ಸಚಿವ ಜಾರ್ಜ್ ವಿರುದ್ಧ ಯಾವುದೇ ಸಾಕ್ಷಾಧಾರಗಳಿಲ್ಲ: ಸಿಎಂ
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ

‘ನಿರಪರಾಧಿ ತಲೆದಂಡ’ ಸರಿಯಲ್ಲ
ಬೆಂಗಳೂರು, ಜು. 13: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ.ಜಾರ್ಜ್ ಹಾಗೂ ಪೊಲೀಸ್ ಅಧಿಕಾರಿಗಳಿಬ್ಬರು ಅವರಿಗೆ ಕಿರುಕುಳ ನೀಡಿರುವ ಬಗ್ಗೆ ಯಾವುದೇ ಸಾಕ್ಷಾಧಾರಗಳಿಲ್ಲ. ಸುದ್ದಿಮಾಧ್ಯಮಕ್ಕೆ ನೀಡಿದ ಸಂದರ್ಶನವನ್ನು ಆಧರಿಸಿ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ನಿಯಮ 69ರಡಿ ಸಾರ್ವಜನಿಕ ಮಹತ್ವದ ಜರೂರು ವಿಷಯ ಮೇಲಿನ ಚರ್ಚೆಗೆ ಸುದೀರ್ಘ ಉತ್ತರ ನೀಡಿದ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್ ಹಾಗೂ ಪೊಲೀಸ್ ಅಧಿಕಾರಿಗಳಾದ ಪ್ರಣಬ್ ಮೋಹಂತಿ ಮತ್ತು ಪ್ರಸಾದ್ ವಿರುದ್ಧ ಎಫ್ಐಆರ್ ದಾಖಲಿಸುವ ಅಗತ್ಯವಿಲ್ಲ. ಹೀಗಾಗಿ ವಿಪಕ್ಷ ನಾಯಕರ ಆರೋಪದಲ್ಲಿ ಹುರುಳಿಲ್ಲ ಎಂದು ತಿರಸ್ಕರಿಸಿದರು.
ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಅವರ ತಂದೆ ಕುಶಾಲಪ್ಪ ಹೇಳಿಕೆ ಆಧರಿಸಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ತನಿಖೆ ವರದಿ ಬಳಿಕ ಸತ್ಯಾಂಶ ಬೆಳಕಿಗೆ ಬರಲಿದ್ದು, ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಘೋಷಿಸಿದರು.
ಪ್ರಶ್ನೆಗೆ ಉತ್ತರ: ಗಣಪತಿ ಮಾಧ್ಯಮಕ್ಕೆ ನೀಡಿರುವ ಹೇಳಿಕೆಯಲ್ಲಿ ಎಲ್ಲಿಯೂ ಸಚಿವ ಜಾರ್ಜ್ ತಮಗೆ ಕಿರುಕುಳ ನೀಡಿದ್ದಾರೆಂದು ಉಲ್ಲೇಖಿಸಿಲ್ಲ. ಆದರೆ, ವಾಹಿನಿ ಸಂದರ್ಶಕ ನಿಮಗೆ ಜೀವ ಭಯವಿಲ್ಲವೇ ಎಂಬ ಪ್ರಶ್ನೆಗೆ ‘ನನಗೇನಾದರೂ ತೊಂದರೆಯಾದರೆ ಸಚಿವ ಜಾರ್ಜ್ ಹಾಗೂ ಇಬ್ಬರು ಅಧಿಕಾರಿಗಳೇ ಕಾರಣ’ ಎಂದು ಹೇಳಿದ್ದಾರೆ ಎಂದು ಪ್ರಕರಣದ ವಿವರಗಳನ್ನು ತಿಳಿಸಿದರು.
