ಸಫ್ವಾನ್ ಕೊಲೆಯತ್ನ ಪ್ರಕರಣದ ಆರೋಪಿಗಳಿಬ್ಬರ ಬಂಧನ
ಉಳ್ಳಾಲ, ಜು.11: ಪೆರ್ಮನ್ನೂರು ಗ್ರಾಮದ ಕಲ್ಲಾಪು ಪಟ್ಲ ನಿವಾಸಿ ಸಫ್ವಾನ್ ಹಸನ್ನ ಕೊಲೆಯತ್ನ ಪ್ರಕರಣದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಸುರತ್ಕಲ್ ಸಮೀಪ ಬಂಧಿಸಿದ್ದಾರೆ.
ಬೋಂದೇಲ್ನ ನಿತಿನ್ ಶೆಟ್ಟಿ (23) ಹಾಗೂ ಗೌರವ್(24)ಬಂಧಿತ ಆರೋಪಿಗಳು. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 6ಕ್ಕೇರಿದೆ.
ಎ.26ರಂದು ಅಪರಾಹ್ನ 3:20ಕ್ಕೆ ತನ್ನ ಮನೆಯಿಂದ ಬೈಕ್ನಲ್ಲಿ ಹೊರಟು ಮುಖ್ಯರಸ್ತೆಗೆ ಪ್ರವೇಶಿಸುವಷ್ಟರಲ್ಲಿ ಎರಡು ದ್ವಿಚಕ್ರ ವಾಹನದಲ್ಲಿ ಬಂದ ಯುವಕರು ಬೈಕನ್ನು ಹಿಂಬಾಲಿಸಿ ಹಸನ್ರ ತಲೆ, ಕುತ್ತಿಗೆ ಹಾಗೂ ಕೈಗೆ ತಲವಾರಿನಿಂದ ಕಡಿದು ಗಂಭೀರ ಗಾಯಗೊಳಿಸಿ ಕೊಲೆಗೆ ಯತ್ನಿಸಿದ್ದರು. ಗಂಭೀರ ಗಾಯಗೊಂಡಿದ್ದ ಹಸನ್ರನ್ನು ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇನ್ನೂ ಕೂಡಾ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಬಗ್ಗೆ ಹಸನ್ರ ಸಹೋದರ ಅಕ್ಬರ್ ಜುನೈದ್ ಉಳ್ಳಾಲ ಠಾಣೆಗೆ ನೀಡಿದ ದೂರಿನಂತೆ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಾಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದರು. ಇದೀಗ ಬಂಧಿತ ಆರೋಪಿಗಳ ಪೈಕಿ ನಿತಿನ್ ಶೆಟ್ಟಿ ಈ ಹಿಂದೆ ಉರ್ವ ಬಳಿ ನಂದಕುಮಾರ್ ಕೊಲೆ ಪ್ರಕರಣ ಮತ್ತು ಗೌರವ್ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ವೆಲೆನ್ಸಿಯಾದಲ್ಲಿ ನಡೆದ ಪ್ರಶಾಂತ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ಅಲ್ಲದೆ ಮೂಡುಬಿದಿರೆಯ ಮಹಾವೀರ ಕಾಲೆಜಿನ ಬಳಿ ನಡೆದ ದರೋಡೆ ಪ್ರಕರಣದಲ್ಲೂ ಭಾಗಿಯಾಗಿದ್ದರು. ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಸಿಸಿಬಿ ಘಟಕದ ಇನ್ಸ್ಪೆಕ್ಟರ್ ವೆಲೆಂಟೈನ್ ಡಿಸೋಜ, ಎಸ್ಸೈ ಶ್ಯಾಮ್ಸುಂದರ್ ಹಾಗೂ ಸಿಬ್ಬಂದಿ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.