ಮೈಸೂರಿಗೆ ಮತ್ತೆ ದೇಶದ ನಂಬರ್ ಒನ್ ಸ್ವಚ್ಛನಗರದ ಗರಿ
![ಮೈಸೂರಿಗೆ ಮತ್ತೆ ದೇಶದ ನಂಬರ್ ಒನ್ ಸ್ವಚ್ಛನಗರದ ಗರಿ ಮೈಸೂರಿಗೆ ಮತ್ತೆ ದೇಶದ ನಂಬರ್ ಒನ್ ಸ್ವಚ್ಛನಗರದ ಗರಿ](https://www.varthabharati.in/sites/default/files/images/articles/2016/07/12/Mysore.jpg)
ಹೊಸದಿಲ್ಲಿ, ಜು.12: ಉದ್ಯಾನನಗರಿ ಮೈಸೂರು ಮತ್ತೆ ದೇಶದ ನಂಬರ್ ಒನ್ ಸ್ವಚ್ಛನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ಜನವರಿಯಲ್ಲಿ ನಡೆದ ಸಮೀಕ್ಷೆಯಲ್ಲಿ ಜನಸಂಖ್ಯೆ ಮಾನದಂಡದಲ್ಲಿ ಸರಕಾರದ ಅಧಿಕೃತ ಸಮೀಕ್ಷೆ ಮತ್ತು ರೇಂಕಿಂಗ್ ನಿಂದ ಹೊರಗುಳಿದಿದ್ದ ಕೇರಳದ ಪುಟ್ಟ ನಗರ ಅಲಪುಝ ಮತ್ತು ಗೋವಾದ ಪಣಜಿ ಜತೆ ಮೈಸೂರು ಅಗ್ರಸ್ಥಾನವನ್ನು ಹಂಚಿಕೊಂಡಿದೆ. ಆದರೆ ಈ ಬಾರಿ ಸಮೀಕ್ಷೆ ನಡೆಸಿದ್ದು, ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್.
ದೆಹಲಿ ಮೂಲದ ಸರಕಾರಿ ಸಂಸ್ಥೆಯಾದ ಸಿಎಸ್ಇ, ಈ ಮೂರು ನಗರಗಳ ಜತೆ ಇತರ 11 ನಗರಗಳನ್ನು ಕೂಡಾ ನಗರಗಳ ಘನ ತ್ಯಾಜ್ಯ ವಿಲೇವಾರಿ ಮಾನದಂಡದ ಆಧಾರದಲ್ಲಿ ಸ್ವಚ್ಛನಗರ ಎಂದು ಘೋಷಿಸಿದೆ. ರಾಷ್ಟ್ರ ರಾಜಧಾನಿ ನವದೆಹಲಿ, ಬೆಂಗಳೂರು ಹಾಗೂ ಚಂಡೀಗಢ ಸೇರಿದಂತೆ 14 ನಗರಗಳೊಂದಿಗೆ ಪಟ್ಟಿಯ ಕೊನೆಯ ಸ್ಥಾನದಲ್ಲಿದೆ. ಈ ನಗರಗಳು ಸ್ವಚ್ಛವಾಗಿದ್ದರೂ, ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿಲ್ಲ ಎಂದು ಸಿಎಸ್ಇ ವರದಿ ಹೇಳಿದೆ.
"ಘನ ತ್ಯಾಜ್ಯಗಳನ್ನು ಒಂದೆಡೆ ಸುರಿಯುವುದು ಪರಿಹಾರವಲ್ಲ. ಇವುಗಳ ಸಂಸ್ಕರಣೆಯನ್ನು ಈ ನಗರಗಳು ಕಲಿಯಬೇಕು" ಎಂದು ಸೋಮವಾರ ಬಿಡುಗಡೆ ಮಾಡಲಾದ "ನಾಟ್ ಇನ್ ಮೈ ಬ್ಯಾಕ್ ಯಾರ್ಡ್" ವರದಿ ಹೇಳಿದೆ.
ಇದು ನಗರಾಭಿವೃದ್ಧಿ ಇಲಾಖೆ ಕೈಗೊಂಡ ಸಮೀಕ್ಷೆಯಿಂದ ಭಿನ್ನವಾಗಿದ್ದು, ನಗರಾಭಿವೃದ್ಧಿ ಇಲಾಖೆಯ ಸಮೀಕ್ಷೆಯಲ್ಲಿ ಸ್ವಚ್ಛಭಾರತ ಯೋಜನೆಯ ಅಂಶಗಳ ಆಧಾರದಲ್ಲಿ ಸಮೀಕ್ಷೆ ನಡೆಸಲಾಗುತ್ತದೆ.