ಇನೋಳಿ ದೇವಂದಬೆಟ್ಟ ಸಂಪರ್ಕದ ಕಾಂಕ್ರೀಟ್ ರಸ್ತೆ ಉದ್ಘಾಟನೆ
![ಇನೋಳಿ ದೇವಂದಬೆಟ್ಟ ಸಂಪರ್ಕದ ಕಾಂಕ್ರೀಟ್ ರಸ್ತೆ ಉದ್ಘಾಟನೆ ಇನೋಳಿ ದೇವಂದಬೆಟ್ಟ ಸಂಪರ್ಕದ ಕಾಂಕ್ರೀಟ್ ರಸ್ತೆ ಉದ್ಘಾಟನೆ](https://www.varthabharati.in/sites/default/files/images/articles/2016/07/9/ULL_0.jpg)
ಉಳ್ಳಾಲ, ಜು.9: ಪಾವೂರು ಗ್ರಾಮದ ಇನೋಳಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಸಂಪರ್ಕದ ಕಾಂಕ್ರೀಟ್ ರಸ್ತೆಯನ್ನು ಸಚಿವ ಯು.ಟಿ.ಖಾದರ್ ಅವರು ಶನಿವಾರ ಉದ್ಘಾಟಿಸಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಹಿಂದೆಯೇ ದೇವಸ್ಥಾನ ಸಂಪರ್ಕ ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆಗೊಂಡಿದ್ದರೂ ವಿವಿಧ ಕಾರಣಗಳಿಂದ ಕಾಮಗಾರಿ ನಡೆದಿರಲಿಲ್ಲ, ಇದೀಗ ಶಾಶ್ವತ ಕಾಮಗಾರಿ ನಡೆಸುವ ಮೂಲಕ ಸ್ಥಳೀಯರ ಹಲವು ವರ್ಷಗಳ ಬೇಡಿಕೆ ಹಾಗೂ ಬ್ರಹ್ಮಕಲಶೋತ್ಸವ ಸಂದರ್ಭ ನೀಡಿದ್ದ ಭರವಸೆ ಈಡೇರಿಸಿದಂತಾಗಿದೆ ಹೇಳಿದರು.
ರಸ್ತೆ ಶಾಶ್ವತ ಕಾಮಗಾರಿ ನಿಟ್ಟಿನಲ್ಲಿ ಹಿಂದಿನ ಜನಪ್ರತಿನಿಧಿಗಳು ಸತತ ಪ್ರಯತ್ನ ನಡೆಸಿದ್ದರು. ಮಂಗಳೂರು ಕ್ಷೇತ್ರ ವ್ಯಾಪ್ತಿಯ ಬಹುತೇಕ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಮುಗಿದಿದ್ದು ಉಳಿದ ರಸ್ತೆಗಳ ಅಭಿವೃದ್ಧಿಗೆ ವಿವಿಧ ಇಲಾಖೆಗಳಿಂದ ಅನುದಾನ ಬಿಡುಗಡೆಗೊಂಡಿದೆ. ಕ್ಷೇತ್ರದ 25 ಕಡೆಗಳಲ್ಲಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆಯಾಗಲಿದ್ದು, ಪಾವೂರಿನಲ್ಲಿ ಆಗಲಿದೆ. ಜನರು 10 ರೂಪಾಯಿಗೆ 25 ಲೀಟರ್ ಶುದ್ಧ ಕುಡಿಯುವ ನೀರು ಬಳಸಬಹುದಾಗಿದೆ ಎಂದು ತಿಳಿಸಿದರು.
ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಪಾವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಟಿ.ಫಿರೋಝ್, ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಪೂಂಜ ಕಿಲ್ಲೂರುಗುತ್ತು, ಗ್ರಾಮ ಪಂಚಾಯತ್ ಸದಸ್ಯರಾದ ಮುಹಮ್ಮದ್ ಇನೋಳಿ, ವಿವೇಕ್ ರೈ, ಮಜೀದ್ ಸಾತ್ಕೋ, ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್, ಮಾಜಿ ಸದಸ್ಯ ನಾರ್ಬರ್ಟ್ ಡಿಸಿಲ್ವಾ, ದೇವಸ್ಥಾನದ ಪ್ರಮುಖರಾದ ಗೋಪಾಲ ಶೆಟ್ಟಿ ಬಾರ್ಲ, ಶ್ರೀನಿವಾಸ ಇನೋಳಿ ಮೊದಲಾದವರು ಉಪಸ್ಥಿತರಿದ್ದರು.