ಸಿಬಿಐ ತನಿಖೆ ಅನಗತ್ಯ: ಆತ್ಮಹತ್ಯೆ ಪ್ರಕರಣದ ಸಿಐಡಿ ತನಿಖೆ ಪ್ರಗತಿಯಲ್ಲಿದ್ದು, ನಮ್ಮ ಅಧಿಕಾರಿಗಳ ಮೇಲೆ ಎಲ್ಲರೂ ನಂಬಿಕೆ ಇಡಬೇಕು. ಅಲ್ಲದೆ, ಪೊಲೀಸರ ಆತ್ಮಸ್ಥೈರ್ಯ ಕುಂದಿಸುವ ಪ್ರಯತ್ನ ಸರಿಯಲ್ಲ ಎಂದ ಸಿದ್ದರಾಮಯ್ಯ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವ ಅಗತ್ಯವಿಲ್ಲ ಎಂದು ನಿರಾಕರಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಐಎಎಸ್ ಅಧಿಕಾರಿ ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣ ಸೇರಿದಂತೆ ಎಂಟು ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ. ಹೀಗಾಗಿ ಸಿಬಿಐ ಬಗ್ಗೆ ನಮ್ಮ ಸರಕಾರಕ್ಕೆ ಯಾವುದೇ ಭಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಆಡಳಿತಾವಧಿಯಲ್ಲಿ ಅಕ್ರಮ ಗಣಿಗಾರಿಕೆ ಸೇರಿದಂತೆ ಒಂದು ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಿಲ್ಲ. ಅಲ್ಲದೆ, ಸಿಬಿಐಯನ್ನು ‘ಚೋರ್ ಬಚಾವೋ ಸಂಸ್ಥೆ’ ಎಂದು ಟೀಕೆ ಮಾಡಿದ್ದರು. ಕೇಂದ್ರದಲ್ಲಿ ಮೋದಿ ಪ್ರಧಾನಿ ಆದ ಕೂಡಲೇ ಆ ಸಂಸ್ಥೆ ಪವಿತ್ರ ಗಂಗಾನದಿಯಂತೆ ಶುದ್ಧೀಕರಣಗೊಂಡಿದ್ದೇಗೆ ಎಂದು ಪ್ರಶ್ನಿಸಿದರು.
ವಿಷಾದ: ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಅವರ ತಂದೆ ಕುಶಾಲಪ್ಪ ಅವರ ಹೇಳಿಕೆಯನ್ನು ಆಧರಿಸಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉಲ್ಲೆಖಿಸಿದ್ದಾರೆ. ಸರಕಾರದ ನಿಲುವೇನಲ್ಲ ಎಂದು ಸ್ಪಷ್ಟಣೆ ನೀಡಿದ ಅವರು, ನಮಗೂ ಮಾನವೀಯತೆಯಿದೆ. ಯಾವುದೇ ಹೆಣ್ಣು ಮಕ್ಕಳನ್ನು ತೇಜೋವಧೆ ಮಾಡುವ ಕೀಳುಮಟ್ಟಕ್ಕೆ ಇಳಿಯುವುದಿಲ್ಲ.
ಈ ಹೇಳಿಕೆಯಿಂದ ಗಣಪತಿ ಅವರ ಪತ್ನಿ ಪಾವನಾ ಅವರ ಮನಸ್ಸಿಗೆ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ರಾಜಕೀಯ ಲಾಭಕ್ಕಾಗಿ ದುರುದ್ದೇಶದಿಂದ ಹೇಳಿಕೆ ನೀಡಿಲ್ಲ. ತೇಜೋವಧೆ ಸಂಸ್ಕೃತಿ ನಮ್ಮದಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ತಲೆದಂಡ ಅಗತ್ಯವಿಲ್ಲ: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ.ಜಾರ್ಜ್ ಅವರ ಪಾತ್ರವಿಲ್ಲ. ಆದುದರಿಂದ ಸಚಿವ ಜಾರ್ಜ್ ರಾಜೀನಾಮೆ ಅಗತ್ಯವಿಲ್ಲ. ನಿರಪರಾಧಿಯ ತಲೆದಂಡ, ತೇಜೋವಧೆ ಸಲ್ಲದು ಎಂದು ಸಿದ್ದರಾಮಯ್ಯ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಜಾರ್ಜ್ ಗೃಹ ಸಚಿವರಾದಾಗಿನಿಂದಲೂ ವಿಪಕ್ಷಗಳು ನೂರು ಬಾರಿ ಅವರ ರಾಜೀನಾಮೆ ಕೇಳಿದ್ದಾರೆ. ಆದರೆ, ನಿರಪರಾಧಿ ರಾಜೀನಾಮೆ ಕೇಳುವುದು ಸರಿಯಲ್ಲ ಎಂದ ಸಿದ್ದರಾಮಯ್ಯ, ತನಿಖೆಯ ಬಳಿಕ ತಪ್ಪಿತಸ್ಥರ ವಿರುದ್ಧ ಅದು ಮಂತ್ರಿ ಅಥವಾ ಅಧಿಕಾರಿ ಯಾರೇ ಆಗಿದ್ದರು ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.







