ಶಿಕ್ಷಕರ ವರ್ಗಾವಣೆಗೆ ವಿರೋಧ: ಪ್ರತಿಭಟನೆ

ಪುತ್ತೂರು, ಜು.14: ಕುರಿಯ ಗ್ರಾಮದ ಇಡಬೆಟ್ಟು ಸ.ಕಿ.ಪ್ರಾ. ಶಾಲಾ ಶಿಕ್ಷಕರನ್ನು ಕೌನ್ಸೆಲಿಂಗ್ ಮೂಲಕ ಬೇರೆ ಶಾಲೆಗೆ ವರ್ಗಾವಣೆ ಮಾಡಲಾಗಿದ್ದು, ಈ ಆದೇಶವನ್ನು ಹಿಂಪಡೆಯದಿದ್ದಲ್ಲಿ ಶಾಲೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಇಡಬೆಟ್ಟು ಶಾಲಾ ಎಸ್ಡಿಎಂಸಿ ಅಧ್ಯಕ್ಷ ನಾಸಿರ್ ಹೇಳಿದ್ದಾರೆ.
ಶಿಕ್ಷಕರ ವರ್ಗಾವಣೆಯನ್ನು ವಿರೋಧಿಸಿ ಪುತ್ತೂರು ಬಿಇಒ ಕಚೇರಿಯ ಮುಂಭಾಗದಲ್ಲಿ ಗುರುವಾರ ನಡೆದ ಪೋಷಕರ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಇಡಬೆಟ್ಟು ಶಾಲೆಯಲ್ಲಿ 3 ಶಿಕ್ಷಕರ ಹುದ್ದೆಯಿದ್ದು, ಇದರಲ್ಲಿ ನೀನಾ ಕುವೆಲ್ಲೋ ಅವರನ್ನು ಭಕ್ತಕೋಡಿ ಶಾಲೆಗೆ ನಿಯೋಜಿಸಲಾಗಿದೆ. ಪ್ರದೀಪ್ ಹಾಗೂ ದಿನೇಶ್ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇರುವ 5 ತರಗತಿಗಳಿಗೆ 2 ಶಿಕ್ಷಕರಿದ್ದಾರೆ. ಇದರಲ್ಲಿ ಪ್ರದೀಪ್ ಅವರನ್ನು ಕೌನ್ಸೆಲಿಂಗ್ನಲ್ಲಿ ಹೆಚ್ಚುವರಿ ಎಂದು ಗುರುತಿಸಿದ್ದು, ಬೇರೆಡೆಗೆ ವರ್ಗ ಮಾಡಲು ಯೋಜಿಸಲಾಗಿದೆ. ಇದು ಸರಿಯಾದ ಕ್ರಮವಲ್ಲ, ಶಿಕ್ಷಕರನ್ನು ವರ್ಗ ಮಾಡಿದರೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದಿದ್ದಾರೆ.ಕಿ.ಪ್ರಾ. ಶಾಲೆಗೆ 30ಮಕ್ಕಳಿಗೆ 1 ಶಿಕ್ಷಕನಂತೆ ಕರ್ತವ್ಯ ನಿರ್ವಹಿಸಬೇಕು. ಇಡಬೆಟ್ಟು ಶಾಲೆಯಲ್ಲಿ 41 ವಿದ್ಯಾರ್ಥಿಗಳಿದ್ದಾರೆ. ಈಗಾಗಲೇ ಶಾಲಾ ವಿದ್ಯಾರ್ಥಿಗಳನ್ನು ಬೇರೆ ಶಾಲೆಗೆ ಸೇರಿಸಿಕೊಳ್ಳುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಶಾಲೆಯನ್ನು ಮುಚ್ಚುವ ಸ್ಥಿತಿ ಬಂದರೆ ಅದಕ್ಕೆ ಇಲಾಖೆಯೇ ಹೊಣೆ. ನೈತಾಡಿಯಿಂದ 2 ಕಿ.