ಕಾರವಾರ: ನನೆಗುದಿಗೆ ಬಿದ್ದಿದ್ದ ಕೋಸ್ಟ್ ಗಾರ್ಡ್ ಕಚೇರಿ
ಕಾಮಗಾರಿ ಪುನಾರಂಭ

ಕಾರವಾರ, ಜು.13: ಜನವಿರೋಧದ ನಡುವೆ ನನೆಗುದಿಗೆ ಬಿದ್ದಿದ್ದ ಕಾರವಾರದ ಕೋಸ್ಟ್ ಗಾರ್ಡ್ ಕಚೇರಿಯ ನಿರ್ಮಾಣ ಕಾರ್ಯ ಕಾರವಾರದ ಕಡಲ ತಡಿಯಲ್ಲಿ ಸದ್ಯದಲ್ಲೇ ಆರಂಭವಾಗುವ ಸೂಚನೆಗಳು ಲಭಿಸಿದೆ. ಕಾರವಾರದ ದಿವೇಕರ ಕಾಲೇಜಿನ ಪಕ್ಕದಲ್ಲಿ ಕೋಸ್ಟ್ಗಾರ್ಡ್ ಕಚೇರಿಯ ನಿರ್ಮಾಣಕ್ಕಾಗಿ ಜನವರಿ 5, 2011 ರಂದು ಜಿಲ್ಲಾಡಳಿತವು 9.36 ಎಕರೆ ಕಂದಾಯ ಜಮೀನನನ್ನು ರಕ್ಷಣಾ ಇಲಾಖೆಗೆ ವರ್ಗಾಯಿಸಿತ್ತು. ಈ ಭಾಗದಲ್ಲಿ ಕೋಸ್ಟ್ಗಾರ್ಡ್ ಆಡಳಿತ ಕಚೇರಿ ಹಾಗೂ ಹೋವರ್ ಕ್ರಾಫ್ಟ್ ನಿಲುಗಡೆಗಾಗಿ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಮೀನುಗಾರರು ಇದನ್ನು ವಿರೋಧಿಸಿ ದ್ದರಲ್ಲದೇ ಈ ನಿರ್ಮಾಣಕಾರ್ಯಕ್ಕೆ ತಡೆಯೊಡ್ಡಿದ್ದರು. ಈಗಾಗಲೇ ಕಾರವಾರದ ಬಹುತೇಕ ಬೀಚ್ಗಳು ಸೀಬರ್ಡ್ ನೌಕಾನೆಲೆಗೆ ಹಸ್ತಾಂತರ ಗೊಂಡಿರುವ ಹಿನ್ನೆಲೆಯಲ್ಲಿ ಮೀನುಗಾ ರಿಕೆಗೆ ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಈಗ ಮಾಜಾಳಿಯಿಂದ ಕಾರವಾದ ವರೆಗಿನ ಕೇವಲ 8 ಕಿ.ಮೀ. ಉದ್ದದ ಬೀಚ್ ಮಾತ್ರ ಉಳಿದು ಕೊಂಡಿದೆ. ಈಗ ಕೋಸ್ಟ್ ಗಾರ್ಡ್ ಕಡಲ ಕಿನಾರೆಯ ಆ ಸ್ಥಳವನ್ನು ಕಚೇರಿ ನಿರ್ಮಾಣಕ್ಕೆ ಬಳಸಿಕೊಳ್ಳುವ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದ ಸಾರ್ವಜನಿಕರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ಪರಿಣಾಮ ಕೋಸ್ಟ್ಗಾರ್ಡ್ ಕಚೇರಿ ನಿರ್ಮಾಣವನ್ನು ತಾತ್ಕಾಲಿಕವಾಗಿ ಕೈಬಿಡಲಾಗಿತ್ತು. ಪ್ರಸ್ತುತ ಕೋಸ್ಟ್ಗಾರ್ಡ್ನ ತಾತ್ಕಾಲಿಕ ಕಚೇರಿ ಈಗ ಸೀಬರ್ಡ್ ನೌಕಾನೆಲೆಯ ಹೊರಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಖಾಸಗಿಕಟ್ಟಡದಲ್ಲಿ ನಡೆಸಲಾಗುತ್ತಿದೆ. ಹೀಗಾಗಿ ಹೊಸ ಕಚೇರಿಯನ್ನು ತಕ್ಷಣ ನಿರ್ಮಿಸಿಕೊಳ್ಳುವಂತೆ ರಕ್ಷಣಾ ಇಲಾಖೆಯಿಂದ ಕೋಸ್ಟ್ಗಾರ್ಡ್ ಮೇಲೆ ಒತ್ತಡ ಹೆಚ್ಚಿದೆ ಎನ್ನಲಾಗುತ್ತಿದ್ದು, ಮುಂಬೈನ 9/11 ದಾಳಿಯ ನಂತರ ಕೇಂದ್ರ ಸರಕಾರವು ಸಾಗರ ತಟಗಳ ರಕ್ಷಣೆಗೆ ಪ್ರಾಮುಖ್ಯ ನೀಡಿದ್ದು ತುರ್ತುಸ್ಥಿತಿಯಲ್ಲಿ ಸದಾ ಸನ್ನದ್ಧರಾಗಿರಲು ರಕ್ಷಣಾ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಹೀಗಾಗಿ ಕಾರವಾರದ ರಕ್ಷಣೆಗಾಗಿ ಅತ್ಯಂತ ಆಯಕಟ್ಟಿನ ಸ್ಥಳವಾದ ಹಾಗೂ ತುರ್ತು ಸ್ಥಿತಿಯಲ್ಲಿ ಹೋವರ್ ಕ್ರಾಫ್ಟ್ಗಳನ್ನು ಸಾಗರಕ್ಕೆ ಕೊಂಡೊಯ್ಯಲು ಅನುಕೂಲವಾಗುವಂತೆ ಈಗಿನ ದಿವೇಕರ ಕಾಲೇಜಿನ ಪಕ್ಕದಲ್ಲಿಯೇ ಕೋಸ್ಟಗಾರ್ಡ್ನ ಕಚೇರಿ ನಿರ್ಮಿಸಲು ಇಲಾಖೆ ನಿರ್ಧರಿಸಿದೆ ಎನ್ನಲಾಗಿದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು, ಸಂಘಸಂಸ್ಥೆಗಳು, ಮೀನುಗಾರರು ಹಾಗೂ ಮಾಧ್ಯಮಗಳಿಗೆ ಸರಿಯಾದ ಮಾಹಿತಿ ನೀಡಿ ಆ ಬಳಿಕ ಕಾಮಗಾರಿ ಆರಂಭಿಸುವುದಾಗಿ ಕೋಸ್ಟ್ಗಾ
ರ್ಡ್ ಅಧಿಕಾರಿಗಳು ರೂಪುರೇಶೆ ತಯಾರಿಸಿರುವುದಾಗಿ ತಿಳಿದು ಬಂದಿದೆ. ಆದರೆ ಸಾರ್ವಜನಿಕರ ವಿರೋಧದಿಂದಾಗಿ ಈ ಕಾಮಗಾರಿ ನನೆಗುದಿಗೆ ಬಿದ್ದ ಹಿನ್ನೆಲೆಯಲ್ಲಿ ರಕ್ಷಣಾ ಇಲಾಖೆಯ ಅತಿಸೂಕ್ಷ ಕಾರ್ಯಾಚರಣೆಗಳನ್ನು ನಡೆಸುವ ಕೋಸ್ಟ್ಗಾರ್ಡ್ ಇಲಾಖೆಯು ಖಾಸಗಿ ಕಟ್ಟಡದಲ್ಲಿ ಯೇ ಮುಂದುವರಿಯು
ುದು ರಕ್ಷಣಾ ಇಲಾಖೆಗೆ ತಲೆನೋವಾಗಿದೆ. ಇಡೀ ದೇಶದಲ್ಲಿ ಖಾಸಗಿ ಕಟ್ಟದಲ್ಲಿ ನಡೆಸಲ್ಪಡುತ್ತಿರುವ ರಕ್ಷಣಾ ಇಲಾಖೆಯ ಕಟ್ಟಡ ಕೇವಲ ಕಾರವಾರದಲ್ಲಿ ಮಾತ್ರ ಇದೆ. ಚೆನ್ನೈ ಪಾಲಾದ ನೌಕೆ
ಸಮರ್ಪಕ ಕಚೇರಿ ಹಾಗೂ ತಾಂತ್ರಿಕ ವ್ಯವಸ್ಥೆ ಇಲ್ಲದ ಕಾರಣ ಕಾರವಾರ ಕೋಸ್ಟ್ ಗಾರ್ಡ್ಗೆ ಮಂಜೂರಾಗಿದ್ದ ಡ್ರೋನಿಯರ್ ವಿಮಾನಗಳನ್ನು ನಿಲ್ಲಿಸ ಬಹುದಾದ ಬೃಹತ್ ರಕ್ಷಣಾ ನೌಕೆಯೊಂದು ಈಗ ಚೆನ್ನೈನ ಪಾಲಾಗಿದೆ. ಕಾರವಾರಕ್ಕೆ ಮಂಜೂರಾಗಿದ್ದ ಇನ್ನೂ ಹಲವು ಉಪಪಕರಣಗಳನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ಕಾರವಾರ ಕೋಸ್ಟ್ಗಾರ್ಡ್ನ ಹೋವರ್ ಕ್ರಾಫ್ಟ್ ಕೂಡಾ ಮಂಗಳೂರಿನಲ್ಲಿ ನಿಲ್ಲಿಸಲಾಗಿದೆ. ಸಿಬ್ಬಂದಿ ರವಾನೆ ಕಷ್ಟ: ಕೋಸ್ಟ್ಗಾರ್ಡ್ ಸುಮಾರು 40 ಸಿಬ್ಬಂದಿ ಕಾರವಾರದಲ್ಲಿ ಬಾಡಿಗೆ ಮನೆಯಲ್ಲಿವಾಸವಾಗಿದ್ದಾರೆ. ಸಮುದ್ರದಲ್ಲಿ ಅವಘಡಗಳು ನಡೆದಾಗ ಈ ಸಿಬ್ಬಂದಿಗೆ ಸುದ್ದಿ ತಲುಪಿಸಿ, ಅವರನ್ನು ಕರೆತಂದು ಆ ಬಳಿಕ ಕಾರ್ಯಾಚರಣೆ ನಡೆಸುವುದು ಕೋಸ್ಟ್ಗಾರ್ಡ್ಗೆ ಬಹುದೊಡ್ಡ ಸಾಹಸವಾಗಿ ಪರಿಣಮಿಸಿದೆ. ಸಾರ್ವಜನಿಕರ ಕೆಲವು ತಪ್ಪುಕಲ್ಪನೆಗಳಿಂದಾಗಿ ಕೋಸ್ಟ್ಗಾರ್ಡ್ ಕಚೇರಿಯನ್ನು ಕಾರವಾರದ ಬೀಚ್ನಲ್ಲಿ ನಿರ್ಮಿಸಲು ವಿರೋಧಿಸುತ್ತಿದ್ದಾರೆ. ಈಗ ಸರಕಾರ ಕೋಸ್ಟ್ಗಾರ್ಡ್ಗೆ ವರ್ಗಾ ಯಿಸಿದ 9.36 ಎಕರೆ ಕಂದಾಯ ಜಮೀನನ್ನು ಹೊರತು ಪಡಿಸಿ ಉಳಿದ ಬೀಚ್ನ ಉಳಿದ ಯಾವುದೇ ಜಮೀನಿನ ಮೇಲೆ ಕೋಸ್ಟ್ಗಾರ್ಡ್ಗೆ ಅಧಿಕಾರವಿರುವುದಿಲ್ಲ. ಅಲ್ಲದೇ ಈ ಜಮೀನು ಹಾಗೂ ಬೀಚ್ನ ಮರಳು ಜಮೀನಿಗೆ ಸುಮಾರು 200 ಅಡಿಗಳ ಅಂತರವಿದ್ದು ಕೋಸ್ಟಗಾರ್ಡ್ನಿಂದಾಗಿ ಸಾರ್ವಜನಿಕ ಸಂಚಾರಕ್ಕಾಗಲಿ ಅಥವಾ ಮೀನುಗಾರಿಕೆಗಾಗಲಿ ಯಾವುದೇ ತೊಂದರೆಯಾಗುವುದಿಲ್ಲ. ಅಲ್ಲಿ ಸಿಬ್ಬಂದಿಗಾಗಿ ವಸತಿ ಗೃಹಗಳನ್ನು ನಿರ್ಮಿಸಲಾಗುವುದಿಲ್ಲ. ಈ ವಸತಿಗೃಹಗಳನ್ನು ಅಮದಳ್ಳಿಯಲ್ಲಿ ಈಗಾಗಲೇ ಕೋಸ್ಟ್ಗಾರ್ಡ್
ಖರೀದಿಸಿದ ಜಮೀನಿನಲ್ಲಿ ನಿರ್ಮಿಸಲಾಗುಮದು. ಈ ಕಚೇರಿ ಕಟ್ಟದಿಂದಾಗಿ ಕಾಲೇಜಿಗಾಗಲಿ, ಪಕ್ಕದ ಮೀನುಗಾರಿಕಾ ಪೆಡರೇಷನ್ ಕಟ್ಟಡಕ್ಕಾಗಲಿ, ಮರೈನ್ ಬಯಾಲಜಿ ಕಟ್ಟಡಕಾಗಲೀ ಯಾವುದೇ ಧಕ್ಕೆಯಾಗಲಾರದು. ಈ ಬಗ್ಗೆ ಅದನ್ನು ಲಿಖಿತವಾಗಿ ಕೋಸ್ಟಗಾರ್ಡ್ ಈಗಾಗಲೇ ರಾಜ್ಯ ಸರಕಾರಕ್ಕೆ ಲಿಖಿತವಾಗಿ ನೀಡಿದೆ ಎಂದು ಕೋಸ್ಟ್ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.







