ಎಸ್ಒಸಿ ಜವಾನರ ಮಾನಸಿಕ ಪರೀಕ್ಷೆಗೆ ಎನ್ಸಿಎಸ್ಟಿ ಸಲಹೆ
ಕಂಧಮಲ್ನಲ್ಲಿ ಗ್ರಾಮಸ್ಥರ ಹತ್ಯೆ
ಭುವನೇಶ್ವರ, ಜು.13: ಕಂಧಮಲ್ನಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯೊಂದರ ವೇಳೆ ಐವರು ಗ್ರಾಮಸ್ಥರನ್ನು ಗುಂಡಿಕ್ಕಿ ಕೊಂದ ಘಟನೆಯಲ್ಲಿ ಶಾಮೀಲಾಗಿದ್ದರೆಂದು ಆರೋಪಿಸಲಾಗಿರುವ ವಿಶೇಷ ಕಾರ್ಯಾಚರಣೆ ಗುಂಪಿನ(ಎಸ್ಒಜಿ) ಜವಾನರನ್ನು ಮಾನಸಿಕ ಪರೀಕ್ಷೆಗೆ ಒಳಪಡಿಸುವಂತೆ ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗವು ಒಡಿಶಾ ಸರಕಾರಕ್ಕಿಂದು ಸಲಹೆ ನೀಡಿದೆ.
ಹತ್ಯೆಗಳಲ್ಲಿ ಒಳಗೊಂಡಿರುವ ಜವಾನರನ್ನು ಖಂಡಿತವಾಗಿಯೂ ಮಾನಸಿಕ ಪರೀಕ್ಷೆಗೆ ಒಳಪಡಿಸಬೇಕು. ಯಾವುದೇ ಪ್ರಚೋದನೆಯಿಲ್ಲದೆ ಅವರು ಅಮಾಯಕರ ಮೇಲೆ ಗುಂಡು ಹಾರಿಸಿದ್ದಾರೆ. ಅವರ ಮೇಲೆ ಯಾರೂ ದಾಳಿ ನಡೆಸಿರಲಿಲ್ಲ. ಇದು ತಪ್ಪು ಎಂದು ಕಂಧಮಲ್ ಜಿಲ್ಲೆಯ ಬಲಿಗುಡದಲ್ಲಿ, ಮೃತರ ಕುಟುಂಬಗಳನ್ನು ಭೇಟಿಯಾದ ಬಳಿಕ ಎನ್ಸಿಎಸ್ಟಿ ಅಧ್ಯಕ್ಷ ರಾಮೇಶ್ವರ್ ಒರಾವೋನ್ ಸುದ್ದಿಗಾರರಿಗೆ ತಿಳಿಸಿದರು.
ಶುಕ್ರವಾರ ರಾತ್ರಿ ನಡೆದಿದ್ದ ಕಾರ್ಯಾಚರಣೆಯ ವೇಳೆ ಗುಂಡಿನ ಚಕಮಕಿಯ ನಡುವೆ ಸಿಲುಕಿ ಗ್ರಾಮಸ್ಥರು ಪ್ರಾಣ ಬಿಟ್ಟಿದ್ದಾರೆಂಬ ಪೊಲೀಸರ ಕತೆಯನ್ನು ತಿರಸ್ಕರಿಸಿದ ಅವರು, ಅಂತಹದು ಸಂಭವಿಸಲೇ ಇಲ್ಲ. ಇದೊಂದು ದುರದೃಷ್ಟಕರ ಘಟನೆಯಾಗಿದೆ. ಅದು ನಡೆಯಬಾರದಿತ್ತು ಎಂದರು.
ಜವಾನರು ಏಕಪಕ್ಷೀಯವಾಗಿ ಗುಂಡು ಹಾರಿಸಿದರೆಂಬುದನ್ನು ಪೊಲೀಸರು ಹಾಗೂ ಜಿಲ್ಲಾಡಳಿತದ ಸಹಿತ ಯಾರೂ ವಿರೋಧಿಸಿಲ್ಲ. ಅಲ್ಲಿ ಯಾವುದೇ ಪ್ರಚೋದನೆ ಇರಲಿಲ್ಲ. ಅಮಾಯಕರ ಹತ್ಯೆ ನಡೆದಿದೆಯೆಂಬುದನ್ನು ಮೃತರ ಕುಟುಂಬಿಕರು ಹಾಗೂ ಆಡಳಿತ ಒಪ್ಪಿಕೊಂಡಿದೆಯೆಂದು ಒರಾವೋನ್ ಹೇಳಿದರು.