ಬೀದಿಬದಿ ವ್ಯಾಪಾರಿಗಳ ವಿರುದ್ಧ ನ್ಯಾಯಾಲಯದ ಕೆಂಗಣ್ಣು!
ಹೊಸದಿಲ್ಲಿ, ಜು.17: ವಾಣಿಜ್ಯ ಮಳಿಗೆಗಳ ಮೂಲಕ ವಹಿವಾಟು ನಡೆಸುವ ವ್ಯಾಪಾರಿಗಳ ಮೂಲಭೂತ ಹಕ್ಕನ್ನು ಬೀದಿಬದಿ ವ್ಯಾಪಾರಿಗಳು ಉಲ್ಲಂಘಿಸುತ್ತಿದ್ದಾರೆ. ಜೊತೆಗೆ ಇವರಿಂದ ಸಾರ್ವಜನಿಕರಿಗೆ ಭದ್ರತಾ ಸಮಸ್ಯೆಯೂ ಉದ್ಭವಿಸುತ್ತಿದೆ ಎಂದು ದಿಲ್ಲಿ ನ್ಯಾಯಾಲಯ ಹೇಳಿದೆ.
ಅಂಗಡಿ ಮಳಿಗೆಯವರು ದೊಡ್ಡ ಮೊತ್ತದ ಬಾಡಿಗೆ, ತೆರಿಗೆ ನೀಡುವ ಜೊತೆಗೆ ವಹಿವಾಟು ನಡೆಸಲು ದೊಡ್ಡ ಪ್ರಮಾಣದ ಬಂಡವಾಳ ಹೂಡಿರುತ್ತಾರೆ. ಆದರೆ ಬೀದಿಬದಿ ವ್ಯಾಪಾರಿಗಳು ಅಂಗಡಿಗಳ ಎದುರಲ್ಲೇ ಕುಳಿತು, ಸ್ವಲ್ಪಹಣವನ್ನೂ ನೀಡದೇ ಅಥವಾ ತುಂಡುಭೂಮಿಯನ್ನೂ ಖರೀದಿಸದೇ ತಮ್ಮ ವಹಿವಾಟು ನಡೆಸುತ್ತಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಗೌರವ್ ರಾವ್ ಹೇಳಿದ್ದಾರೆ.
ಹಲವು ಸಂದರ್ಭಗಳಲ್ಲಿ ಇಂಥ ಬೀದಿಬದಿ ವ್ಯಾಪಾರ ಉಭಯ ವರ್ಗದ ಸಂಘರ್ಷಕ್ಕೆ ಕಾರಣವಾಗಿ ಕಾನೂನು ಮತ್ತು ಸುವ್ಯವಸ್ಥೆಗೂ ಧಕ್ಕೆ ತರುವ ಸಾಧ್ಯತೆ ಇರುತ್ತದೆ. ಕಾನೂನುಬದ್ಧ ಅಂಗಡಿಗಳ ಮುಂದೆಯೇ ತಮ್ಮ ಸ್ಟಾಲ್ ಹಾಕುವ ಮೂಲಕ ಅಥವಾ ವಹಿವಾಟು ಮಾಡುವ ಮೂಲಕ ಸಂಘರ್ಷಕ್ಕೆ ಕಾರಣರಾಗುತ್ತಿದ್ದಾರೆ ಎಂದು ವಿವರಿಸಿದ್ದಾರೆ.
ಹಲವು ಬಾರಿ ಇಂಥ ಬೀದಿಬದಿ ವ್ಯಾಪಾರಿಗಳು ಅಂಗಡಿಯವರ ಮೂಲಭೂತ ಹಕ್ಕು ಉಲ್ಲಂಘಿಸುತ್ತಾರೆ. ಸಾಮಾನ್ಯವಾಗಿ ಇಂಥ ವಾಣಿಜ್ಯ ಮಳಿಗೆಗಳ ಮೂಲಕ ವಹಿವಾಟು ನಡೆಸುತ್ತಿರುವ ವ್ಯಾಪಾರಿಗಳು, ಭಾರೀ ಪ್ರಮಾಣದ ಬಾಡಿಗೆಯನ್ನೂ ನೀಡುತ್ತಾರೆ. ತೆರಿಗೆ ಪಾವತಿಯ ಜೊತೆಗೆ ದೊಡ್ಡ ಮೊತ್ತದ ಹೂಡಿಕೆಯನ್ನೂ ಮಾಡಿರುತ್ತಾರೆ. ಅದರೆ ಬೀದಿ ಬದಿ ವ್ಯಾಪಾರಿಗಳು ಇಂಥ ಅಂಗಡಿ ಮಳಿಗೆಗಳ ಮುಂದೆಯೇ ಕೂತು ತೆರಿಗೆ ನೀಡದೇ ಅಥವಾ ಒಂದಿಂಚು ಭೂಮಿಯನ್ನೂ ಖರೀದಿಸದೇ ವಹಿವಾಟು ನಡೆಸುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಇದು ಅಂಗಡಿಯವರಿಗೆ ಆಗುತ್ತಿರುವ ಅನ್ಯಾಯ ಹಾಗೂ ನ್ಯಾಯಸಮ್ಮತ ವಹಿವಾಟಿಗೆ ವಿರುದ್ಧವಾದುದು ಎಂದು ವಿಶ್ಲೇಷಿಸಿದ್ದಾರೆ.
ಇಂಥ ಬೀದಿಬದಿ ವ್ಯಾಪಾರ ಸಾರ್ವಜನಿಕರಿಗೆ ಕಿರಿ ಕಿರಿ ಮಾಡುವುದು ಮಾತ್ರವಲ್ಲದೇ. ಸಾರ್ವಜನಿಕ ಭದ್ರತೆ ಹಾಗೂ ಸುರಕ್ಷತೆಯೂ ಧಕ್ಕೆ ತರುತ್ತದೆ ಎಂದು ಮ್ಯಾಜಿಸ್ಟ್ರೇಟ್ ಅಭಿಪ್ರಾಯಪಟ್ಟಿದ್ದಾರೆ.