ಸುಳ್ಯ: ಚುನಾವಣೆಗೆ ಸಜ್ಜಾಗಲು ಸಂಸದ ಕಟೀಲ್ ಕರೆ
ಬಿಜೆಪಿ ಸುಳ್ಯ ಮಂಡಲ ಸಮಿತಿ ಪದಗ್ರಹಣ
ಸುಳ್ಯ, ಜು.15: ರಾಜ್ಯದ ಕಾಂಗ್ರೆಸ್ ಸರಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ. ಪಕ್ಷದ ಆಂತರಿಕ ಕಚ್ಚಾಟದಿಂದ ಒಂದು ವರ್ಷದೊಳಗೆ ವಿಧಾನ ಸಭೆಗೆ ಚುನಾವಣೆ ನಡೆಯಲಿದ್ದು, ಕಾರ್ಯಕರ್ತರು ಸಜ್ಜಾಗಬೇಕೆಂದು ಸಂಸದ ನಳಿನ್ಕುಮಾರ್ ಕಟೀಲ್ ಕರೆ ನೀಡಿದ್ದಾರೆ.
ಸುಳ್ಯದಲ್ಲಿ ನಡೆದ ಪಕ್ಷದ ಮಂಡಲ ಸಮಿತಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಕೋರ್ಕಮಿಟಿ ಮೂಲಕ ಕಾರ್ಯಕರ್ತರೇ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಎಲ್ಲರ ಒಮ್ಮತದಿಂದ ಆಯ್ಕೆ ನಡೆಯುತ್ತದೆ. ಕಾಂಗ್ರೆಸ್ನಂತೆ ಲಕೋಟೆ ಮೂಲಕ ಹೆಸರು ಬರುವುದಿಲ್ಲ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರ ಭಯೋತ್ಪಾದನಾ ವಿರೋಧಿ ಹೇಳಿಕೆಗೆ ಜಗತ್ತು ಒಪ್ಪಿಗೆ ಸೂಚಿಸಿದೆ. ವಿದೇಶಿ ಪ್ರವಾಸಗಳ ಮೂಲಕ ಅವರ ಅಧ್ಯಯನಶೀಲ ಚಿಂತನೆ ಹರಡಿದೆ. ಮುಂದಿನ ದಿನಗಳಲ್ಲಿ ಮೋದಿಯೇ ಜಗತ್ತಿನ ನಾಯಕರಾಗಲಿದ್ದಾರೆ ಎಂದ ಅವರು ಜಿಲ್ಲೆಯ ನಾಲ್ಕು ಚತುಷ್ಪಥ ರಸ್ತೆಗಳಿಗೆ ಮೋದಿ 10 ಸಾವಿರ ಕೋಟಿ ರೂ. ನೀಡಿದ್ದಾರೆ ಎಂದರು.
ಶಾಸಕ ಎಸ್.ಅಂಗಾರ ಮಾತನಾಡಿ, ಕೌಟುಂಬಿಕ, ಭಾವನಾತ್ಮಕ ಸಂಬಂಧಗಳಿಂದ ನೆಮ್ಮದಿ ಕಾಣಲು ಸಾಧ್ಯ. ನಾವು ಅದರಲ್ಲಿ ಬೆಳೆದು ಬಂದವರು, ಸಂಬಂಧಗಳು ಗಟ್ಟಿಗೊಂಡಾಗ ನಾವು ಮತ್ತು ಸಂಘಟನೆ ಬೆಳೆಯಲು ಸಾಧ್ಯ. ಪ್ರಧಾನಿ ಮೋದಿ ಆ ಮೂಲಕ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮಂಡಲ ಸಮಿತಿಯ ನೂತನ ಅಧ್ಯಕ್ಷರ ಹೆಸರನ್ನು ಪ್ರಕಟಿಸಿದರು. ನೂತನ ಅಧ್ಯಕ್ಷ ವೆಂಕಟ್ ವಳಲಂಬೆ ನಿರ್ಗಾಮನಾಧ್ಯಕ್ಷ ಹರೀಶ್ ಕಂಜಿಪಿಲಿಯವರಿಂದ ಅಧಿಕಾರ ಸ್ವೀಕರಿಸಿ ಮಂಡಲ ಸಮಿತಿ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು.
ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿಗಳಾಗಿ ಪ್ರಕಾಶ್ ಹೆಗ್ಡೆ ಹಾಗೂ ಕಿಶೋರ್ ಶಿರಾಡಿ, ಉಪಾಧ್ಯಕ್ಷರುಗಳಾಗಿ ಪುಲಸ್ಯ ರೈ, ಕರುಣಾಕರ ಅಡ್ಪಂಗಾಯ, ಮಮತಾ ಬೊಳುಗಲ್ಲು, ಮುರಳಿಕೃಷ್ಣ ಚಳ್ಳಂಗಾರು, ಹೇಮಲತಾ, ಕಾರ್ಯದರ್ಶಿಗಳಾಗಿ ಚಿತ್ರಾ ಶಶಿಧರ ದೇರಾಜೆ, ಲಕ್ಷ್ಮೀನಾರಾಯಣ ರಾವ್, ರಮಾನಂದ ಎಣ್ಣೆಮಜಲು, ದಿನೇಶ್ ಮೆದು, ಚಂದ್ರಾವತಿ ಕೂತ್ಕುಂಜ, ಶೇಖರ ನಾಗಪಟ್ಟಣ, ಕೋಶಾಧಿಕಾರಿಯಾಗಿ ಜಯಪ್ರಕಾಶ್ ಕುಂಚಡ್ಕ ಆಯ್ಕೆಯಾಗಿದ್ದಾರೆ.
ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ಶೋಭಾ ನಲ್ಲೂರಾಯ, ಎಸ್ಸಿ ಮೋರ್ಚಾ ಅಧ್ಯಕ್ಷರಾಗಿ ಬಾಲಪ್ಪ ಕಳಂಜ, ಪ್ರಧಾನ ಕಾರ್ಯದರ್ಶಿಯಾಗಿ ಸುಂದರ ಮೊರಂಗಲ್ಲು, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ಸೋಮನಾಥ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ವಿಜಯಕುಮಾರ್ ಚಾರ್ಮತ, ರೈತ ಮೋರ್ಚಾ ಅಧ್ಯಕ್ಷರಾಗಿ ಸುರೇಶ್ಚಂದ್ರ ಟಿ.ಆರ್., ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಕೂಜುಗೋಡು, ಎಸ್ಟಿ ಮೋರ್ಚಾ ಅಧ್ಯಕ್ಷರಾಗಿ ಶಿವಾನಂದ ರಂಗತ್ತಮಲೆ ಆಯ್ಕೆಯಾದರು.
ನೆಲ್ಯಾಡಿ ಶಕ್ತಿಕೇಂದ್ರದ ಅಧ್ಯಕ್ಷರಾಗಿ ಧರ್ಮಪಾಲ ರಾವ್, ಕಾರ್ಯದರ್ಶಿಯಾಗಿ ಶಿವಪ್ರಸಾದ್ ಪುತ್ತಿಲ, ಕಡಬ ಶಕ್ತಿಕೇಂದ್ರದ ಅಧ್ಯಕ್ಷರಾಗಿ ವಾಡ್ಯಪ್ಪ ಬಿಳಿನೆಲೆ, ಕಾರ್ಯದರ್ಶಿಯಾಗಿ ಪ್ರಕಶ್ ಎನ್.ಕೆ., ಬೆಳಂದೂರು ಶಕ್ತಿಕೇಂದ್ರದ ಅಧ್ಯಕ್ಷರಾಗಿ ಧರ್ಮೇಂದ್ರ ಕಟ್ಟತ್ತಾರು, ಕಾರ್ಯದರ್ಶಿಯಾಗಿ ಜಯಂತ, ಬೆಳ್ಳಾರೆ ಶಕ್ತಿಕೇಂದ್ರದ ಅಧ್ಯಕ್ಷರಾಗಿ ಶ್ರೀನಾಥ ರೈ, ಕಾರ್ಯದರ್ಶಿಯಾಗಿ ಚಂದ್ರಶೇಖರ ಪನ್ನೆ, ಜಾಲ್ಸೂರು ಶಕ್ತಿಕೇಂದ್ರದ ಅಧ್ಯಕ್ಷರಾಗಿ ಉದಯ ಆಚಾರ್, ಕಾರ್ಯದರ್ಶಿಯಾಗಿ ತಿಮ್ಮಪ್ಪ ಕೊಂಡೆಬಾಯಿ, ಅರಂತೋಡು ಶಕ್ತಿಕೇಂದ್ರದ ಅಧ್ಯಕ್ಷರಾಗಿ ಹರೀಶ್ ಉಬರಡ್ಕ, ಕಾರ್ಯದರ್ಶಿಯಾಗಿ ಕುಸುಮಾಧರ ಅಡ್ಕಬಳೆ, ಗುತ್ತಿಗಾರು ಶಕ್ತಿಕೇಂದ್ರದ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಕುಳ, ಕಾರ್ಯದರ್ಶಿಯಾಗಿ ಗಣೇಶ್ ಟ್ ಇಡ್ಯಡ್ಕ, ಸುಳ್ಯ ನಗರ ಶಕ್ತಿಕೇಂದ್ರದ ಅಧ್ಯಕ್ಷರಾಗಿ ವಿನಯಕುಮಾರ್ ಕಂದಡ್ಕ, ಕಾರ್ಯದರ್ಶಿಯಾಗಿ ಹರೀಶ್ ಬೂಡುಪನ್ನೆ ಆಯ್ಕೆಯಾಗಿದ್ದು, ಎಲ್ಲರನ್ನು ಅತಿಥಿಗಳು ಹೂನೀಡಿ ಸ್ವಾಗತಿಸಿದರು.
ಮುಳಿಯ ಕೇಶವ ಭಟ್ ಸ್ವಾಗತಿಸಿದರು. ವಿನಯಕುಮಾರ್ ಮುಳುಗಾಡು ಕಾರ್ಯಕ್ರಮ ನಿರೂಪಿಸಿದರು. ಪಕ್ಷದ ಜಿಲ್ಲಾ ಉಪಾಧ್ಯಕ್ಷೆ ಭಾಗೀರಥ ಮುರುಳ್ಯ, ಜಿಲ್ಲಾ ಕಾರ್ಯದರ್ಶಿ ಪಿಜಿಎಸ್ಎನ್ ಪ್ರಸಾದ್, ಮಂಡಲ ಸಮಿತಿ ನಿರ್ಗಮಿತ ಅಧ್ಯಕ್ಷ ಮುಳಿಯ ಕೇಶವ ಭಟ್ ಉಪಸ್ಥಿತರಿದ್ದರು.