ಭೀಕರ ಭೂಕಂಪದ ಕರಿನೆರಳಲ್ಲಿ ಈಶಾನ್ಯಭಾರತ
ಸಂಭವಿಸಿದಲ್ಲಿ ಹಲವಾರು ನಗರಗಳು ನಾಮಾವಶೇಷಗೊಳ್ಳುವ ಅಪಾಯ
ಢಾಕಾ, ಜು.12: ಬಾಂಗ್ಲಾದೇಶದ ಭೂಗರ್ಭದಲ್ಲಿ ರೂಪುಗೊಳ್ಳುತ್ತಿರುವ ಬೃಹತ್ ಭೂಕಂಪವೊಂದು ಪೂರ್ವ ಭಾರತದ ಹಲವಾರು ನಗರಗಳನ್ನು ನಾಮಾವಶೇಷಗೊಳಿಸುವ ಅಪಾಯವಿದೆಯೆಂದು ನೂತನ ಅಧ್ಯಯನ ವರದಿಯೊಂದು ಮುನ್ನೆಚ್ಚರಿಕೆ ನೀಡಿದೆ.
ಈ ಪ್ರದೇಶದಲ್ಲಿ ಎರಡು ಭೂತಟ್ಟೆಗಳು(ಟೆಕ್ಟೊನಿಕ್ ಪ್ಲೇಟ್ಸ್) ಮೇಲೆ ಒತ್ತಡ ಹೆಚ್ಚುತ್ತಿದ್ದು, ಇದರಿಂದಾಗಿ ಬೃಹತ್ ಭೂಕಂಪ ಸಂಭವಿಸುವ ಸಾಧ್ಯತೆಗಳು ದಟ್ಟವಾಗಿವೆಯೆಂದು ವಿಜ್ಞಾನಿಗಳು ತಿಳಿಸಿದ್ದಾರೆ. ಒಂದು ವೇಳೆ ಭೂಕಂಪವಾದಲ್ಲಿ ಬಾಂಗ್ಲಾ ಹಾಗೂ ಪೂರ್ವ ಭಾರತದ 14 ಕೋಟಿಗೂ ಅಧಿಕ ಜನರು ಬಾಧಿತರಾಗಲಿದ್ದಾರೆ. ಭೂಕಂಪದಿಂದಾಗಿ ಅಪಾರ ಪ್ರಮಾಣದ ನಾಶನಷ್ಟ ಸಂಭವಿಸಲಿದೆ.ಇದರೊಂದಿಗೆ ನದಿಗಳು ಹರಿಯುವ ದಿಕ್ಕು ಕೂಡಾ ಬದಲಾಗಿ ಭಾರೀ ಅನಾಹುತ ಸಂಭವಿಸುವ ಅಪಾಯವಿದೆ. ಈಗಾಗಲೇ ಈ ಪ್ರದೇಶದಲ್ಲಿ ಭೂಪ್ರದೇಶವು ಹೆಚ್ಚುಕಮ್ಮಿ ಸಮುದ್ರಮಟ್ಟದಷ್ಟೇ ಎತ್ತರದಲ್ಲಿದ್ದು, ಭೂಕಂಪವಾದಲ್ಲಿ ಸಮುದ್ರ ಕೂಡಾ ಭೂಪ್ರದೇಶಕ್ಕೆ ನುಗ್ಗುವ ಭೀತಿಯಿದೆಯೆಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಭೂತಟ್ಟೆ (ಟೆಕ್ಟೊನಿಕ್ ಪ್ಲೇಟ್)ಗಳು ಪರಸ್ಪರ ಒಂದಕ್ಕೊಂದು ಒತ್ತಿಕೊಂಡಿರುವಂತಹ ಸ್ಥಿತಿಯಲ್ಲಿವೆ. ಇಂತಹ ಭೂವಲಯಗಳಲ್ಲಿಯೇ ವಿಶ್ವದ ಅತ್ಯಂತ ಭೀಕರ ಭೂಕಂಪಗಳು ಈ ಹಿಂದೆ ಸಂಭವಿಸಿವೆ. 2004ರಲ್ಲಿ 23 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡ ಸುನಾಮಿಯನ್ನು ಸೃಷ್ಟಿಸಿದ ಹಿಂದೂಮಹಾಸಾಗರದ ಭೂಕಂಪ, 2011ರಲ್ಲಿ ಜಪಾನ್ನಲ್ಲಿ 20 ಸಾವಿರ ಮಂದಿಯ ಸಾವಿಗೆ ಕಾರಣವಾದ ಟೊಹೊಕು ಭೂಕಂಪ ಇದಕ್ಕೆ ಪ್ರಮುಖ ಉದಾಹರಣೆಗಳಾಗಿವೆ.
ಈವರೆಗೆ ಇಂತಹ ವಲಯಗಳಲ್ಲಿ ಸಂಭವಿಸಿದ ಭೂಕಂಪದ ಕೇಂದ್ರಬಿಂದುಗಳು ಸಮುದ್ರದ ತಳದಲ್ಲಿದ್ದವು. ಆದರೆ ವಿಜ್ಞಾನಿಗಳು ಮುನ್ಸೂಚನೆ ನೀಡಿರುವ ಭೂಕಂಪವು ಸಂಪೂರ್ಣವಾಗಿ ಭೂಪ್ರದೇಶದ ಕೆಳಗೆ ಸಂಭವಿಸಲಿರುವುದರಿಂದ ವಿನಾಶದ ಪ್ರಮಾಣವು ಎರಡು ಪಟ್ಟು ಅಧಿಕವಾಗಿರುವುದು. ಸಂಭಾವ್ಯ ಭೂಕಂಪದ ತೀವ್ರತೆ 8.2 ರಿಕ್ಟರ್ ಸ್ಕೇಲ್ಗಿಂತಲೂ ಅಧಿಕವಾಗಿರುವುದು ಮತ್ತು 9 ರಿಕ್ಟರ್ಸ್ಕೇಲ್ ತೀವ್ರತೆಯವರೆಗೂ ತಲುಪುವ ಸಾಧ್ಯತೆಯಿದೆಯೆಂದು ಅವರು ಎಚ್ಚರಿಕೆ ನೀಡಿದ್ದಾರೆ.
ಈ ಪ್ರದೇಶದ ಭೂಗರ್ಭದಲ್ಲಿ ಕಳೆದ 400 ವರ್ಷಗಳಿಂದ ಟೆಕ್ಟೊನಿಕ್ ಪ್ಲೇಟ್ಗಳ ನಡುವೆ ಒತ್ತಡವು ರೂಪುಗೊಳ್ಳುತ್ತಿದೆಯೆಂದು ಅಧ್ಯಯನ ತಂಡದ ನೇತೃತ್ವ ವಹಿಸಿರ್ರುರ್ವ್ಙ ಕೊಲಂಬಿಯಾ ವಿವಿಯ ಭೂಭೌತ ತಜ್ಞ ಮೈಕೆಲ್ ಸ್ಟೆಕ್ಲರ್ ತಿಳಿಸಿದ್ದಾರೆ.