ಕಾಸರಗೋಡು:ಎನ್.ಎ ನೆಲ್ಲಿಕುನ್ನು ನೇತೃತ್ವದ ನಿಯೋಗ ಆರೋಗ್ಯ ಸಚಿವರ ಭೇಟಿ
ಕಾಸರಗೋಡು, ಜು.17: ಪೆರ್ಲ ಉಕ್ಕಿನಡ್ಕದಲ್ಲಿ ನಿರ್ಮಾಣವಾಗುತ್ತಿರುವ ಕಾಸರಗೋಡು ಸರಕಾರಿ ವೈದ್ಯಕೀಯ ಕಾಲೇಜು ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದು ರಾಜ್ಯ ಹಣಕಾಸು ಸಚಿವ ಥೋಮಸ್ ಐಸಾಕ್ ಮತ್ತು ಆರೋಗ್ಯ ಸಚಿವೆ ಕೆ . ಕೆ ಶೈಲಜಾ ಹೋರಾಟ ಸಮಿತಿ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಸಮಿತಿ ನಿಯೋಗ ತಿರುವನಂತಪುರಕ್ಕೆ ತೆರಳಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು . ಕಾಮಗಾರಿ ಯಾವುದೇ ಅಡ್ಡಿಯಿಲ್ಲದೆ ಮುಂದುವರಿಯಲು ಎಲ್ಲಾ ಕ್ರಮಗಳನ್ನು ಸರಕಾರ ತೆಗೆದುಕೊಳ್ಳಲಿದೆ. ಶೀಘ್ರ ಈ ಕುರಿತು ಸಭೆ ಕರೆಯಲಾಗುವುದು ಎಂದು ಸಚಿವರು ನಿಯೋಗಕ್ಕೆ ತಿಳಿಸಿದರು.
ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ರವರ ನೇತೃತ್ವದ ನಿಯೋಗ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಅಕಾಡಮಿಕ್ ಬ್ಲಾಕ್ ನ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು, ನಬಾರ್ಡ್ ಒದಗಿಸಿದ ೬೮ ಕೋಟಿ ರೂ.ಗಳ ಟೆಂಡರ್ ಗೆ ಅಂಗೀಕಾರ ನೀಡಿ ಆಸ್ಪತ್ರೆ ಬ್ಲಾಕ್ ಕಾಮಗಾರಿ ಶೀಘ್ರ ಆರಂಭಿಸಬೇಕು, ಎಂಡೋಸಲ್ಫಾನ್ ಸಂತ್ರಸ್ಥ ವಲಯವಾದುದರಿಂದ ಉಳಿದ ಜಿಲ್ಲೆಗಿಂತ ಕಾಸರಗೋಡು ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಬೇಕು ಮೊದಲಾದ ಬೇಡಿಕೆಗಳನ್ನು ಸಚಿವರ ಮುಂದಿಡಲಾಯಿತು.
ಹಣಕಾಸು, ಆರೋಗ್ಯ ಸಚಿವರಲ್ಲದೆ ಕಂದಾಯ ಸಚಿವರಿಗೂ ನಿಯೋಗ ಮನವಿ ಸಲ್ಲಿಸಿತು.
ಶಾಸಕರಲ್ಲದೆ ಹೋರಾಟ ಸಮಿತಿ ಪದಾಧಿಕಾರಿಗಳಾದ ಮಾಹಿನ್ ಕೇಳೊಟ್ , ಎ.ಕೆ ಮುಹಮ್ಮದ್ , ಕೆ.ಶ್ಯಾಮ್ ಪ್ರಸಾದ್ , ಸಿ . ಎಚ್ ಮುಹಮ್ಮದ್ ಕು೦ಞ, ಪ್ರೊ.ಶ್ರೀನಾಥ್, ಎಂ.ಕೆ ರಾಧಾಕೃಷ್ಣನ್, ಫಾರೂಕ್ ಖಾಸ್ಮಿ, ಅಜಯ್ ಪರವಡ್ಕ ಮೊದಲಾದವರು ನಿಯೋಗದಲ್ಲಿದ್ದರು.