ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶದ ನಂತರ ಶಕ್ತಿಮಾನ್ ಪ್ರತಿಮೆಯ ಪತ್ತೆಯಿಲ್ಲ
`ಪೊಲೀಸರಿಗಿಂತ ಕುದುರೆಗೆ ಹೆಚ್ಚು ಮಹತ್ವ ನೀಡುತ್ತಿರುವ ಸರಕಾರ'
![ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶದ ನಂತರ ಶಕ್ತಿಮಾನ್ ಪ್ರತಿಮೆಯ ಪತ್ತೆಯಿಲ್ಲ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶದ ನಂತರ ಶಕ್ತಿಮಾನ್ ಪ್ರತಿಮೆಯ ಪತ್ತೆಯಿಲ್ಲ](https://www.varthabharati.in/sites/default/files/images/articles/2016/07/12/shaktimann-759.jpg)
ಡೆಹ್ರಾಡೂನ್ : ಮಾರ್ಚ್ 14 ರಂದು ಬಿಜೆಪಿ ಡೆಹ್ರಾಡೂನ್ ನಗರದಲ್ಲಿ ಆಯೋಜಿಸಿದ್ದ ಪ್ರತಿಭಟನೆಯೊಂದರ ವೇಳೆ ಪಕ್ಷದ ಸಂಸದ ಗಣೇಶ್ ಜೋಷಿಯವರಿಂದ ಗಂಭೀರ ಹಲ್ಲೆಗೊಳಗಾಗಿ ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದ ಪೊಲೀಸ್ ಕುದುರೆ ಶಕ್ತಿಮಾನ್ ಸ್ಮಾರಕಾರ್ಥವಾಗಿ ನಿರ್ಮಿಸಲಾಗಿದ್ದ ಅದರ ಪ್ರತಿಮೆಯನ್ನು ಇಲ್ಲಿನ ವಿಧಾನಸಭಾ ಮಾರ್ಗ್ ಸಮೀಪದಿಂದ ಉತ್ತರಾಖಂಡ ಸರಕಾರ ಸ್ಥಳಾಂತರಿಸಿದೆ. ಸರಕಾರವು ಕರ್ತವ್ಯದ ವೇಳೆ ಪ್ರಾಣ ಕಳೆದುಕೊಂಡ ಪೊಲೀಸರಿಗಿಂತ ಶಕ್ತಿಮಾನ್ ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆಯೆಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ನಂತರ ಸರಕಾರ ಈ ಕ್ರಮ ಕೈಗೊಂಡಿದೆ. ಸೋಮವಾರ ಸಂಜೆ ತನಕ ಅದೇ ಸ್ಥಳದಲ್ಲಿದ್ದ ಕುದುರೆಯ ಪ್ರತಿಮೆ ಮಂಗಳವಾರ ಬೆಳಿಗ್ಗೆ ಕಾಣೆಯಾಗಿ ಬಿಟ್ಟಿದೆ, ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.
ಶಕ್ತಿಮಾನ್ ಸ್ಮರಣಾರ್ಥ ನಗರದಲ್ಲಿ ನಿರ್ಮಿಸಲಾಗಿದ್ದ ಶಕ್ತಿಮಾನ್ ಪಾರ್ಕ್ ಸೋಮವಾರ ಮುಖ್ಯಮಂತ್ರಿ ಹರೀಶ್ ರಾವತ್ ಅವರಿಂದ ಉದ್ಘಾಟನೆಗೊಳ್ಳಬೇಕಿದ್ದರೂ ಅವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸದೇ ಹಿಂದಿರುಗಿದ್ದರು.
ಹದಿಮೂರು ವರ್ಷ ಪ್ರಾಯದ ಶಕ್ತಿಮಾನ್ ಉತ್ತರಾಖಂಡ ಮೌಂಟ್ ಪೊಲೀಸ್ ಪಡೆಯ ಕುದುರೆಯಾಗಿತ್ತು. ಅದರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಿಜೆಪಿ ಸಂಸದ ಜೋಷಿಯನ್ನು ಬಂಧಿಸಲಾಗಿದ್ದರೂ ನಂತರ ಬಿಡುಗಡೆಗೊಳಿಸಲಾಗಿತ್ತು.
ಈ ಶ್ವೇತ ವರ್ಣದ ಕಾಥಿಯಾವಾರಿ ಕುದುರೆ ಎಪ್ರಿಲ್ 20 ರಂದು ಮೃತಪಟ್ಟಿತ್ತು.