ದಕ್ಷಿಣ ಸುಡಾನ್ನಿಂದ ಭಾರತೀಯರ ತೆರವಿಗೆ ವಿ.ಕೆ.ಸಿಂಗ್ ನೇತೃತ್ವದಲ್ಲಿ ‘ಸಂಕಟ ಮೋಚನ’
ಹೊಸದಿಲ್ಲಿ, ಜು.14: ಯುದ್ಧ ಪೀಡಿತ ದಕ್ಷಿಣ ಸುಡಾನ್ನಲ್ಲಿ ಸಿಲುಕಿಕೊಂಡಿರುವ 300ಕ್ಕೂ ಹೆಚ್ಚು ಭಾರತೀಯರನ್ನು ತೆರವು ಗೊಳಿಸುವುದಕ್ಕಾಗಿ ಭಾರತವು ಗುರುವಾರ ಎರಡು ಸಿ-17 ಸೇನಾ ಸಾರಿಗೆ ವಿಮಾನಗಳನ್ನು ರಾಜಧಾನಿ ನಗರ ಜುಬಾಗೆ ಕಳುಹಿಸಿದೆ.
ನೂರಾರು ಜೀವಗಳನ್ನು ಬಲಿಪಡೆದಿರುವ ಹಿಂಸಾಚಾರದಿಂದ ನಲುಗಿರುವ ದಕ್ಷಿಣ ಸುಡಾನ್ನಿಂದ ಭಾರತೀಯರನ್ನು ತೆರವುಗೊಳಿಸುವ ಈ ಕಾರ್ಯಾಚರಣೆಯನ್ನು ‘ಸಂಕಟ ಮೋಚನ’ ಎಂದು ಹೆಸರಿಸಲಾಗಿದ್ದು, ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ.ಕೆ. ಸಿಂಗ್ ಅದರ ನೇತೃತ್ವ ವಹಿಸಿದ್ದಾರೆ.
ಸಿಂಗ್ರೊಂದಿಗೆ ವಿದೇಶಾಂಗ ವ್ಯವಹಾರ ಸಚಿವಾಲಯದ ಆರ್ಥಿಕ ಸಂಬಂಧ ಕಾರ್ಯದರ್ಶಿ ಅಮರ್ ಸಿನ್ಹಾ, ಜಂಟಿ ಕಾರ್ಯದರ್ಶಿ ಸತ್ಬೀರ್ ಸಿಂಗ್ ಹಾಗೂ ನಿರ್ದೇಶಕ ಅಂಜನಿ ಕುಮಾರ್ ಕೈಜೋಡಿಸಲಿದ್ದಾರೆ.
ಸುಡಾನ್ನಲ್ಲಿ ಸಿಲುಕಿರುವ ಎಲ್ಲ ಭಾರತೀಯರನ್ನು ಸುರಕ್ಷಿತವಾಗಿ ಹಿಂದೆ ತರಲು ಸರ್ವ ಸಾಧ್ಯ ಪ್ರಯತ್ನವನ್ನು ತಾವು ಮಾಡಲಿದ್ದೇವೆಂದು ಸುಡಾನ್ಗೆ ಹೋಗುವ ಮೊದಲು ಜನರಲ್ ವಿ.ಕೆ. ಸಿಂಗ್ ಹೇಳಿದ್ದಾರೆ.
ಸಿಂಧುವಾಗಿರುವ ಭಾರತೀಯ ಪ್ರಯಾಣ ದಾಖಲೆಯಿರುವ ಭಾರತೀಯರಿಗಷ್ಟೇ ಗರಿಷ್ಠ 5 ಕಿ.ಗ್ರಾಂ ಕ್ಯಾಬಿನ್ ಬ್ಯಾಗೇಜ್ ಹಾಗೂ ತಪಾಸಣೆಗೊಳಗಾಗುವ ಸರಕು ಇಲ್ಲದವರಿಗಷ್ಟೇ ವಿಮಾನವೇರಲು ಅವಕಾಶ ನೀಡಲಾಗುವುದು. ಮಹಿಳೆಯರು ಹಾಗೂ ಮಕ್ಕಳಿಗೆ ಆದ್ಯತೆ ನೀಡಲಾಗುವುದು. ಹಿಂದಿರುಗುವ ವಿಮಾನಗಳು ಕೇವಲ ದಿಲ್ಲಿಯ ವರೆಗೆ ಮಾತ್ರ ಇರಲಿವೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಸರಕಾರಿ ಪಡೆಗಳು ಹಾಗೂ ಉಪಾಧ್ಯಕ್ಷ ರೀಕ್ ವಂಚರ್ಗೆ ನಿಷ್ಠವಾಗಿರುವ ಮಾಜಿ ಬಂಡುಕೋರರ ಪಡೆಗಳ ನಡುವೆ ಭಾರೀ ಕದನ ನಡೆಯುತ್ತಿರುವ ದಕ್ಷಿಣ ಸುಡಾನ್ನ ಬೆಳವಣಿಗೆಗಳ ಮೇಲೆ ಭಾರತವು ನಿಕಟ ನಿಗಾ ಇರಿಸಿದೆ. ಅದಕ್ಕಾಗಿ ಕಾರ್ಯಪಡೆಯೊಂದನ್ನು ರಚಿಸಲಾಗಿದೆ.
ಸಚಿವಾಲಯದ ಪ್ರಕಾರ ದಕ್ಷಿಣ ಸುಡಾನ್ನಲ್ಲಿ ಸುಮಾರು 600 ರಷ್ಟು ಭಾರತೀಯರಿದ್ದಾರೆ. ಅವರಲ್ಲಿ 450 ಮಂದಿ ಜುಬಾದಲ್ಲಿ ಹಾಗೂ 150ರಷ್ಟು ಜನ ರಾಜಧಾನಿಯ ಹೊರಗಿದ್ದಾರೆ. ಇದುವರೆಗೆ, ಭಾರತಕ್ಕೆ ಮರಳಲು ಸುಮಾರು 300 ಮಂದಿ ಅಲ್ಲಿನ ಭಾರತೀಯ ದೂತಾವಾಸದಲ್ಲಿ ಹೆಸರು ನೋಂದಾಯಿಸಿದ್ದಾರೆ.
ಕದನ ವಿರಾಮ: ದಕ್ಷಿಣ ಸುಡಾನ್ನ ಅಧ್ಯಕ್ಷ ಸಲ್ವಾ ಕೈರ್ ಸೋಮವಾರ ಕದನ ವಿರಾಮ ಘೋಷಿಸಿದ್ದರು. ಪ್ರತಿ ದಾಳಿಯನ್ನು ನಿಲ್ಲಿಸಿ ತಮ್ಮ ಪಡೆಗಳನ್ನು ನಿಯಂತ್ರಿಸಿ, ನಾಗರಿಕರನ್ನು ರಕ್ಷಿಸುವಂತೆ ಅವರು ಎಲ್ಲ ಕಮಾಂಡರ್ಗಳಿಗೆ ನಿರ್ದೇಶನ ನೀಡಿದ್ದಾರೆಂದು ವಾರ್ತಾ ಸಚಿವ ಮೈಕೆಲ್ ಮಕುಯಿ ಸರಕಾರಿ ಸ್ವಾಮ್ಯದ ಎಸ್ಎಸ್ಟಿವಿಯಲ್ಲಿ ಪ್ರಕಟಿಸಿದ್ದಾರೆ.