ಮೀ ದೂರದಲ್ಲಿದೆ ಇಡಬೆಟ್ಟು ಶಾಲೆ. ಮಹಿಳಾ ಶಿಕ್ಷಕರನ್ನು ಇಲ್ಲಿಗೆ ಹಾಕಿದರೆ ಕರ್ತವ್ಯ ನಿರ್ವಹಣೆ ಕಷ್ಟ. ಆದ್ದರಿಂದ ಶಿಕ್ಷಕರನ್ನು ಉಳಿಸಿಕೊಳ್ಳಬೇಕು ಎಂಬ ಹಿನ್ನೆಲೆ ಹಿಂದೆಯೂ ಮನವಿ ನೀಡಲಾಗಿದೆ. ಆದರೆ ಇಲಾಖೆಯಿಂದ ಸೂಕ್ತ ಸ್ಪಂದನೆ ಸಿಗದ ಕಾರಣ ಪ್ರತಿಭಟನೆ ನಡೆಸುವುದು ಅನಿವಾರ್ಯವಾಯಿತು ಎಂದರು.ತಾಲೂಕು ಸಂಯುಕ್ತ ರಿಕ್ಷಾ ಚಾಲಕ- ಮಾಲಕರ ಸಂಘದ ಜಯರಾಮ ಕುಲಾಲ್, ಪೋಷಕರಾದ ಸುರೇಶ್, ಮೀನಾಕ್ಷಿ, ಕುಸುಮ, ಕೈರುನ್ನೀಸಾ, ಸುಂದರಿ, ದಿಲ್ಶಾತ್ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಮೇಲ್ವಿಚಾರಕಿಗೆ ಮನವಿ ನೀಡಲಾಯಿತು.
ಬಜತ್ತೂರಿನಲ್ಲೂ ಸಮಸ್ಯೆ
ಅಯೋಧ್ಯಾನಗರದಲ್ಲೂ ಶಿಕ್ಷಕರ ಸಮಸ್ಯೆಯಿದೆ, ಶಾಲೆಯಲ್ಲಿ 51 ವಿದ್ಯಾರ್ಥಿಗಳಿದ್ದು, 4 ಶಿಕ್ಷಕರ ಹುದ್ದೆಯಿದೆ. ಆದರೆ ಕರ್ತವ್ಯದಲ್ಲಿ 3ಶಿಕ್ಷಕರಿದ್ದಾರೆ. ಶಿಕ್ಷಣ ಇಲಾಖೆ ಮಾನದಂಡದ ಪ್ರಕಾರ, 5ನೆ ತರಗತಿವರೆಗೆ 30 ವಿದ್ಯಾರ್ಥಿಗಳಿಗೆ 1ಶಿಕ್ಷಕ, 6, 7, 8ನೆ ತರಗತಿ ಒಬ್ಬರಂತೆ ಶಿಕ್ಷಕರು ಇರಬೇಕು. ಇರುವ 3ಶಿಕ್ಷಕರಲ್ಲಿ ಓರ್ವನನ್ನು ಕೌನ್ಸೆಲಿಂಗ್ನಲ್ಲಿ ಆರಿಸಿ, ವರ್ಗ ಮಾಡಲು ಆಲೋಚಿಸಲಾಗಿದೆ. ಶಿಕ್ಷಕರನ್ನು ವರ್ಗ ಮಾಡದಂತೆ ಶಿಕ್ಷಣಾಧಿಕಾರಿ ಕಚೇರಿಗೆ ಮನವಿ ನೀಡಲಾಗಿದೆ. ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಲು ಶಿಕ್ಷಣಾಧಿಕಾರಿ ಕಚೇರಿ ಹುನ್ನಾರ ನಡೆಸುತ್ತಿದೆ.
-ಗೋಪಾಲಕೃಷ್ಣ ಪೊರೋಳಿ, ಎಸ್ಡಿಎಂಸಿ ಅಧ್ಯಕ್ಷ, ಅಯೋಧ್ಯಾನಗರ







