ಕಳಸಾ ಹೋರಾಟಕ್ಕೆ ಕಳೆಯಿತು ವರುಷ... ಇನ್ನೂ ಮೂಡಲಿಲ್ಲ ರೈತರ ಮೊಗದಲ್ಲಿ ಹರುಷ...!!!

ರೈತರು ಹೋರಾಟಕ್ಕೆಂದು ಬೀದಿಗಿಳಿದರೆಎಲ್ಲಿ ಗೋಲಿಬಾರ್ ಮಾಡಿಬಿಡ್ತಾರೊ ಅನ್ನೊ ಆತಂಕ ರೈತರನ್ನು ಕಾಡ್ತಾ ಇದೆ. ಇದಕ್ಕೆ ಉದಾಹರಣೆಯು ಸಹ ಇದೇ ಉತ್ತರ ಕರ್ನಾಟಕದ ನರಗುಂದದಲ್ಲಿ 80ರ ದಶಕದಲ್ಲಿ ನೀರಿಗಾಗಿಯೇ ನಡೆದ ಹೋರಾಟದ ಸಮಯದಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಲಾಗಿತ್ತು. ಆದರೂ ಎದೆಗುಂದದ ಈ ಭಾಗದ ರೈತರು ಕಳೆದ 2015 ರ ಜು.16ರಂದು ಪಟ್ಟಣದ ಹುತಾತ್ಮ ರೈತರ ವೀರಗಲ್ಲಿನ ಹತ್ತಿರ ಕಳಸಾ ಬಂಡೂರಿ ಹೋರಾಟ ವೇದಿಕೆ ಆರಂಭಿಸಿ ವರ್ಷವಾಯಿತು. ಕಿಂಚಿತ್ತೂ ರೈತಪರ ಯೋಚಿಸದ ರಾಜ್ಯ ಮತ್ತು ಕೇಂದ್ರ ಸರಕಾರಗಳು ರೈತ ಪರವಾಗಿ ಈ ತನಕ ಯಾವುದೇ ನಿರ್ಧಾರ ತೆಗೆದುಕೊಳ್ಳದೆ, ಪ್ರಜಾಪ್ರಭುತ್ವದ ಮೇಲೆ ಮಸಿ ಬಳಿಯುವ ಕೆಲಸ ಮಾಡುತ್ತಿವೆ. ಹಾಗಾಗಿ ಈ ದಿನವನ್ನು ನಾವು ರೈತರ ಪಾಲಿಗೆ ಕರಾಳ ದಿನ ಎಂದು ಆಚರಿಸುತ್ತಿದ್ದೇವೆ. ಉತ್ತರ ಕರ್ನಾಟಕದ 4 ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ ಜಿಲ್ಲೆಗಳು ಸಂಪೂರ್ಣವಾಗಿ ಬಂದ್ ಮಾಡುವ ಮೂಲಕ ಈ ದಿನವನ್ನು ಸಾಂಕೇತಿಕವಾಗಿ ಕರಾಳ ದಿನವನ್ನಾಗಿ ಆಚರಿಸಿದ್ದೇವೆ ಎನ್ನುವುದು ಕಳಸಾ ಬಂಡೂರಿ ಹೋರಾಟಗಾರರ ಮಾತಾಗಿದೆ.
ಕಳಸಾ ಬಂಡೂರಿ, ಗುರ್ಕಿ, ಚೋಟ್ಲಾ ಸೇರಿದಂತೆ ಅನೇಕ ಹಳ್ಳಗಳು ಸೇರಿ ಮಹಾದಾಯಿ ನದಿಯಾಗುತ್ತದೆ. ಬರೋಬ್ಬರಿ 200 ಟಿಎಂಸಿ ನೀರು ಹರಿದು ಗೋವಾ ಬಳಿ ಅರಬ್ಬಿ ಸಮುದ್ರ ಸೇರುತ್ತದೆ. ಆ ನಿಟ್ಟಿನಲ್ಲಿ ಕರ್ನಾಟಕ ಪಾಲಿನ 45 ಟಿಎಂಸಿ ನೀರು ಮಲಪ್ರಭಾ ಜಲಾಶಯಕ್ಕೆ ಹರಿಸಿದರೆ, ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗೆ ಕುಡಿಯುವ ಮತ್ತು ನೀರಾವರಿ ಸೌಲಭ್ಯ ಒದಗಿಸಿದಂತಾಗುತ್ತದೆ. ಇದರಿಂದ ಐದು ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಿ ಶೇ.70 ಬರಗಾಲ ತಗ್ಗಿಸಿದಂತಾಗುತ್ತದೆ. ಆ ಕಾರಣದಿಂದಾಗಿ ಇಲ್ಲಿನ ರೈತರು ಪ್ರತಿಭಟಿಸಿದರೂ ಕ್ಯಾರೆ ಅನ್ನುತ್ತಿಲ್ಲ ರಾಜ್ಯ ಮತ್ತು ಕೇಂದ್ರ ಸರಕಾರ.
