ನಿವೇಶನ ರಹಿತರ ಪತ್ತೆಗೆ ಪ್ರಾಮಾಣಿಕ ಸಮೀಕ್ಷೆ ನಡೆಯಲಿ
ನಗರಸಭೆ ಸದಸ್ಯರ ಒತ್ತಾಯ
ಚಿಕ್ಕಮಗಳೂರು, ಜು.12: ನಗರದಲ್ಲಿ ನಿವೇಶನ ರಹಿತರ ಪತ್ತೆಗೆ ಪ್ರಾಮಾಣಿಕವಾದ ಸಮೀಕ್ಷೆ ನಡೆಯಬೇಕು. ಅರ್ಹರಿಗೆ ಅನ್ಯಾಯ ವಾಗದಂತೆ ಎಚ್ಚರ ವಹಿಸಬೇಕು ಎಂದು ನಗರಸಭೆ ಸದಸ್ಯರು ಒತ್ತಾಯಿಸಿದ್ದಾರೆ.
ಸೋಮವಾರ ನಗರಸಭೆ ಅಧ್ಯಕ್ಷ ದೇವರಾಜ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲು ಖಾಸಗಿ ಏಜೆನ್ಸಿ ನೇಮಕ ಮಾಡಿಕೊಳ್ಳುವ ವಿಚಾರದ ಕುರಿತು ಚರ್ಚೆಯಲ್ಲಿ ಭಾಗವಹಿಸಿದ ಬಹುತೇಕ ಸದಸ್ಯರು ಒತ್ತಡಗಳಿಗೆ ಮಣಿದು ಅರ್ಹರಲ್ಲದವರೂ ಪಟ್ಟಿಯಲ್ಲಿ ಸೇರ್ಪಡೆಯಾಗದಿರುವಂತೆ ಮುಂದೆ ನಡೆಯುವ ಸಮೀಕ್ಷೆ ಸಂದರ್ಭದಲ್ಲಿ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು.
ದೇವರಾಜ್ ಶೆಟ್ಟಿ ವಿಚಾರದ ಬಗ್ಗೆ ಸಭೆಗೆ ವಿವರಣೆ ನಿೀಡಿ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ, ನಿವೇಶನಗಳನ್ನು ವಿತರಿಸುವ ಬಗ್ಗೆ ಬೆಂಗಳೂರಿನ ವಿಕಾಸ ಸೌಧದಲ್ಲಿ ಸಭೆ ನಡೆದಿದೆ. ಯೋಜನೆ ಸಂಬಂಧ ವಿಸ್ತೃತ ಸಮೀಕ್ಷೆ ಮಾಡಿ ವರದಿ ಸಲ್ಲಿಸುವಂತೆ ಸರಕಾರ ಸೂಚಿಸಿದೆ. ನಗರದ ವಿವಿಧೆಡೆ ಒಟ್ಟು 27 ಎಕರೆ ಜಾಗದಲ್ಲಿ ಜಿ ಪ್ಲಸ್ ಟು ಮಾದರಿಯ ಮನೆಗಳನ್ನು ನಿರ್ಮಿಸಲು ಸರಕಾರ ಅನುಮೋದನೆ ನೀಡಿದೆ. ಅದಕ್ಕೆ ವಿಸ್ತೃತ ಯೋಜನಾ ವರದಿ ಸಲ್ಲಿಸಬೇಕಿದೆ ಎಂದರು.
ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ಕೆಲವು ಬಿಲ್ಕಲೆಕ್ಟರ್ಗಳು ಸದಸ್ಯರ ಮನೆಗಳಲ್ಲಿ ಕುಳಿತುಕೊಂಡು ಅವರು ಕೊಟ್ಟ ಹೆಸರುಗಳನ್ನೇ ಬರೆದುಕೊಂಡು ಬಂದಿದ್ದಾರೆ. ಪ್ರಾಮಾಣಿಕ ಸರ್ವೇ ಕಾರ್ಯ ನಡೆದಿಲ್ಲ. ಇಲ್ಲಿನ ಮೂಲ ನಿವಾಸಿಗಳಲ್ಲದ ಬೇರೆಡೆಯಿಂದ ಬಂದು ನೆಲೆಸಿರುವ ಬಹಳಷ್ಟು ಜನರಿಂದ ಕೆಲವು ಸದಸ್ಯರೇ ಅರ್ಜಿ ಹಾಕಿಸಿದ್ದಾರೆ. ಇದರಿಂದ ಅರ್ಹರಿಗೆ ಅನ್ಯಾಯವಾಗಿದೆ ಎಂದು ದೂರಿದರು. ಬರೇ ಪಟ್ಟಿಯನ್ನೇ ಮಾಡಿ ನಿವೇಶನಗಳನ್ನೇ ಕೊಡದೆ ಫಲಾನುಭವಿಗಳಿಗೆ ಮೋಸ ಮಾಡಿದ್ದೇವೆ. ಮುಂದಾದರೂ ಅದಕ್ಕೆ ಅವಕಾಶವಾಗದಂತೆ ಎಚ್ಚರವಹಿಸಬೇಕು ಎಂದು ಒ ತ್ತಾಯಿಸಿದರು.
ಈಗ ಒಟ್ಟು 811 ನಿವೇಶನಗಳನ್ನು ರಚಿಸಲಾಗಿದೆ. ಆದರೆ ಮನೆ ನಿವೇಶನಕ್ಕೆ ಬೇಡಿಕೆ ಹೆಚ್ಚಿರುವ ಕಾರಣ ಅದರಲ್ಲಿ ಜಿ ಪ್ಲಸ್ ಟು ಮಾದರಿಯ ಮನೆಗಳನ್ನು ನಿರ್ಮಾಣ ಮಾಡಲು ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಅದಕ್ಕೆ ಈಗ ಅನುಮೋದನೆ ಸಿಕ್ಕಿದೆ. ಜಿ ಪ್ಲಸ್ ಟು ಕಟ್ಟಡ ನಿರ್ಮಾಣದಿಂದ ಒಟ್ಟು 2,291 ಫಲಾನುಭವಿಗಳಿಗೆ ಮನೆಗಳನ್ನು ನೀಡಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಏಜೆನ್ಸಿಯಿಂದ ಸಮೀಕ್ಷೆ ಮಾಡಿಸಲು ಉದ್ದೇಶಿಸಲಾಗಿದೆ ಎಂದರು.
ಹಿಂದೆ ಆಶ್ರಯ ಫಲಾನುಭವಿಗಳಿಗೆ ನಗರಸಭೆಯಿಂದ ನೀಡಲಾದ ತಿಳುವಳಿಕೆ ಪತ್ರವನ್ನೇ ಹಿಡಿದುಕೊಂಡು ಕೆಲವರು ಹೊತ್ತಲ್ಲದ ಹೊತ್ತಿನಲ್ಲೂ ಕುಡಿದು ಫೋನ್ ಮಾಡುತ್ತಾರೆ. ಎಲ್ರೀ ನಮ್ಮ ಆಶ್ರಯ ಮನೆ ಎಂದು ದಬಾಯಿಸುತ್ತಾರೆ. ಮೊದಲು ಅಂತಹವರಿಗೆ ಹಕ್ಕುಪತ್ರ ನೀಡುವ ಕೆಲಸ ಆಗಬೇಕು ಎಂದರು.







