ಕಾಶ್ಮೀರ: ಮೃತರ ಸಂಖ್ಯೆ 34ಕ್ಕೆ ಏರಿಕೆ
ಶ್ರೀನಗರದಲ್ಲಿ ಗೀಲಾನಿ ಬಂಧನ
ಶ್ರೀನಗರ, ಜು.13: ಶ್ರದ್ಧಾಂಜಲಿ ಮೆರವಣಿಗೆ ಯೊಂದರ ನೇತೃತ್ವ ವಹಿಸಲು ಶ್ರೀನಗರದ ತನ್ನ ನಿವಾಸದಿಂದ ಹೊರಬಂದಿದ್ದ ಹುರಿಯತ್ ಕಾನ್ಫರೆನ್ಸ್ನ ಅಧ್ಯಕ್ಷ ಸೈಯದ್ ಅಲಿ ಗೀಲಾನಿಯನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.
ಭಯೋತ್ಪಾದಕ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಸಾವಿರಾರು ಜನರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಘರ್ಷಣೆಯನ್ನು ಅನಿರ್ದಿಷ್ಟಾವಧಿ ಗೃಹ ಬಂಧನದಲ್ಲಿರಿಸಲಾಗಿರುವ ಪ್ರತ್ಯೇಕತಾವಾದಿ ನಾಯಕ ಗೀಲಾನಿ ಖಂಡಿಸಿದ್ದಾರೆ.
ಇದು ಭದ್ರತಾ ಪಡೆಗಳ ಬರ್ಬರ ಕೃತ್ಯವಾಗಿದೆ. ಭಾರತ ಕೇವಲ ಕಾಶ್ಮೀರದ ನೆಲವನ್ನು ಬಯಸುತ್ತಿದೆ ಹಾಗೂ ಇಲ್ಲಿನ ಜನತೆಯನ್ನು ವ್ಯವಸ್ಥಿತವಾಗಿ ಕೊಲ್ಲ ಬಯಸಿದೆಯೆಂಬುದು ಸ್ಪಷ್ಟವೆಂದು ಅವರು ಆರೋಪಿಸಿದ್ದಾರೆ.
ಕಣಿವೆಯಲ್ಲಿ ನಾಲ್ಕು ದಿನಗಳ ಕಾಲ ನಡೆದ ಹಿಂಸಾಚಾರದಲ್ಲಿ 34 ಮಂದಿ ಮೃತರಾಗಿದ್ದು, 1,300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಅವರಲ್ಲಿ ಅನೇಕರು ಮಕ್ಕಳು ಹಾಗೂ ಯುವಕರಾಗಿದ್ದಾರೆ.
ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾಪಡೆಗಳು ಅತಿರೇಕ ಬಲವನ್ನು ಉಪ ಯೋಗಿಸುತ್ತಿವೆಯೆಂದು ಕಾರ್ಯಕರ್ತರು ಹಾಗೂ ಸ್ಥಳೀಯರು ಆರೋಪಿಸಿದ್ದರೆ, ತಾವು ಗರಿಷ್ಠ ಸಂಯಮ ತೋರಿಸುತ್ತಿದ್ದೇವೆಂದು ಭದ್ರತಾ ಪಡೆಗಳು ಹೇಳಿವೆ.