ಪುಣೆ: ವೈದ್ಯೆ ಪತ್ನಿಯನ್ನು ಗುಂಡಿಕ್ಕಿ ಕೊಂದ ಟೆಕ್ಕಿಯ ಬಂಧನ
![ಪುಣೆ: ವೈದ್ಯೆ ಪತ್ನಿಯನ್ನು ಗುಂಡಿಕ್ಕಿ ಕೊಂದ ಟೆಕ್ಕಿಯ ಬಂಧನ ಪುಣೆ: ವೈದ್ಯೆ ಪತ್ನಿಯನ್ನು ಗುಂಡಿಕ್ಕಿ ಕೊಂದ ಟೆಕ್ಕಿಯ ಬಂಧನ](https://www.varthabharati.in/sites/default/files/images/articles/2016/07/14/shot-dead.jpg)
ಪುಣೆ, ಜು.14: ಐಟಿ ಉದ್ಯೋಗಸ್ಥ ಮನೋಜ್ ಪಾಟಿದಾರ್(38) ಎಂಬಾತ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ಪತ್ನಿ ಸ್ತ್ರೀರೋಗ ತಜ್ಞೆ ಡಾ.ಅಂಜಲಿ ಪಾಟಿದಾರ್ ಎಂಬವರನ್ನು ಆಕೆಯ ಚಿಕಿತ್ಸಾಲಯದಲ್ಲಿಯೇ ಗುಂಡಿಕ್ಕಿ ಕೊಂದ ಘಟನೆ ಇಲ್ಲಿನ ಹಿಂಜವಾಡಿ ಪ್ರದೇಶದ ಬಳಿ ಗುರುವಾರ ನಡೆದಿದೆ.
ನಿನ್ನೆ ರಾತ್ರಿ ಮನೋಜ್, ನಾಡ ಪಿಸ್ತೂಲಿನಿಂದ ಗುಂಡು ಹಾರಿಸಿ ಪತ್ನಿಯನ್ನು ಕೊಂದಿದ್ದಾನೆನ್ನಲಾಗಿದೆ.
‘‘ ಪಾಟಿದಾರ್ನ ಬಗ್ಗೆ ನಾವು ಮಾಹಿತಿಯನ್ನು ಕಲೆ ಹಾಕಿದ್ದೇವೆ. ಆತ ಹಿಂಜವಾಡಿ ಸಮೀಪದ ಮಾಹಿತಿ ತಂತ್ರಜ್ಞಾನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು,ವಾರದ ಹಿಂದೆ 20,000 ರೂ.ಕೊಟ್ಟು ನಾಡ ಪಿಸ್ತೂಲನ್ನು ಖರೀದಿಸಿದ್ದನು’’ ಎಂದು ವಕಾಡ್ನ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಮಹೇಂದ್ರ ಆಹಿರ್ ತಿಳಿಸಿದ್ದಾರೆ.
ಬುಧವಾರ ಕೌಟುಂಬಿಕ ವಿಚಾರ ಸಂಬಂಧವಾಗಿ ನಡೆದ ಕಲಹದಲ್ಲಿ ತನ್ನ ಪತ್ನಿಯ ಹಣೆಗೆ ಗುಂಡಿಕ್ಕಿದ ಮನೋಜ್ ಪಾಟಿದಾರ್,ಒಂದೂವರೆ ವರ್ಷದ ಮಗುವನ್ನು ಬಿಟ್ಟು ಹೋಗಿದ್ದಾನೆ.ಮೂಲತಃ ಮಧ್ಯಪ್ರದೇಶದವನಾದ ಮನೋಜ್ನನ್ನು ಕಳೆದ ರಾತ್ರಿ ಪರಾರಿಯಾಗುವ ವೇಳೆ ಬಂಧಿಸಲಾಗಿದೆ.ಇದು ಆತನ ಮೂರನೆ ವಿವಾಹವಾಗಿತ್ತು.
ಮೊದಲ ಇಬ್ಬರು ಪತ್ನಿಯರು ನಿಗೂಢವಾಗಿ ಸಾವನ್ನಪಿದ್ದರು. ತನ್ನ ಪತ್ನಿಯರು ಕಟ್ಟಡದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಆತ ಸಮಜಾಯಿಷಿ ನೀಡಿದ್ದು ತನಿಖೆಯ ವೇಳೆ ಬಹಿರಂಗವಾಗಿದೆ ಎಂದು ಆಹಿರ್ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಕಲಂ 302 (ಕೊಲೆ) ಪ್ರಕಾರ ಪ್ರಕರಣ ದಾಖಲಿಸಲಾಗಿದೆ ಹಾಗೂ ನ್ಯಾಯಾಲಯದ ಮುಂದೆ ಗುರುವಾರ ಆರೋಪಿಯನ್ನು ಹಾಜರುಪಡಿಸಲಾಗಿದೆ.