ಕೇರಳದಲ್ಲಿ 20ಮಂದಿ ಕಾಣೆಯಾದ ಪ್ರಕರಣ: ಎನ್ಐಎ ತನಿಖೆಗೆ
![ಕೇರಳದಲ್ಲಿ 20ಮಂದಿ ಕಾಣೆಯಾದ ಪ್ರಕರಣ: ಎನ್ಐಎ ತನಿಖೆಗೆ ಕೇರಳದಲ್ಲಿ 20ಮಂದಿ ಕಾಣೆಯಾದ ಪ್ರಕರಣ: ಎನ್ಐಎ ತನಿಖೆಗೆ](https://www.varthabharati.in/sites/default/files/images/articles/2016/07/20/nia-l.jpg)
ಕೊಚ್ಚಿ,ಜುಲೈ 20: ಕೇರಳದ ವಿವಿಧ ಕಡೆಗಳಿಂದ ಇಪ್ಪತ್ತು ಮಂದಿ ನಿಗೂಢವಾಗಿ ಕಾಣೆಯಾದ ಘಟನೆಯ ತನಿಖೆಯನ್ನು ಕೈಗೆತ್ತಿಕೊಳ್ಳಲು ಎನ್ಐಎ ಸಿದ್ಧವಾಗಿದೆ ಎಂದು ವರದಿಯಾಗಿದೆ. ಇವರ ಬಗ್ಗೆ ಎನ್ಐಎ ಕಾಸರಗೋಡು, ತಿರುವನಂತಪುರಂ, ಎರ್ನಾಕುಲಂನಲ್ಲಿ ಪ್ರಾಥಮಿಕ ತನಿಖೆನಡೆಸಿದ್ದು ಇದೀಗ ಎನ್ಐಎ ಈ ಪ್ರಕರಣದ ವಿಸ್ತಾರವಾದ ತನಿಖೆಗೆ ಸಿದ್ಧತೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ. ಎನ್ಐಎಯ ಕೊಚ್ಚಿ ಯುನಿಟ್ ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲು ತಾವು ಸಿದ್ಧ ಎಂದು ಎನ್ಐಎ ನಿರ್ದೇಶನಾಲಯಕ್ಕೆ ವರದಿ ಸಲ್ಲಿಸಿದೆಯೆನ್ನಲಾಗಿದೆ.
ನಿರ್ದೇಶನಾಲಯದ ಅನುಮತಿಸಿಕ್ಕಿದೊಡನೆ ನಾಪತ್ತೆಯಾದವರ ಕುರಿತು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಎಫ್ಐಆರ್ಗಳನ್ನು ಮರು ದಾಖಲಿಸುವ ಮೂಲಕ ಈ ಪ್ರಕರಣವನ್ನು ಎನ್ಐಎ ಮೊದಲು ಕೈಗೆತ್ತಿಕೊಳ್ಳಲಿದೆ ಎಂದು ವರದಿ ತಿಳಿಸಿದೆ.
ಎರ್ನಾಕುಲಂನ ಮೆರಿನ್ ಯಾನೆ ಮರಿಯಾಳ ನಾಪತ್ತೆ ಪ್ರಕರಣದಲ್ಲಿ ಪಾಲಕ್ಕಾಡ್ನ ಯಹ್ಯಾ, ಮುಂಬೈನ ಆರ್ಸಿ ಕುರೈಸಿಯವರನ್ನು ಆರೋಪಿಗಳನ್ನಾಗಿಸಿ ಪಾಲಕ್ಕಾಡ್ ಪೊಲೀಸರು ಕೇಸು ದಾಖಲಿಸಿದ್ದಾರೆ. ಇವರ ವಿರುದ್ಧ ತನಿಖೆ ನಡೆಸಲು ಯಾವುದೇ ಅಡ್ಡಿಗಳಿಲ್ಲ. ಆದ್ದರಿಂದ ಈ ಪ್ರಕರಣವನ್ನು ಮೊದಲು ಎನ್ಐಎ ಕೈಗೆತ್ತಿಕೊಳ್ಳಲಿದೆ ಎಂದು ತಿಳಿದು ಬಂದಿದೆ. ಕಾಣೆಯಾದವರಲ್ಲಿ ಉಳಿದವರ ಕುರಿತು ಪೊಲೀಸರು ಕೇಸು ದಾಖಲಿಸಿಕೊಳ್ಳುವಾಗ ಎನ್ಐಎ ತನಿಖೆಗೆ ಎತ್ತಿಕೊಳ್ಳಲು ಸೂಕ್ತವಾದ ರೀತಿಯಲ್ಲಿ ಕೇಸು ದಾಖಲಿಸಿಕೊಂಡಿಲ್ಲ. ಆದ್ದರಿಂದ ಅವುಗಳಲ್ಲಿ ಕಾನೂನಿನ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಎನ್ಐಎ ಜರಗಿಸಲಿದೆಯೆಂದು ವರದಿ ತಿಳಿಸಿದೆ. ಸಾಮಾನ್ಯವಾಗಿ ಕಾಣೆಯಾದ ಪ್ರಕರಣಗಳು ಎನ್ಐಎ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೆ ರಾಜ್ಯದಿಂದ ಗುಂಪಾಗಿ ಕಾಣೆಯಾದ ಪ್ರಕರಣ ಇದಾಗಿದ್ದು ಎನ್ಐಎ ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದೆ.