ಬಿಹಾರ ಚುನಾವಣೆಗೂ ಮುನ್ನ ಶಾ, ಉವೈಸಿ ನಡುವೆ ರಹಸ್ಯ ಒಪ್ಪಂದ
ಆಪ್ ಸೇರಿದ ಮಾಜಿ ಬಿಜೆಪಿ ಶಾಸಕನಿಂದ ಬಾಂಬ್
ಅಹ್ಮದಾಬಾದ್, ಜು.11: ಆಮ್ ಆದ್ಮಿ ಪಕ್ಷವನ್ನು ಸೇರಿದ್ದಾರೆನ್ನಲಾದ ಮಾಜಿ ಬಿಜೆಪಿ ಶಾಸಕ, ಹಿರಿಯ ವಕೀಲ ಹಾಗೂ ಗುಜರಾತ್ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಯತಿನ್ ಓಝಾ ಹಲವಾರು ರಹಸ್ಯಗಳನ್ನು ಬಹಿರಂಗಗೊಳಿಸಿ ದಿಲ್ಲಿ ಮುಖ್ಯಮಂತ್ರಿಗೆ ಮೂರು ಪುಟಗಳ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಎಐಎಂಐಎಂ ನಾಯಕ ಅಕ್ಬರುದ್ದೀನ್ ಉವೈಸಿ 2015ರಲ್ಲಿ ಭೇಟಿಯಾಗಿ ರಹಸ್ಯ ಒಪ್ಪಂದವೊಂದನ್ನು ಮಾಡಿಕೊಂಡು ಬಿಹಾರ ಚುನಾವಣೆಗೆ ಕಾರ್ಯತಂತ್ರ ರೂಪಿಸಿದ್ದರು ಎಂದು ಹೇಳಿದ್ದಾರೆ.
ಪತ್ರದಲ್ಲಿ ಹೀಗೆಂದು ಬರೆಯಲಾಗಿದೆ
''ಅಮಿತ್ ಶಾ ಹಾಗೂ ಅಕ್ಬರುದ್ದೀನ್ ಉವೈಸಿಯವರ ನಡುವೆ ಶಾ ನಿವಾಸದಲ್ಲಿ 2015ರ ಸೆಪ್ಟೆಂಬರ್ 15ರಂದು 3 ಗಂಟೆಗೆ ಸಭೆ ನಡೆದಿರುವ ಬಗ್ಗೆ ನಿಮ್ಮ ಗಮನ ಸೆಳೆಯಲು ನಾನು ಬಯಸುತ್ತೇನೆ. ಆ ಸಭೆಯಲ್ಲಿ ನಾನೂ ಹಾಜರಿದ್ದೆ. ವಿಸ್ತೃತ ಚರ್ಚೆ ನಡೆದು ಉವೈಸಿ ನವೆಂಬರ್ 5 ರಂದು ನಡೆಯಲಿದ್ದ ಬಿಹಾರದ ಕೊನೆಯ ಹಂತದ ಚುನಾವಣೆಯಲ್ಲಿ ಮುಸ್ಲಿಮ್ ಬಾಹುಳ್ಯ ಪ್ರದೇಶಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಬೇಕೆಂದು ನಿರ್ಧರಿಸಲಾಗಿತ್ತು. ಅಮಿತ್ ಶಾ ಬರೆದು ಕೊಟ್ಟಂತಹ ಹಾಗೂ ಸಮಾಜವನ್ನು ವಿಭಜಿಸುವಂತಹ ದ್ವೇಷಕಾರಿ ಭಾಷಣವನ್ನು ಉವೈಸಿ ಸಭೆಗಳಲ್ಲಿ ನೀಡಬೇಕೆಂದೂ ಅಲ್ಲಿ ನಿರ್ಧರಿಸಲಾಗಿತ್ತು.''
ಓಝಾ ಅವರನ್ನು ಗುರುವಾರ ಆಪ್ ಪಕ್ಷಕ್ಕೆ ಅಧಿಕೃತವಾಗಿ ಬರಮಾಡಿಕೊಳ್ಳಲಿದೆ.
ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಎರಡು ದಿನದ ಭೇಟಿಗಾಗಿ ರಾಜ್ಕೋಟ್ಗೆ ಆಗಮಿಸಿದ್ದ ಸಂದರ್ಭದಲ್ಲಿ ಓಝಾ ಅವರನ್ನು ಭೇಟಿಯಾಗಿದ್ದರು. ''ಇದೊಂದು ಔಪಚಾರಿಕ ಭೇಟಿಯಾದರೂ ನಾನೀಗಾಗಲೇ ಎಎಪಿ ಸೇರಿದ್ದೇನೆಂದು ನೀವು ತಿಳಿದುಕೊಳ್ಳಬಹುದು. ಮುಂದಿನ ಮಂಗಳವಾರ ದಿಲ್ಲಿಯಲ್ಲಿ ಔಪಚಾರಿಕ ಸಭೆ ನಡೆಯಲಿದೆ'' ಎಂದು ಓಝಾ ಆಗ ಮಾಧ್ಯಮ ಮಂದಿಗೆ ತಿಳಿಸಿದ್ದರು.
''ಪ್ರಧಾನಿ ಮೋದಿ ನ್ಯಾಯಾಂಗದ ಮೇಲೆ ದಾಳಿ ನಡೆಸಿ ಅದನ್ನು ದುರ್ಬಲಗೊಳಿಸಲು ಯತ್ನಿಸುತ್ತಿರುವುದರಿಂದ ನಾನು ಮೋದಿಯವರ ವಿರುದ್ಧ ಹೋರಾಡಲಿದ್ದೇನೆ'' ಎಂದೂ ಅವರು ಹೇಳಿದ್ದಾರೆ.
ಓಝಾ ಪ್ರಥಮ ಬಾರಿಗೆ ಅಹ್ಮದಾಬಾದ್ನ ಸಾಬರ್ಮತಿ ಕ್ಷೇತ್ರದಿಂದ ಮಾರ್ಚ್ 1995ರಲ್ಲಿ ಶಾಸಕರಾಗಿ ಚುನಾಯಿತರಾಗಿದ್ದರು. ಆಗ ಕೇವಲ ಕೌನ್ಸಿಲರ್ ಆಗಿದ್ದ ಈಗಿನ ಬಿಜೆಪಿ ಅಧ್ಯಕ್ಷ ಅಮಿತ್ಶಾ ಅವರನ್ನು ಓಝಾ ತಮ್ಮ ಚುನಾವಣಾ ಏಜಂಟ್ ಆಗಿ ನೇಮಿಸಿದ್ದರು. ಮುಂದೆ ಓಝಾ ಸಹಕಾರದಿಂದ ಶಾ ಉಪಚುನಾವಣೆಯೊಂದರಲ್ಲಿ ಸ್ಪರ್ಧಿಸಿ 1997ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದರು.