ಹೊರಗುತ್ತಿಗೆ ಸಿಬ್ಬಂದಿ ಖಾಯಮಾತಿಗಾಗಿ ಧರಣಿ
ನೌಕರರಿಗೆ ಕನಿಷ್ಠ ವೇತನ ನೀಡದ ಸಿಮ್ಸ್ ಆಡಳಿತ ಮಂಡಳಿ
ಶಿವಮೊಗ್ಗ, ಜು. 13: ನಗರದ ಸರಕಾರಿ ಮೆಡಿಕಲ್ ಕಾಲೇಜ್ (ಸಿಮ್ಸ್ಸ್)ನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿ, ಆಸ್ಪತ್ರೆಯ ಗುತ್ತಿಗೆ ಕಾರ್ಮಿಕರ ಸಂಘವು ಕಾಲೇಜು ಮುಂಭಾಗ ಧರಣಿ ನಡೆಸಿತು. ಈ ಸಂದರ್ಭ ಶಾಂತವೇರಿ ಗೋಪಾಲಗೌಡ ಟ್ರಸ್ಟ್ ಕೂಡ ಧರಣಿಗೆ ಬೆಂಬಲ ಸೂಚಿಸಿತು.
ಸಿಮ್ಸ್ ಆಡಳಿತದ ಸರಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಕಳೆದ 10 - 15 ವರ್ಷಗಳಿಂದ ನೂರಾರು ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲಸಕ್ಕೆ ತಕ್ಕಂತೆ ವೇತನ-ಸೌಲಭ್ಯಗಳು ಸಿಗುತ್ತಿಲ್ಲ. ಕಾರ್ಮಿಕ ಇಲಾಖೆ ನಿಗದಿಪಡಿಸಿದ ಕನಿಷ್ಠ ವೇತನವನ್ನೂ ಸಹ ನೀಡದೆ ಸಿಬ್ಬಂದಿಗೆ ಶೋಷಣೆ ಮಾಡಲಾಗುತ್ತಿದೆ ಎಂದು ಸಂಘಟನೆ ಆರೋಪಿಸಿದೆ. ಕಾರ್ಮಿಕ ಇಲಾಖೆಯು 2016 ಜ.14 ರಂದು ಸರಕಾರಿ ಅಧಿಸೂಚನೆ ಹೊರಡಿಸಿ, ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ವೇತನವನ್ನು ಸಿಬ್ಬಂದಿಯ ವೃತ್ತಿಗೆ ಅನುಸಾರವಾಗಿ ಪಾವತಿಸಬೇಕು. ಜೊತೆಯಲ್ಲಿ ಕಾರ್ಮಿಕ ಇಲಾಖೆ ನಿಗದಿಪಡಿಸಿದ ಮೂಲಸೌಕರ್ಯಗಳನ್ನು ಕಡ್ಡಾಯವಾಗಿ ನೀಡಬೇಕೆಂದು ರಾಜ್ಯದ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಿದೆ. ಆದರೆ ಸಿಮ್ಸ್ ಆಡಳಿತ ಮಂಡಳಿಯು ತನ್ನ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನವೂ ನೀಡದೆ ನಿರಂತರವಾಗಿ ಅನ್ಯಾಯ ಮಾಡುತ್ತಿದೆ. ಕಾರ್ಮಿಕ ನಿಯಾಮಾವಳಿಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯ ಸರಕಾರ ಹೊರಗುತ್ತಿಗೆ ನೇಮಕಾತಿ ರದ್ದುಗೊಳಿಸಬೇಕು. ಈ ಹೊರಗುತ್ತಿಗೆ ವ್ಯವಸ್ಥೆಯಿಂದ ಕಾರ್ಮಿಕರಿಗೆ ಆಗುತ್ತಿರುವ ಬವಣೆ ತಪ್ಪಿಸಬೇಕು. ಸರಕಾರ ಇನ್ನು ಮುಂದೆ ಎಲ್ಲ ಇಲಾಖೆಗಳಲ್ಲಿಯೂ ಸರಕಾರಿ ಹುದ್ದೆಗಳನ್ನು ಖಾಯಮಾತಿ ಆಧಾರದ ಮೇಲೆ ನೇಮಕಾತಿ ಮಾಡುವ ಮೂಲಕ, ಹೊರಗುತ್ತಿಗೆಯ ಗುತ್ತಿಗೆದಾರರಿಗೆ ಮಾತ್ರ ಲಾಭ ಮಾಡಿಕೊಡುವ ಈ ವ್ಯವಸ್ಥೆಯನ್ನು ಕೈಬಿಡಬೇಕೆಂದು ಸಂಘಟನೆ ಆಗ್ರಹಿಸಿದೆ. ಧರಣಿಯಲ್ಲಿ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ, ಮಾಜಿ ಎಂಎಲ್ಸಿ ಜಿ. ಮಾದಪ್ಪಮತ್ತಿತರರು ಉಪಸ್ಥಿತರಿದ್ದರು. ಪ್ರವಾಸೋದ್ಯಮ ಅಭಿವೃದ್ಧಿಗೆ ನೂತನ ಡಿಸಿ ಸಹಕಾರಿ ಚಿಕ್ಕಮಗಳೂರು, ಜು.13: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಪ್ರವಾಸೋದ್ಯಮ ಸ್ಥಳಗಳ ಅಭಿವೃದ್ಧಿಗೆ ಜಿಲ್ಲಾಧಿಕಾರಿ ಜಿ.ಸತ್ಯವತಿ ನೂತನವಾಗಿ ಅಧಿಕಾರ ವಹಿಸಿಕೊಂಡಿರುವುದು ಸಹಕಾರಿಯಾಗಲಿದೆ ಎಂದು ಜಿಲ್ಲಾ ಹೋಂ ಸ್ಟೇ ಮಾಲಕರ ಸಂಘದ ಅಧ್ಯಕ್ಷ ಸಂಪತ್ ಬ್ಯಾರವಳ್ಳಿ ತಿಳಿಸಿದ್ದಾರೆ.
