ಜನವಿರೋಧಿ ನೀತಿಯ ವಿರುದ್ಧ ಪ್ರತಿ ಮನೆಯ ಜನರು ತಿರುಗಿ ಬೇಕು. ಇದಕ್ಕಾಗಿ ರಾಜ್ಯ ಸರಕಾರದ ಸರ್ವಾಧಿಕಾರದ, ಭ್ರಷ್ಟಚಾರದ ಆಡಳಿತವನ್ನು ಬಿಜೆಪಿ ಕಾರ್ಯಕರ್ತರು ಪ್ರತಿಯೋರ್ವರಿಗೂ ತಿಳಿಸುವ ಕೆಲಸ ಮಾಡಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಸೇರಿದಂತೆ ಪಕ್ಷಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಜು.17ರಂದು ಉಪ್ಪಿನಂಗಡಿಯಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಸುಜಾತಾ ಕೃಷ್ಣ ಆಚಾರ್ಯ, ಮಾಜಿ ಸದಸ್ಯ ಎನ್. ಉಮೇಶ್ ಶೆಣೈ, ಪಕ್ಷದ ಪ್ರಮುಖರಾದ ಗಂಗಾಧರ್ ನೆಕ್ಕರಾಜೆ, ಗಣೇಶ್ ಕುಲಾಲ್, ಅನಿಲ್ ಕುಮಾರ್ ಉಪ್ಪಿನಂಗಡಿ, ಹರಿರಾಮಚಂದ್ರ, ವಿಶ್ವನಾಥ ಶೆಟ್ಟಿ ಕಂಗ್ವೆ, ಜಗದೀಶ್ ಶೆಟ್ಟಿ, ರಾಘವೇಂದ್ರ ನಾಯಕ್, ಉಷಾಚಂದ್ರ ಮುಳಿಯ, ಪ್ರಸಾದ್ ಭಂಡಾರಿ, ಜಯಂತ ಬೆದ್ರೋಡಿ, ರವಿ ಇಳಂತಿಲ, ಸದಾನಂದ ಕಾರ್ ಕ್ಲಬ್, ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ಹರೀಶ್, ರಮೇಶ್ ಲಕ್ಷ್ಮೀನಗರ, ಆದರ್ಶ ಕಜೆಕ್ಕಾರ್, ಉಪ್ಪಿನಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಯಶವಂತ ಜಿ., ನಿರ್ದೇಶಕರಾದ ಯತೀಶ್ ಶೆಟ್ಟಿ, ಸುಜಾತ ರೈ ಅಲಿಮಾರ್ ಉಪಸ್ಥಿತರಿದ್ದರು.