ಕೊಲ್ಯ: ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ತ್ಯಾಜ್ಯಗಳ ರಾಶಿ
ವಿಲೇವಾರಿಗೆ ಕ್ರಮ ಕೈಗೊಳ್ಳದ ಪಂಚಾಯತ್ ವಿರುದ್ಧ ಆಕ್ರೋಶ
![ಕೊಲ್ಯ: ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ತ್ಯಾಜ್ಯಗಳ ರಾಶಿ ಕೊಲ್ಯ: ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ತ್ಯಾಜ್ಯಗಳ ರಾಶಿ](https://www.varthabharati.in/sites/default/files/images/articles/2016/07/13/DSC_1572.jpg)
ಉಳ್ಳಾಲ, ಜು. 13: ಸೋಮೇಶ್ವರ ಗ್ರಾಮ ಪಂಚಾಯತ್ನಿಂದ ಕಸ ವಿಲೇವಾರಿಗೆ ಸರಿಯಾದ ವ್ಯವಸ್ಥೆ ಇಲ್ಲದಿರುವುದರಿಂದ ಸಾರ್ವಜನಿಕರು ಎಸೆದಿರುವ ತ್ಯಾಜ್ಯಗಳು ಕೊಲ್ಯದ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಇಕ್ಕೆಲಗಳಲ್ಲಿ ರಾಶಿ ಬಿದ್ದಿದ್ದು, ವಿಲೇವಾರಿಗೆ ಕ್ರಮ ಕೈಗೊಳ್ಳದ ಪಂಚಾಯತ್ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಸೋಮೇಶ್ವರ ಪಂಚಾಯತ್ಗೊಳಪಟ್ಟ ಕೊಲ್ಯದ ಮಸೀದಿ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಇಕ್ಕೆಲಗಳಲ್ಲಿ ಸಾರ್ವಜನಿಕರು ಕಸಗಳನ್ನು ಎಸೆದು ಹೋಗುವುದು ಸಾಮಾನ್ಯವಾಗಿ ಬಿಟ್ಟಿದೆ. ಅರ್ಧ ಕಿಲೋ ಮೀಟರ್ ಅಂತರದಲ್ಲೇ ಮೂರು ಕಡೆ ಕಸದ ರಾಶಿಗಳು ಕಾಣುತ್ತಿದೆ. ತಿಂಗಳು ಕಳೆದಂತೆ ಈ ರಾಶಿಯ ಗಾತ್ರ ಹೆಚ್ಚಾಗುತ್ತಿದ್ದರೂ ಪಂಚಾಯತ್ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ.
ಇದಲ್ಲದೆ ಹೆದ್ದಾರಿ ಪಕ್ಕದಲ್ಲಿ ಹಾದು ಹೋಗುವ ಅಂಬಿಕಾ ರಸ್ತೆಯ ಇಕ್ಕೆಲಗಳ ಚರಂಡಿಗಳಲ್ಲೂ ತ್ಯಾಜ್ಯ ತುಂಬಿದ ಚೀಲಗಳು ಕಂಡುಬಂದಿವೆ. ಈ ಚರಂಡಿಗಳಲ್ಲಿ ಮಳೆಗಾಲದಲ್ಲಿ ನೀರು ಸರಿಯಾಗಿ ಹಾದುಹೋಗಲು ಸಾಧ್ಯವಾಗದೆ, ರಸ್ತೆಗಳಲ್ಲಿ ಹರಿಯುವಂತಾಗಿದೆ. ಅಂಬಿಕಾ ರಸ್ತೆಯು ಉಳ್ಳಾಲ ಮತ್ತು ಸೋಮೇಶ್ವರ ಎರಡೂ ಪಂಚಾಯತ್ಗೆ ಗಡಿ ಪ್ರದೇಶವಾಗಿರುವುದರಿಂದ ಈ ರಸ್ತೆ ಹಾದು ಹೋಗುವ ಒಂದು ಪ್ರದೇಶವು ಉಳ್ಳಾಲ ವ್ಯಾಪ್ತಿಗೆ ಸೇರುವುದರಿಂದ ಈ ಪ್ರದೇಶಕ್ಕೆ ಉಳ್ಳಾಲ ನಗರಸಭೆಯಿಂದ ಕಸ ವಿಲೇವಾರಿಗೆ ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದರೆ, ಇದೇ ರಸ್ತೆ ಹಾದು ಹೋಗುವ ಇನ್ನೊಂದು ಪ್ರದೇಶವು ಸೋಮೇಶ್ವರ ಪಂಚಾಯತ್ ವ್ಯಾಪ್ತಿಗೆ ಒಳಪಡುವುದರಿಂದ ಇಲ್ಲಿನ ನಿವಾಸಿಗಳು ಕಳೆದ ಹಲವು ತಿಂಗಳುಗಳಿಂದ ಕಸ ವಿಲೇವಾರಿಯ ವ್ಯವಸ್ಥೆಯಿಲ್ಲದೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆ ಇಲ್ಲದಿದ್ದುದರಿಂದ ಪರಿಸರವಾಸಿಗಳು ರಾತ್ರಿ ವೇಳೆಯಲ್ಲಿ ಹೆದ್ದಾರಿಯ ಅಂಗಡಿ- ಮುಂಗಟ್ಟುಗಳು, ಹೋಟೆಲ್ಗಳ ಎದುರು ತ್ಯಾಜ್ಯಗಳನ್ನು ಎಸೆದು ಹೋಗುತ್ತಿದ್ದಾರೆ ಎಂಬ ಆರೋಪಗಳು ಸೋಮೇಶ್ವರ ಪಂಚಾಯತ್ ವಿರುದ್ಧ ಕೇಳಿ ಬಂದಿದೆ. ಒಟ್ಟಾರೆ ಮಳೆಗಾಲ ಪ್ರಾರಂಭವಾಗಿ ತಿಂಗಳು ಕಳೆದರೂ ಇಂತಹ ರಾಶಿ ಹಾಕಲಾಗಿರುವ ತ್ಯಾಜ್ಯಗಳು ವಿಲೇವಾರಿಯಾಗದಿರುವುದರಿಂದ ಕೊಳೆತು ನಾರುತ್ತಿದ್ದು, ರೋಗಗಳಿಗೆ ಆಹ್ವಾನ ನೀಡುತ್ತಿದೆ ಎಂದು ಆರೋಪಿಸಿರುವ ಸ್ಥಳೀಯರು, ಕೊಲ್ಯದ ರಾಷ್ಟ್ರೀಯ ಹೆದ್ದಾರಿ 66ರ ಹಾಗೂ ಅಂಬಿಕಾ ರಸ್ತೆಗಳ ಇಕ್ಕೆಲಗಳಲ್ಲಿ ಹಾಕಿರುವ ತ್ಯಾಜ್ಯಗಳನ್ನು ಪ್ರತಿದಿನ ವಿಲೇವಾರಿ ಮಾಡಲು ಪಂಚಾಯತ್ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿರುವ ಮಾರುತಿ ಸುಜುಕಿ ಶೋರೋಂ ಎದುರುಗಡೆಯೂ ತ್ಯಾಜ್ಯಗಳ ರಾಶಿ ಇದ್ದು, ವಿಲೇವಾರಿಯಾಗದೆ ಹಾಗೇ ಉಳಿದುಕೊಂಡಿದೆ. ಈ ಪ್ರದೇಶವು ಉಳ್ಳಾಲ ನಗರಸಭೆ ವ್ಯಾಪ್ತಿಗೆ ಬರುವುದರಿಂದ ಉಳ್ಳಾಲ ನಗರ ಸಭೆಯವರು ಕಸ ತೆರವಿಗೆ ಕ್ರಮ ಕೈಗೊಳ್ಳಬೇಕೆಂದೂ ನಾಗರಿಕರು ಒತ್ತಾಯಿಸಿದ್ದಾರೆ.
15 ದಿನಗಳಿಗೊಮ್ಮೆ ವಿಲೇವಾರಿ ಮಾಡುತ್ತಿದ್ದೇವೆ: ಪಿಡಿಒ
ಹೆದ್ದಾರಿ ಇಕ್ಕೆಲಗಳಲ್ಲಿ ಅಥವಾ ಪಂಚಾಯತ್ ವ್ಯಾಪ್ತಿಯಲ್ಲಿ ಕಂಡು ಬರುತ್ತಿರುವ ತ್ಯಾಜ್ಯಗಳನ್ನು 15 ದಿನಗಳಿಗೊಮ್ಮೆ ವಿಲೇವಾರಿ ಮಾಡುತ್ತಿರುವುದಾಗಿ ಸೋಮೇಶ್ವರ ಪಂಚಾಯತ್ ಪಿಡಿಒ ಮನೋಹರ್ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.
ತಿಂಗಳುಗಳಿಂದ ವಿಲೇವಾರಿ ಆಗುತ್ತಿಲ್ಲ ಎಂಬ ಸಾರ್ವಜನಿಕರ ಆರೋಪದಲ್ಲಿ ಸತ್ಯಾಂಶವಿಲ್ಲ. ಹೆದ್ದಾರಿಗಳಲ್ಲಿ ರಾಶಿ ಹಾಕಲಾಗಿರುವ ತ್ಯಾಜ್ಯಗಳನ್ನು ಎಷ್ಟೇ ವಿಲೇವಾರಿ ಮಾಡಲಾಗುತ್ತಿದ್ದರೂ ಮರು ದಿನ ಅಷ್ಟೇ ಪ್ರಮಾಣದಲ್ಲಿ ಶೇಖರಣೆಯಾಗುತ್ತದೆ. ಇದು ನೋಡುವವರಿಗೆ ವಿಲೇವಾರಿಯಾಗದಂತೆ ಕಾಣುತ್ತದೆ ಎಂದವರು ಹೇಳಿದ್ದಾರೆ.
ಕಸ ವಿಲೇವಾರಿಗೆ ಸೋಮೇಶ್ವರ ಪಂಚಾಯತ್ನಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಇದಕ್ಕೆಂದೇ ಪಂಚಾಯತ್ಗೆ ಪ್ರತ್ಯೇಕ ವಾಹನದ ವ್ಯವಸ್ಥೆ ಇಲ್ಲ. ಆದರೂ ಪಂಚಾಯತ್ ವತಿಯಿಂದ ಖಾಸಗಿ ವಾಹನಗಳಿಗೆ ನಿರ್ದಿಷ್ಟ ಹಣ ಗೊತ್ತುಪಡಿಸಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಮನೋಹರ್ ತಿಳಿಸಿದ್ದಾರೆ.