ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೊಪ್ಪಿಸಲು ಒತ್ತಾಯಿಸಿ ಧರಣಿ
![ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೊಪ್ಪಿಸಲು ಒತ್ತಾಯಿಸಿ ಧರಣಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೊಪ್ಪಿಸಲು ಒತ್ತಾಯಿಸಿ ಧರಣಿ](https://www.varthabharati.in/sites/default/files/images/articles/2016/07/11/bhat_110716_protest1.jpg)
ಮಂಗಳೂರು,ಜು.11: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೊಪ್ಪಿಸುವಂತೆ ಆಗ್ರಹಿಸಿ ದ.ಕ. ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಯಿತು. ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ರಾಜ್ಯ ಬಿಜೆಪಿ ಸದಸ್ಯೆ ಮತ್ತು ಬಾಲಭವನ ಸಮಿತಿ ಸದಸ್ಯೆ ಸುಲೋಚನಾ ಜಿ.ಕೆ. ಭಟ್, ಮಹಿಳಾ ಅಧಿಕಾರಿಗಳಾದ ಶಿಖಾ, ಅನುಪಮಾ ಶೆಣೈ, ರಶ್ಮಿ ಮಹೇಶ್, ಮಂಗಳೂರಿನ ಪಾಲಿಕೆ ಆಯುಕ್ತೆ ಹೆಫ್ಸಿಬಾ ರಾಣಿ ಅವರಂತಹ ದಕ್ಷ ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳ, ವರ್ಗಾವಣೆ, ರಾಜೀನಾಮೆ ಪ್ರಕರಣಗಳು ರಾಜ್ಯದ ಮಹಿಳೆಯರ ಮೇಲಾದ ದಬ್ಬಾಳಿಕೆಯಾಗಿದೆ. ಡಿ.ಕೆ. ರವಿ, ಕಲ್ಲಪ್ಪ ಹಂಡಿಬಾಗ್, ಡಿವೈಎಸ್ಪಿ ಗಣಪತಿ ಅವರಂತಹ ಅಧಿಕಾರಿಗಳು ಆತ್ಮಹತ್ಯೆಗೀಡಾಗುವ ಮೂಲಕ ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲದಂತಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದರು.
ಈಗಾಗಲೇ ರಾಜ್ಯದಲ್ಲಿ ನಡೆದ ನಂದಿತಾ ಕೊಲೆ, ಮಹಿಳಾ ಅಧಿಕಾರಿ ರಶ್ಮಿ ಮೇಲಿನ ಹಲ್ಲೆ ಅಲ್ಲದೇ ಮುಖ್ಯಮಂತ್ರಿಗಳ ತವರೂರಿನಲ್ಲೇ 5 ಪ್ರಕರಣಗಳನ್ನು ಸಿಐಡಿಗೊಪ್ಪಿಸಿದರೂ ತಾರ್ಕಿಕ ಅಂತ್ಯ ಕಂಡಿಲ್ಲ. ಹೀಗಾಗಿ ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೊಪ್ಪಿಸಬೇಕು. ಜಾರ್ಜ್ ರಾಜೀನಾಮೆ ಪಡೆಯಬೇಕು. ತಪ್ಪಿತಸ್ಥರ ರಕ್ಷಣೆ ಬಿಟ್ಟು ಪೊಲೀಸರ ಮನೋಸ್ಥೈರ್ಯವನ್ನು ಹೆಚ್ಚಿಸುವ ಪ್ರಯತ್ನವಾಗಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದರು.
ಪಾಲಿಕೆ ಪ್ರತಿಪಕ್ಷ ನಾಯಕಿ ರೂಪಾ ಡಿ.ಬಂಗೇರ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಭಂಡಾರಿ ಮೊದಲಾದವರು ಮಾತನಾಡಿದರು. ಧರಣಿಯಲ್ಲಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಜಿಲ್ಲಾ ನಾಯಕರಾದ ಉಮಾನಾಥ ಕೋಟ್ಯಾನ್, ಕಿಶೋರ್ ರೈ, ಮ.ನ.ಪಾ ಉಪಮೇಯರ್ ಸುಮಿತ್ರಾ ಕರಿಯ, ಮಹಿಳಾ ಮೋರ್ಚಾ ಪ್ರಮುಖರಾದ ಶಾರದಾ ಆರ್.ರೈ, ಸಂಧ್ಯಾ ವೆಂಕಟೇಶ್, ಪ್ರಭಾ ಮಾಲಿನಿ, ಲಲಿತಾ ಸುಂದರ್, ರಾಜೀವಿ ಕೆಂಪುಮಣ್ಣು, ಪೂಜಾ ಪೈ, ನಮಿತಾ ಶ್ಯಾಮ್, ಧನಲಕ್ಷ್ಮಿ ಗಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.