ಸಚಿವ ಕೆ.ಜೆ. ಜಾರ್ಜ್ ಸೇರಿ ಮೂವರ ವಿರುದ್ಧದ ಖಾಸಗಿ ಕ್ರಿಮಿನಲ್ ಕೇಸ್ ನಾಳೆ ವಿಚಾರಣೆ
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ

ಮಡಿಕೇರಿ, ಜು.17: ಡಿವೈಎಸ್ಪಿ ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ. ಜಾರ್ಜ್, ಲೋಕಾಯುಕ್ತ ಐಜಿಪಿ ಪ್ರಣವ್ ಮೊಹಂತಿ ಹಾಗೂ ಪೊಲೀಸ್ ಇಂಟೆಲಿಜೆನ್ಸ್ ಎಡಿಜಿಪಿ ಎ.ಎಂ. ಪ್ರಸಾದ್ ಅವರ ವಿರುದ್ಧ ಮೃತ ಗಣಪತಿ ಅವರ ಹಿರಿಯ ಪುತ್ರ ನೇಹಾಲ್ ಗಣಪತಿ ಅವರು ದಾಖಲಿಸಿರುವ ಖಾಸಗಿ ದೂರಿನ ವಿಚಾರಣೆ ಜು. 18 ರಂದು ನಡೆಯಲಿದೆ.
ವೀರಾಜಪೇಟೆಯ ವಕೀಲ ಪಿ.ಎನ್. ಅಮೃತ್ ಸೋಮಯ್ಯ ಅವರ ಮೂಲಕ ಜು.11 ರಂದು ನಗರದ ಅಡಿಷನಲ್ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಈ ಮೂವರ ವಿರುದ್ಧ ಕ್ರಿಮಿನಲ್ ಪ್ರೈವೇಟ್ ಕೇಸ್ ದಾಖಲಿಸಲಾಗಿತ್ತು.
ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕೆನ್ನುವ ಉದ್ದೇಶದಿಂದ ಖಾಸಗಿ ದೂರು ದಾಖಲಿಸಲಾಗಿದೆ ಎಂದು ಗಣಪತಿ ಅವರ ಪುತ್ರ ನೇಹಾಲ್ ಗಣಪತಿ ತಿಳಿಸಿದ್ದಾರೆ.
ಸಿಆರ್ಪಿಸಿ ಸೆಕ್ಷನ್ 200ರ ಅಡಿಯಲ್ಲಿ ಖಾಸಗಿ ದೂರು ದಾಖಲಿಸಲಾಗಿದ್ದು, ಮೂವರು ಆರೋಪಿಗಳ ಹೆಸರನ್ನು ಪ್ರಕರಣದಲ್ಲಿ ಸೇರಿಸಬೇಕು ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಲು ನಿರ್ದೇಶನ ನೀಡಬೇಕು ಎಂದು ಮೊಕದ್ದಮೆಯಲ್ಲಿ ಕೋರಿರುವುದಾಗಿ ವಕೀಲ ಅಮೃತ್ ಸೋಮಯ್ಯ ಹೇಳಿದ್ದಾರೆ.