ಇ-ಮೇಲ್ ಸರದಿ
ಕಳೆದ ಒಂದು ವರ್ಷದಿಂದ ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕಾಗಿ ರಾಜ್ಯದ ರೈತಪರ, ಕನ್ನಡಪರ ಸಂಘಟನೆಗಳು, ಚಿತ್ರೋದ್ಯಮದವರು, ರೈತರು ಫ್ರೀಡಂ ಪಾರ್ಕಿನಲ್ಲಿ ಒಂದು ವಾರ ಕಾಲ ಬೀಡು ಬಿಟ್ಟು ಪ್ರತಿಭಟನೆಯ ಅಜೆಂಡಾವನ್ನೇ ಬದಲಿಸಿ, ಕತ್ತೆ ಮೆರವಣಿಗೆ, ರಥಯಾತ್ರೆ ಮೂಲಕ ರೈತ ಜಾಗೃತಿ ಕಾರ್ಯಕ್ರಮ,ಹೆದ್ದಾರಿ ತಡೆ, ಕೂಡಲಸಂಗಮದಿಂದ ಕಣಕುಂಬಿವರೆಗೆ ಸುಮಾರು 700 ಕಿ.ಮೀ. ಪಾದಯಾತ್ರೆ, ರೈತ ಬಂದ ದಾರಿ ಬಿಡಿ,ಮಹಾದಾಯಿ ನೀರು ಕೊಡಿ, ಉಪವಾಸ ಹೋರಾಟ, ರಕ್ತದಲ್ಲಿ ಪ್ರಧಾನಿಗೆ ಪತ್ರ, ರೈಲು ತಡೆ, ಸೈಕಲ್ ಮೂಲಕ ರಾಜ್ಯ ಸುತ್ತಿ ಹೋರಾಟದ ಜಾಗೃತಿ ಮೂಡಿಸಿದರು. ಇದಕ್ಕೆ ಸ್ಪಂದಿಸದ ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಉತ್ತರ ಕರ್ನಾಟಕದ ರೈತರು ಬಹಳ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಪ್ರಧಾನಿಯವರಿಗೆ ಇ-ಮೇಲ್ ಕಳುಹಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿಕೊಂಡಿದ್ದಾರೆ.
ಕಪ್ಪುಬಟ್ಟೆ ಧರಿಸಿ ವೌನ ಪ್ರತಿಭಟನೆ
ಮಹಾದಾಯಿ ನದಿ ಜೋಡಣೆ ಮತ್ತು ಕಳಸಾ ಬಂಡೂರಿ ನಾಲಾ ತಿರುವು ಯೋಜನೆ ಅನುಷ್ಠಾನಕ್ಕಾಗಿ ರೈತರು ಇಷ್ಟೆಲ್ಲಾ ಪ್ರತಿಭಟಿಸಿ,ಪ್ರತಿಭಟನೆಯ ಸಮಯದಲ್ಲೂ ಸಾವನ್ನಪ್ಪಿದ ರೈತರ ಉದಾಹರಣೆಗಳಿವೆ. ಗದಗ ಧಾರವಾಡ ನಾಲ್ಕು ಬಾರಿ ಸಂಪೂರ್ಣ ಬಂದ್ ಮಾಡಲಾಗಿತ್ತು. ಪ್ರತಿಭಟನೆಯ ಕಾವು ರಾಜ್ಯವ್ಯಾಪಿ ತಟ್ಟಿ ಒಂದು ಬಾರಿ ಕರ್ನಾಟಕ ಬಂದ್ ಮಾಡಿದರೂ ಎಚ್ಚೆತ್ತುಕೊಳ್ಳದ ಸರಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಇಲ್ಲಿನ ರೈತರು ಕಂಗಾಲಾಗಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಶಾಸಕರು ಮತ್ತು ಸಂಸದರ ಮನೆ ಮುಂದೆಲ್ಲಾ ಧರಣಿ, ಪ್ರತಿಭಟನೆ ಮಾಡಿ ಸಾಕಾಗಿ ಶನಿವಾರ ರೈತರು, ಸಂಘಟನಾಕಾರರು ಕಪ್ಪುಬಟ್ಟೆ ಧರಿಸಿ ವೌನ ಪ್ರತಿಭಟನೆ ನಡೆಸಿದರು.
ತವರು ಜಿಲ್ಲೆ ಗದಗ್ನಲ್ಲಿ ಶನಿವಾರ ಸಂಪೂರ್ಣ ಬಂದ್ ಹಿನ್ನೆಲೆಯಲ್ಲಿ ತೆರೆದಿದ್ದ ಅಂಗಡಿ, ತರಕಾರಿ ಮಾರ್ಕೆಟನ್ನು ಆಕ್ರೋಶಗೊಂಡ ರೈತರು ಧ್ವಂಸಗೊಳಿಸಿದರು. ಹಳ್ಳಿ ಹಳ್ಳಿಗಳಿಂದ ತಂಡೋಪತಂಡವಾಗಿ ಬಂದ ರೈತರು ಕರಾಳ ದಿನಕ್ಕೆ ಕಪ್ಪುಬಟ್ಟೆ ಧರಿಸುವುದರ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಂಡರು.ಇದಕ್ಕೆ ತೋಂಟದ ಸಿದ್ದಲಿಂಗ ಶ್ರೀಗಳು ಸಹ ಬೆಂಬಲ ಸೂಚಿಸಿದರು. ಇನ್ನಾದರೂ ರಾಜ್ಯ ಮತ್ತು ಕೇಂದ್ರ ಸರಕಾರ ಮಲತಾಯಿ ಧೋರಣೆ ತೊರೆದು ರೈತ ಪರವಾಗಿ ತನ್ನ ನಿಲುವು ಮಂಡಿಸಿದರೆ ಸರಿ. ಇಲ್ಲದಿದ್ದರೆ ಈ ಹೋರಾಟ ಯಾವ ಮಟ್ಟಕ್ಕೆ ಹೊಗುತ್ತದೆ ಎನ್ನುವುದನ್ನು ಸರಕಾರ ಬೇಗ ಅರಿತು ತನ್ನ ನಿಲುವನ್ನು ಮಂಡಿಸಬೇಕು ಎನ್ನುವುದು ಈ ಭಾಗದ ರೈತರ ಹಾಗೂ ಪ್ರತಿಭಟನಾಕಾರರ ವೌನ ಮಾತಾಗಿದೆ.







