ಒಳಹರಿವಿನಲ್ಲಿ ಗಣನೀಯ ಪ್ರಮಾಣದ ಕುಸಿತ
ಮಲೆನಾಡಿನಲ್ಲಿ ಕಣ್ಮರೆಯಾದ ಮಳೆ
ಶಿವಮೊಗ್ಗ, ಜು.18: ಏಕಾಏಕಿ ಮಲೆನಾಡಿನಲ್ಲಿ ಮಳೆ ಕಣ್ಮರೆಯಾಗಿದೆ. ಕಳೆದೆರೆಡು ವಾರಗಳ ಹಿಂದಷ್ಟೆ ಧಾರಾಕಾರ ಮಳೆಯಿಂದ ಪ್ರವಾಹದ ಭೀತಿ ಸೃಷ್ಟಿಸಿ ಮೈದುಂಬಿ ಹರಿಯುತ್ತಿದ್ದ ನದಿಗಳ ನೀರಿನ ಹರಿವಿನಲ್ಲಿ ಇಳಿಕೆಯಾಗಿದೆ. ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಗಣನೀಯ ಪ್ರಮಾಣದ ಕುಸಿತ ಕಂಡುಬಂದಿದೆ. ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಮಳೆ ಅಂಕಿಅಂಶದ ಮಾಹಿತಿ ಪ್ರಕಾರ, ಸೋಮವಾರ ಬೆಳಗ್ಗೆ 8:30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಏಳು ತಾಲೂಕು ಕೇಂದ್ರದಲ್ಲಿ ಬಿದ್ದ ಮಳೆಯ ಸರಾಸರಿಯ ಪ್ರಮಾಣ ಕೇವಲ 00.80 ಮಿ.ಮೀಟರ್ (ಮಿ.ಮೀ.) ಆಗಿದೆ.
ಶಿವಮೊಗ್ಗ ತಾಲೂಕಿನಲ್ಲಿ 00.00ಮಿ.ಮೀ., ಭದ್ರಾವತಿ 00.00 ಮಿ.ಮೀ., ತೀರ್ಥಹಳ್ಳಿ 02.40 ಮಿ.ಮೀ., ಸಾಗರ 00.20 ಮಿ.ಮೀ., ಶಿಕಾರಿಪುರ 00.00 ಮಿ.ಮೀ., ಸೊರಬ 00.00 ಮಿ.ಮೀ. ಹಾಗೂ ಹೊಸನಗರ ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿ 03.00 ಮಿ.ಮೀ. ಮಳೆಯಾಗಿದೆ. ಎಡಬಿಡದೆ ವರ್ಷಧಾರೆಯಾಗುತ್ತಿದ್ದ ಜಿಲ್ಲೆಯ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಆಗುಂಬೆ, ಮಾಣಿ, ಹುಲಿಕಲ್ಲು, ಮಾಸ್ತಿಕಟ್ಟೆ, ಸಾವೇಹಕ್ಲು ಪ್ರದೇಶಗಳಲ್ಲಿ ವರ್ಷಧಾರೆ ಇಳಿಕೆಯಾಗಿದೆ. ಮಾಣಿಯಲ್ಲಿ 4ಮಿ.ಮೀ., ಹುಲಿಕಲ್ಲುವಿನಲ್ಲಿ 3 ಮಿ.ಮೀ. ಮಳೆಯಾಗಿದೆ. ಕುಸಿತ: ಕಳೆದೊಂದು ವಾರದಿಂದ ಜಲಾನಯನ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಇಳಿಕೆಯಾಗಿರುವ ಕಾರಣದಿಂದ ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ತೀವ್ರ ಇಳಿಕೆ ಕಂಡುಬಂದಿದೆ. ಸೋಮವಾರ ಬೆಳಗ್ಗಿನ ಮಾಹಿತಿ ಪ್ರಕಾರ, ರಾಜ್ಯದ ಪ್ರಮುಖ ಡ್ಯಾಂ ಲಿಂಗನಮಕ್ಕಿಯ ಒಳಹರಿವು 3695 ಕ್ಯೂಸೆಕ್ಸ್ ಇದೆ. ಡ್ಯಾಂನಲ್ಲಿ ನೀರು ಸಂಗ್ರಹಣೆಗೆ ಒತ್ತು ನೀಡಿರುವ ಹಿನ್ನೆಲೆಯಲ್ಲಿ ಹೊರ ಹರಿವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಡ್ಯಾಂನ ನೀರಿನ ಮಟ್ಟ 1,775.50 (ಗರಿಷ್ಠ ಮಟ್ಟ: 1,819) ಅಡಿಯಿದ್ದು, ಡ್ಯಾಂ ವ್ಯಾಪ್ತಿಯಲ್ಲಿ 2.40 ಮಿ.ಮೀ. ಮಳೆಯಾಗಿದೆ. ಶಿವಮೊಗ್ಗ-ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿಯಾದ ಭದ್ರಾ ಜಲಾಶಯದ ಒಳಹರಿವು 3,652 ಕ್ಯೂಸೆಕ್ಸ್ಗೆ ಇಳಿಕೆಯಾಗಿದೆ. 122 ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂನಲ್ಲಿ 144.40 (ಗರಿಷ್ಠ ಮಟ್ಟ: 186) ಅಡಿ ನೀರು ಸಂಗ್ರಹವಾಗಿದೆ. ಡ್ಯಾಂ ವ್ಯಾಪ್ತಿಯಲ್ಲಿ 01.00 ಮಿ.ಮೀ. ಮಳೆಯಾಗಿದೆ. ಶಿವಮೊಗ್ಗ ತಾಲೂಕಿನ ಗಾಜನೂರು ಬಳಿಯರುವ ತುಂಗಾ ಜಲಾಶಯವು ಈಗಾಗಲೇ ಗರಿಷ್ಠ ಮಟ್ಟವಾದ 588.24 ಅಡಿ ತಲುಪಿದೆ. ಪ್ರಸ್ತುತ ಜಲಾಶಯಕ್ಕೆ 6,181 ಕ್ಯೂಸೆಕ್ಸ್ ಒಳಹರಿವಿದ್ದು, 5,359 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಮಾಣಿ ಜಲಾಶಯದ ಒಳಹರಿವು 550 ಕ್ಯೂಸೆಕ್ಸ್ ಇದ್ದು, 661 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಡ್ಯಾಂನ ನೀರಿನ ಮಟ್ಟ 578.95 (ಗರಿಷ್ಠ ಮಟ್ಟ: 594.36) ಅಡಿಯಿದೆ. ಹಿನ್ನಡೆ:
ಜಿಲ್ಲೆಯಾದ್ಯಂತ ಮಳೆ ಕಣ್ಮರೆಯಾಗಿರುವುದು ಭತ್ತ ಬೆಳೆಗಾರರಲ್ಲಿ ತೀವ್ರ ಆತಂಕ ಉಂಟು ಮಾಡಿದೆ. ಹಲವು ಪ್ರದೇಶಗಳಲ್ಲಿ ಭತ್ತ ನಾಟಿ ಕಾರ್ಯ ಆರಂಭದ ಮೇಲೆ ಪರಿಣಾಮ ಬೀರಿದ್ದು, ನಾಟಿ ಪ್ರಕ್ರಿಯೆ ವಿಳಂಬವಾಗುವಂತೆ ಮಾಡಿದೆ. ಮತ್ತೊಂದೆಡೆ ಮಳೆ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಡ್ಯಾಂ ಹಾಗೂ ಕೆರೆಕಟ್ಟೆಗಳಲ್ಲಿ ನೀರು ಸಂಗ್ರಹಣೆಯಾಗಿಲ್ಲ.







