ಕಾಶ್ಮೀರ: ನಾಗರಿಕರ ಪ್ರಾಣ ಹಾನಿಗೆ ಸೇನೆ ವಿಷಾದ
ಜಯನಗರ, ಜು.19: ದಕ್ಷಿಣ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಹಾಗೂ ಹಿಜ್ಬುಲ್ ಉಗ್ರ ಬುರ್ಹಾನ್ ವಾನಿ ಹತ್ಯೆಯ ಪ್ರತಿಭಟನಕಾರರ ನಡುವಿನ ಘರ್ಷಣೆಯ ವೇಳೆ ನಾಗರಿಕರು ಸಾವನ್ನಪ್ಪಿರುವ ಬಗ್ಗೆ ಸೇನೆಯು ವಿಷಾದ ವ್ಯಕ್ತಪಡಿಸಿದೆ.ಮಹಿಳೆಯೊಬ್ಬಳು ಇಂದು ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆಯುವುದರೊಂದಿಗೆ ಹಿಂಸಾಚಾರದಲ್ಲಿ ಬಲಿಯಾದವರ ಸಂಖ್ಯೆ 43ಕ್ಕೇರಿದೆ. ಕಣಿವೆಯಲ್ಲಿ ಕರ್ಫ್ಯೂ ಇಂದೂ ಮುಂದುವರಿದಿದೆ.ನಿನ್ನೆ, ಗುಂಡು ಹಾರಾಟದ ನಡುವೆ ಸಿಲುಕಿ ಗಾಯಗೊಂಡಿದ್ದ ನೀಲೋಫರ್ ಎಂಬ ಮಹಿಳೆ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾಳೆ.ನಿನ್ನೆ ಕಾಜಿಗುಂಡ್ನಲ್ಲಿ ಸೇನಾ ವಾಹನವೊಂದರ ಮೇಲೆ ಕಲ್ಲೆಸೆದ ಗುಂಪನ್ನು ಚದುರಿಸಲು ಜವಾನರು ಗುಂಡು ಹಾರಿಸಿದಾಗ ಆಕೆ ಗಾಯಗೊಂಡಿದ್ದಳು. ಅವಳಲ್ಲದೆ, ಒಬ್ಬಳು ಮಹಿಳೆ ಸಹಿತ ಇತರ ಮೂವರು ಘಟನೆಯಲ್ಲಿ ಸಾವಿಗೀಡಾಗಿದ್ದು, 7 ಮಂದಿ ಗಾಯಗೊಂಡಿದ್ದರು.ಚುರಾಟ್ ಹಾಗೂ ಕಾಜಿಗುಂಡ್ಗಳಲ್ಲಿ ದೊಡ್ಡ ಗುಂಪೊಂದು ಸೈನಿಕರ ಮೇಲೆ ಭಾರೀ ಕಲ್ಲು ತೂರಾಟ ಹಾಗೂ ಅವರ ಶಸ್ತ್ರಾಸ್ತ್ರಗಳನ್ನು ಸೆಳೆಯುವ ಯತ್ನ ನಡೆಸಿದಾಗ ಅನಿವಾರ್ಯವಾಗಿ ಪಡೆಗಳು ಗುಂಡು ಹಾರಿಸಬೇಕಾಯಿತು. ಆಗ ದುರದೃಷ್ಟವಶಾತ್ ಸಂಭವಿಸಿದ ಜೀವ ಹಾನಿಗಳಿಗಾಗಿ ಸೇನೆಯು ತೀವ್ರವಾಗಿ ವಿಷಾದಿಸುತ್ತಿದೆಯೆಂದು ಹೇಳಿಕೆಯೊಂದರಲ್ಲಿ ಸೇನೆ ತಿಳಿಸಿದೆ.