ಜು.29ರಂದು ಬ್ಯಾಂಕ್ ಮುಷ್ಕರ
ಚೆನ್ನೈ, ಜು.13: ಬ್ಯಾಂಕಿಂಗ್ ಉದ್ಯಮಕ್ಕೆ ಸಂಬಂಧಿಸಿದ ಸರಕಾರದ ನೀತಿಯ ವಿರುದ್ಧ ದೇಶಾದ್ಯಂತದ ಸುಮಾರು 10 ಲಕ್ಷ ಬ್ಯಾಂಕರ್ಗಳು ಜು.29ರಂದು ಮುಷ್ಕರವೊಂದನ್ನು ನಡೆಸುವ ನಿರೀಕ್ಷೆಯಿದೆಯೆಂದು ಅಖಿಲಭಾರತ ಬ್ಯಾಂಕ್ ನೌಕರರ ಸಂಘಟನೆಯ(ಎಐಬಿಇಎ) ಉನ್ನತ ನಾಯಕರೊಬ್ಬರು ತಿಳಿಸಿದ್ದಾರೆ.
ಸುಮಾರು 10 ಲಕ್ಷ ನೌಕರರು ಹಾಗೂ ಅಧಿಕಾರಿಗಳು ಸದಸ್ಯರಾಗಿರುವ 9 ಒಕ್ಕೂಟಗಳನ್ನೊಳಗೊಂಡ ಬ್ಯಾಂಕ್ ಒಕ್ಕೂಟಗಳ ಸಂಯುಕ್ತ ವೇದಿಕೆಯ(ಯುಎಫ್ಬಿಯು) ಕರೆಯಂತೆ ಬ್ಯಾಂಕರ್ಗಳು ಕೇಂದ್ರ ಸರಕಾರದ ಜನ ವಿರೋಧಿ ಬ್ಯಾಂಕಿಂಗ್ ಸುಧಾರಣಾ ನೀತಿಯನ್ನು ವಿರೋಧಿಸಿ ಮುಷ್ಕರ ನಡೆಸಲಿದ್ದಾರೆಂದು ಎಐಬಿಇಎಯ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಬುಧವಾರ ಹೇಳಿದ್ದಾರೆ.
ಸಾರ್ವಜನಿಕ ವಲಯದ ಬ್ಯಾಂಕ್ಗಳು, ಹಳೆಯ ಖಾಸಗಿ ಬ್ಯಾಂಕ್ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು, ವಿದೇಶಿ ಬ್ಯಾಂಕ್ಗಳು ಹಾಗೂ ಸಹಕಾರಿ ಬ್ಯಾಂಕ್ಗಳ ನೌಕರರು ಮುಷ್ಕರದಲ್ಲಿ ಭಾಗವಹಿಸಲಿರುವರೆಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಯುಎಫ್ಬಿಯು ಮಂಗಳ ವಾರ ಭಾರತೀಯ ಬ್ಯಾಂಕರ್ಗಳ ಸಂಘಟನೆಗೆ ಮುಷ್ಕರಕ್ಕಾಗಿ ನೋಟಿಸ್ ನೀಡಿದೆಯೆಂದು ವೆಂಕಟಾಚಲಂ ಹೇಳಿದ್ದಾರೆ.