ಪ್ರಧಾನಿಯವರು ಮಧ್ಯಸ್ಥಿಕೆ ವಹಿಸಲಿ
ಮಾನ್ಯರೆ,
ಗೋವಾ ಮತ್ತು ಕರ್ನಾಟಕ ರಾಜ್ಯದ ನಡುವೆ ಹಲವು ಸಮಯದಿಂದಿರುವ ಮಹಾದಾಯಿ ನದಿ ನೀರು ಹಂಚಿಕೆಯ ಬಗೆಗಿನ ವಿವಾದ ತಾರಕಕ್ಕೇರಿದ್ದು, ಕೂಡಲೇ ದೇಶದ ಪ್ರಧಾನಿಯವರು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಮಧ್ಯಸ್ಥಿಕೆ ವಹಿಸಬೇಕಾಗಿದೆ.
ಮಹಾದಾಯಿ ನದಿ ಹರಿಯುವ ಪ್ರದೇಶದಲ್ಲಿ ಅಧಿಕ ನೀರಿನ ಅಗತ್ಯವಿರುವ ಕಬ್ಬಿನ ಕೃಷಿಯನ್ನು ಕೈಗೊಳ್ಳುವುದರಿಂದಾಗಿ ತನಗೆ ಸಮರ್ಪಕವಾಗಿ ನೀರಿನ ಹಂಚಿಕೆಯಾಗಿಲ್ಲ ಎಂದು ಆರೋಪಮಾಡುವ ಗೋವಾದ ವಾದದಲ್ಲಿ ಹುರುಳಿಲ್ಲವಾಗಿದೆ. ಅಂತಹ ಪ್ರದೇಶದಲ್ಲಿ ಕಬ್ಬಿನ ಬೆಳೆ ಶೇ. 5ರಷ್ಟೇ ಆಗಿದೆ.
ಕರ್ನಾಟಕದಲ್ಲೇ ಹುಟ್ಟಿ ಅಲ್ಲಿಯೇ ಸುಮಾರು 35 ಕಿ.ಮೀ. ಹರಿಯುವ ಮಹಾದಾಯಿ ನದಿಯ ನೀರಿನ ಮೇಲೆ ಕರ್ನಾಟಕಕ್ಕೆ ಯಾವುದೇ ಹಕ್ಕಿಲ್ಲ ಎನ್ನುವ ಗೋವಾದ ವಾದ ಮೂರ್ಖತನದಿಂದ ಕೂಡಿದೆ.
ಹಿಂದೆ ಅನೇಕ ನ್ಯಾಯಮಂಡಳಿಗಳು ಎರಡು ರಾಜ್ಯಗಳಲ್ಲಿ ಹರಿಯುವ ನದಿ ನೀರನ್ನು ಉಭಯರು ಸಮಾನವಾಗಿ ಹಂಚಿಕೊಳ್ಳಬೇಕೆಂದು ಹೇಳಿವೆ. ಆದರೂ ನೀರಿನ ಸಿಂಹಪಾಲು ಪಡೆದು ಈಗ ರಾಜ್ಯದತ್ತ ಕಣ್ಣು ಕೆಕ್ಕರಿಸಿರುವ ಗೋವಾಕ್ಕೆ ವಾಸ್ತವ ಸ್ಥಿತಿಯನ್ನು ಮನದಟ್ಟು ಮಾಡಿ ಪ್ರಧಾನಿಯವರು ಬುದ್ಧಿಹೇಳಬೇಕಾಗಿದೆ.