ಅವರು ಇಂದು ಹೋಂ ಸ್ಟೇ ಮಾಲಕರ ಸಂಘದಿಂದ ನೂತನ ಜಿಲ್ಲಾಧಿಕಾರಿಗಳಿಗೆ ಹೂ ಗುಚ್ಛ ನೀಡಿ ಸ್ವಾಗತಿಸಿ ನಂತರ ಮಾತನಾಡಿ, ಈ ಜಿಲ್ಲೆ ಪ್ರಕೃತಿದತ್ತವಾಗಿ ರಾಜ್ಯದಲ್ಲಿಯೇ ಅತ್ಯಂತ ಗಮನ ಸೆಳೆದಿದೆ. ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಕಲ್ಲತ್ತಗಿರಿ ಸೇರಿದಂತೆ ರಾಷ್ಟ್ರದ ಗಮನ ಸೆಳೆದಿರುವ ಪುಣ್ಯಕ್ಷೇತ್ರಗಳನ್ನು ಒಳಗೊಂಡಿದೆ.
ಜಿಲ್ಲಾಧಿಕಾರಿ ಈ ಹಿಂದೆ ಪ್ರವಾಸೋದ್ಯಮ ಇಲಾಖೆಯ ನಿರ್ದೆೇಶಕರಾಗಿ ಕರ್ತವ್ಯ ನಿರ್ವಹಿಸಿರುವುದರಿಂದ ರಾಜ್ಯದಲ್ಲಿನ ಪ್ರವಾಸಿ ಸ್ಥಳಗಳ ಬಗ್ಗೆ ಸಂಪೂರ್ಣ ಮಾಹಿತಿ ಇದ್ದು ಹೋಂ ಸ್ಟೇ, ರೆಸಾರ್ಟ್, ಹೊಟೇಲ್ ಉದ್ಯಮಗಳು ಅದರ ಆಗು ಹೋಗುಗಳ ಬಗ್ಗೆಯೂ ತಿಳಿದಿರುವುದರಿಂದ ಜಿಲ್ಲೆಯ ಪ್ರವಾಸೋದ್ಯಮ ಅಭಿವದ್ಧಿಗೆ ಹೆಚ್ಚು ಸಹಕಾರಿಯಾಗಲಿವೆ ಎಂದು ತಿಳಿಸಿದರು. ನಿರ್ದೇಶಕ ಹೊಲದಗದ್ದೆ ಗಿರೀಶ್ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಕಾಫಿ ಬೆಳೆಗಾರರಿಗೆ ಹೋಂ ಸ್ಟೇಗಳು ಪರ್ಯಾಯ ಉದ್ಯಮವಾಗಿ ಹೊರ ಹೊಮ್ಮಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೂ ಹೆಚ್ಚು ಸಹಕಾರಿಯಾಗಿದೆ. ಮಲೆನಾಡಿನ ಪ್ರಕೃತಿದತ್ತವಾದ ಪ್ರವಾಸೋದ್ಯಮ ಕೇಂದ್ರಗಳು ರಾಜ್ಯ ಹಾಗೂ ದೇಶ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಅನುಕೂಲವಾಗಲು ಕಾನೂನು ಬದ್ಧವಾದ ಎಲ್ಲಾ ರೀತಿಯ ಸಹಕಾರವನ್ನು ಹೋಂ ಸ್ಟೇ ಮಾಲಕರ ಸಂಘ ನೀಡಲಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಅನ್ಸರ್,ನಿರ್ದೇಶಕರಾದ ಪಲ್ಲವಿ, ಅರುಣೇಶ್, ರಶ್ಮಿಸುರೇಶ್,ಶ್ವೇತಾ,ಕಾನೂನು ಸಲಹೆಗಾರ ತೇಜಸ್ವಿ ಇತರರು ಉಪಸ್ಥಿತರಿದ್ದರು.







