ಶರಣಾದ ಸೈನಿಕರ ಮೇಲೆ ಹಲ್ಲೆಗೈದ ಜನರು

ಅಂಕಾರ, ಜು. 16: ಕ್ಷಿಪ್ರಕ್ರಾಂತಿ ನಡೆಸಲು ಹೋಗಿ ವಿಫಲರಾದ ಬಳಿಕ ಶರಣಾದ ಸೈನಿಕರ ಮೇಲೆ ನಾಗರಿಕರ ಗುಂಪುಗಳು ಹಲ್ಲೆ ನಡೆಸಿದ ಘಟನೆ ಬಗ್ಗೆ ವರದಿಯಾಗಿದೆ. ನಾಗರಿಕರು ಈ ಸೈನಿಕರಿಗೆ ಗುದ್ದಿದರು ಹಾಗೂ ತುಳಿದರು. ಅಂತಿಮವಾಗಿ ಸಶಸ್ತ್ರ ಪೊಲೀಸರು ಅವರ ರಕ್ಷಣೆಗೆ ಬರಬೇಕಾಯಿತು.
ರಾಜಧಾನಿ ಅಂಕಾರ ಮತ್ತು ದೇಶದ ಅತ್ಯಂತ ದೊಡ್ಡ ನಗರ ಇಸ್ತಾಂಬುಲ್ನ ಪ್ರಜೆಗಳು ಶನಿವಾರ ಹಾಸಿಗೆಯಿಂದ ಏಳುವಾಗ ವಿಫಲ ಕ್ಷಿಪ್ರಕ್ರಾಂತಿಯ ಸುದ್ದಿಗಳನ್ನು ಕೇಳಿದರು. ಈ ನೆಮ್ಮದಿ ಕೋಪವಾಗಿ ಪರಿಣಮಿಸಿತು. ದೇಶದ ಅಧಿಕಾರವನ್ನು ವಶಪಡಿಸಿಕೊಳ್ಳುವುದಕ್ಕಾಗಿ ಟ್ಯಾಂಕ್ಗಳನ್ನು ರಸ್ತೆಗಳಿಗೆ ತಂದ ಸೈನಿಕರ ವಿರುದ್ಧ ಜನರು ಆಕ್ರೋಶಗೊಂಡರು.
ಇಸ್ತಾಂಬುಲ್ನಲ್ಲಿ, ಬೋಸ್ಫೋರಸ್ ಸೇತುವೆಯಲ್ಲಿ ಶುಕ್ರವಾರ ರಾತ್ರಿ ಹಲವಾರು ಟ್ಯಾಂಕ್ಗಳನ್ನು ನಿಯೋಜಿಸಿದ ಸೈನಿಕರ ಮೇಲೆ ಭಾರೀ ಸಂಖ್ಯೆಯಲ್ಲಿದ್ದ ಉದ್ರಿಕ್ತ ನಾಗರಿಕರ ಗುಂಪುಗಳು ದಾಳಿ ನಡೆಸಿದವು.
ಈ ವೇಳೆಗಾಗಲೇ ಆ ಸೈನಿಕರು ಶರಣಾಗತರಾಗಿದ್ದು ತಮ್ಮ ಶಸ್ತ್ರಗಳನ್ನು ಒಪ್ಪಿಸಿದ್ದರು.
ಶರಣಾಗತ ಸೈನಿಕರನ್ನು ಪೊಲೀಸ್ ಬಸ್ಗಳಿಗೆ ತುಂಬಿಸುತ್ತಿದ್ದಾಗ, ಜನರು ಅವರ ಮೇಲೆ ಮುಗಿಬಿದ್ದು ದೊಣ್ಣೆಗಳಿಂದ ಹೊಡೆದರು, ಮುಷ್ಟಿಗಳಿಂದ ಪ್ರಹಾರ ಮಾಡಿದರು ಹಾಗೂ ಕಾಲುಗಳಿಂದ ತುಳಿದರು.
ಆಗ ಪೊಲೀಸರು ಮಧ್ಯಪ್ರವೇಶಿಸಿ ಗಾಳಿಯಲ್ಲಿ ಗುಂಡು ಹಾರಿಸಿದರು.







