ಎಸಿಬಿಯಲ್ಲಿ 21 ಪ್ರಕರಣ ದಾಖಲು: ಐಜಿಪಿ ಡಾ.ಸಲೀಂ
ಉಡುಪಿ, ಜು.14: ರಾಜ್ಯದಲ್ಲಿ ನಾಲ್ಕು ತಿಂಗಳ ಹಿಂದೆ ರಚನೆಗೊಂಡ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದಲ್ಲಿ ಈವರೆಗೆ 21 ಪ್ರಕರಣಗಳು ಹಾಗೂ 600 ದೂರುಗಳು ದಾಖಲಾಗಿವೆ ಎಂದು ಎಸಿಬಿ ಪೊಲೀಸ್ ಮಹಾನಿರೀಕ್ಷಕ ಡಾ.ಎಂ.ಎ.ಸಲೀಂ ತಿಳಿಸಿದ್ದಾರೆ. ಉಡುಪಿಯ ಕಾಡಬೆಟ್ಟಿನಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಉಡುಪಿ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಟ್ರ್ಯಾಪ್ ಮತ್ತು 17 ಮಂದಿಯ ಬಂಧನವಾಗಿದ್ದು, ತನಿಖೆ ನಡೆಯುತ್ತಿದೆ. ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಸರಕಾರದ ಅನುಮತಿಗೆ ಕಾಯಲಾಗುತ್ತಿದೆ ಎಂದರು. ಮಂಗಳೂರಿನಲ್ಲಿ ಎರಡು ಟ್ರ್ಯಾಪ್, ಚಿಕ್ಕಮಗಳೂರಿ ನಲ್ಲಿ ಒಂದು ಟ್ರ್ಯಾಪ್ ಪ್ರಕರಣಗಳು ದಾಖಲಾಗಿವೆ. ರಾಜ್ಯದ 30 ಜಿಲ್ಲಾ ಕೇಂದ್ರಗಳಲ್ಲಿಯೂ ಎಸಿಬಿ ಕಚೇರಿ ಇದೆ. ಉಡುಪಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಬಾಡಿಗೆ ಕಟ್ಟಡದಲ್ಲಿ ಕಚೇರಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
ಎಸಿಬಿಗೆ ಮಂಜೂರಾದ 10 ಎಸ್ಪಿ ಹುದ್ದೆಗಳಲ್ಲಿ ಇಬ್ಬರು ಮಹಿಳಾ ಎಸ್ಪಿ ಸೇರಿದಂತೆ ಒಟ್ಟು 7 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದೇ ರೀತಿ 35 ಡಿವೈಎಸ್ಪಿ ಹುದ್ದೆಗಳಲ್ಲಿ 19, 75 ನಿರೀಕ್ಷಕರಲ್ಲಿ 46, 322 ಮಂದಿ ಪೊಲೀಸರಲ್ಲಿ 161 ಸಹಾಯಕ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 10 ಮಂದಿ ಮುಖ್ಯ ಕಾನೂನು ಅಧಿಕಾರಿಗಳು, ರಿಜಿಸ್ಟ್ರಾರ್, 3 ಕಾರ್ಯಪಾಲಕ ಅಭಿಯಂತರರು, ಇಬ್ಬರು ತಹಶೀಲ್ದಾರ್ಗಳು, ಕಾನೂನು ಮತ್ತು ತಾಂತ್ರಿಕ ಘಟಕ, ಲೆಕ್ಕಪರಿಶೋಧಕರನ್ನು ಎಸಿಬಿ ಹೊಂದಿದೆ ಎಂದು ಅವರು ತಿಳಿಸಿದರು.
ಎಸಿಬಿ ಕಾರ್ಯವೈಖರಿ ನ್ಯಾಯಾಂಗ ಪರಿಶೀಲನೆ ಗೊಳಗಾಗುವ ಹಿನ್ನೆಲೆಯಲ್ಲಿ ಅತಿಮುಖ್ಯವಾದ ಸಾಕ್ಷ್ಯದ ಆಧಾರದಲ್ಲಿ ಪ್ರಕರಣ ದಾಖಲಾಗುತ್ತಿದೆ. ಸುಪ್ರೀಂತೀರ್ಪು ಪ್ರಕಾರ ಸರಕಾರಿ ನೌಕರರು/ಅಧಿಕಾರಿಗಳು ಹಾಗೂ ಗಂಡ ಹೆಂಡತಿಯ ಪ್ರಕರಣಗಳಲ್ಲಿ ಪ್ರಾಥಮಿಕ ವಿಚಾರಣೆ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಎಸಿಬಿ ಮಂಗಳೂರು ಎಸ್ಪಿ ಎಸ್.ಎಲ್.ಚೆನ್ನಬಸವಣ್ಣ, ಉಡುಪಿ ನಿರೀಕ್ಷಕ ರಂಗನಾಥ್ ಉಪಸ್ಥಿತರಿದ್ದರು.
‘ಸಿಎಂ ವಿರುದ್ಧದ ದೂರಿನ ವಿಚಾರಣೆ’
ಎಸಿಬಿಯಲ್ಲಿ ಮುಖ್ಯಮಂತ್ರಿ, ಸಚಿವರು, ಅಧಿ ಕಾರಿಗಳ ವಿರುದ್ಧ ದಾಖಲಾದ ದೂರುಗಳು ವಿಚಾರಣೆ ಹಂತದಲ್ಲಿವೆ. ಈ ವಿಚಾರದಲ್ಲಿ ಇಲಾಖೆ ಗೌಪ್ಯತೆ ಕಾಪಾಡುವುದು ಅತೀ ಮುಖ್ಯವಾಗಿದೆ ಎಂದು ಡಿಜಿಪಿ ಡಾ.ಎಂ.ಎ. ಸಲೀಂ ತಿಳಿಸಿದರು.