ಪಟೇಲ್ ಮೀಸಲಾತಿ ಚಳವಳಿಯ ನಾಯಕ ಹಾರ್ದಿಕ್ ಪಟೇಲ್ ಜೈಲಿನಿಂದ ಬಿಡುಗಡೆ
ಸೂರತ್,ಜು.15: ಕಳೆದ ವರ್ಷ ಪಾಟಿದಾರ್(ಪಟೇಲ್) ಕೋಟಾ ಪ್ರತಿಭಟನೆಗೆ ಸಂಬಂಧಿಸಿದಂತೆ ದೇಶದ್ರೋಹ ಮತ್ತು ಹಿಂಸಾಚಾರದ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟು ಒಂಭತ್ತು ತಿಂಗಳುಗಳಿಂದಲೂ ಜೈಲಿನಲ್ಲಿ ಕೊಳೆಯುತ್ತಿದ್ದ ಹಾರ್ದಿಕ್ ಪಟೇಲ್ ಶುಕ್ರವಾರ ಇಲ್ಲಿಯ ಲಾಜಪೋರ್ ಜೈಲಿನಿಂದ ಬಿಡುಗಡೆಗೊಂಡರು.
ಮುಂದಿನ ಆರು ತಿಂಗಳು ಗುಜರಾತ್ನಿಂದ ಹೊರಗೆ ವಾಸವಿರಬೇಕು ಮತ್ತು ಜೈಲಿನಿಂದ ಬಿಡುಗಡೆಗೊಂಡ 48 ಗಂಟೆಗಳಲ್ಲಿ ಗುಜರಾತನ್ನು ತೊರೆಯಬೇಕು ಎಂಬ ಶರತ್ತಿನಲ್ಲಿ ಗುಜರಾತ್ ಉಚ್ಚ ನ್ಯಾಯಾಲಯವು ಕಳೆದ ವಾರ ಹಾರ್ದಿಕ್ಗೆ ಜಾಮೀನು ಮಂಜೂರು ಮಾಡಿತ್ತು.
ಹಾರ್ದಿಕ್ ಉದಯಪುರದ ವಿಮಾನ ನಿಲ್ದಾಣ ರಸ್ತೆಯಲ್ಲಿನ ಶ್ರೀನಾಥ ನಗರದ 190 ಸಂಖ್ಯೆಯ ಮನೆಯಲ್ಲಿ ವಾಸವಿರಲಿದ್ದಾರೆ. ಇದು ಆರುತಿಂಗಳ ಅವಧಿಗೆ ಅವರ ತಾತ್ಕಾಲಿಕ ವಿಳಾಸವಾಗಿರುತ್ತದೆ ಎಂದು ಪಟೇಲ್ ಪರ ವಕೀಲ ದಿಲೀಪ್ ಪಟೇಲ್ ಅವರು ನ್ಯಾಯಾಲಯಕ್ಕೆ ನೀಡಿದ ಮುಚ್ಚಳಿಕೆಯಲ್ಲಿ ಬರೆದು ಕೊಟ್ಟಿದ್ದಾರೆ.
ನನಗೆ ಮೀಸಲಾತಿ ಬೇಕೇ ಹೊರತು 56 ಇಂಚಿನ ಎದೆಯಲ್ಲ ಎಂದು ಜೈಲಿನಿಂದ ಹೊರಬರುತ್ತಿದ್ದಂತೆ ತನ್ನನ್ನು ಮುತ್ತಿಕೊಂಡ ಸುದ್ದಿಗಾರರಿಗೆ ತಿಳಿಸಿದ ಹಾರ್ದಿಕ್, ಸಮುದಾಯಕ್ಕಾಗಿ ಕೆಲಸ ಮಾಡುವುದನ್ನು ನಾನು ಮುಂದುವರಿಸುತ್ತೇನೆ. ಸರಕಾರದೊಂದಿಗೆ ಮಾತುಕತೆಗೆ ನಾನು ಸಿದ್ಧನಿದ್ದೇನೆ ಎಂದರು.
ಬಿಡುಗಡೆಯ ಬಳಿಕ ಹಾರ್ದಿಕ್ ಸೂರತ್ನಲ್ಲಿ ರೋಡ್ಶೋ ನಡೆಸಿದರು.