ಮಾಜಿ ಬಿಜೆಪಿ ಶಾಸಕ ಹಾಗೂ ಪತ್ರಕರ್ತನ ವಿರುದ್ಧ 50 ಕೋಟಿ ರೂ. ಮಾನನಷ್ಟ ನೋಟಿಸ್ ಕಳುಹಿಸಿದ ಎಂಐಎಂ
ಹೈದರಾಬಾದ್, ಜು.15: ಬಿಜೆಪಿ ಹಾಗೂ ಎಂಐಎಂ ನಡುವೆ ಸಂಬಂಧವಿದೆಯೆಂದು ಆರೋಪಿಸಿದ್ದ ಮಾಜಿ ಬಿಜೆಪಿ ಶಾಸಕ ಯತಿನ್ ಓಝಾ ಹಾಗೂ ಈ ಬಗ್ಗೆ ವರದಿಯೊಂದನ್ನು ಪ್ರಕಟಿಸಿದ್ದ ನೊಯ್ಡಾ ಮೂಲದ ವೆಬ್ ತಾಣ ಜನತಾ ಕಾ ರಿಪೋರ್ಟರ್ ಇದರ ಸಿಇಒ ರಾಫತ್ ಜಾವೀದ್ ವಿರುದ್ಧ ಅಸಸುದ್ದೀನ್ ಉವೈಸಿ ನಾಯಕತ್ವದ ಎಂಐಎಂ ಮಾನನಷ್ಟ ನೋಟಿಸ್ ಕಳುಹಿಸಿದೆ.
ಹೈಕೋರ್ಟ್ ನ ಹಿರಿಯ ವಕೀಲ ಅಶೋಕ್ ರೆಡ್ಡಿ ಶುಕ್ರವಾರ ನೋಟಿಸ್ ಜಾರಿಗೊಳಿಸಿದ್ದು, ಈ ವರದಿಯ ಬಗ್ಗೆ ಒಂದು ವಾರದೊಳಗೆ ರಿಫತ್ ಅವರು ಬೇಷರತ್ ಕ್ಷಮೆ ಯಾಚಿಸಬೇಕು ಇಲ್ಲವೇ 50 ಕೋಟಿ ರೂ. ಮಾನನಷ್ಟ ನೀಡಬೇಕೆಂದು ಹೇಳಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಆಮ್ ಆದ್ಮಿ ಪಕ್ಷವನ್ನು ಸೇರಿದ್ದಾರೆನ್ನಲಾದ ಮಾಜಿ ಬಿಜೆಪಿ ಶಾಸಕ, ಹಿರಿಯ ವಕೀಲ ಹಾಗೂ ಗುಜರಾತ್ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಯತಿನ್ ಓಝಾ ಹಲವಾರು ರಹಸ್ಯಗಳನ್ನು ಬಹಿರಂಗಗೊಳಿಸಿ ಪತ್ರವೊಂದನ್ನು ಬರೆದು ಅದರಲ್ಲಿ ಅವರು ``ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಎಐಎಂಐಎಂ ನಾಯಕ ಅಕ್ಬರುದ್ದೀನ್ ಉವೈಸಿ ರಹಸ್ಯ ಒಪ್ಪಂದವೊಂದಕ್ಕೆ ಬಂದು 2015 ರಲ್ಲಿ ಭೇಟಿಯಾಗಿ ಬಿಹಾರ ಚುನಾವಣೆಗೆ ಕಾರ್ಯತಂತ್ರ ರೂಪಿಸಿದ್ದರು'' ಎಂದು ಹೇಳಿದ್ದಾರೆಂಬ ಬಗ್ಗೆ ಜನತಾ ಕಾ ರಿಪೋರ್ಟರ್ ಕಳೆದ ವಾರ ವರದಿ ಮಾಡಿತ್ತು.
ಆದರೆ ಉವೈಸಿ ಈ ಹೇಳಿಕೆಯನ್ನು ನಿರಾಕರಿಸಿ ಕಾನೂನು ನೋಟಿಸ್ ಜಾರಿಗೊಳಿಸಿದ್ದಾರಲ್ಲದೆ ಈ ವರದಿ ಪ್ರಕಟಿಸಿದ ಇತರ ಮಾಧ್ಯಮ ಸಂಸ್ಥೆಗಳಿಗೂ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.