ಬಂಟ್ವಾಳ : ಅಂಚೆ ಮೂಲಕ ನದಿ ನೀರು ಪರವಾನಿಗೆ
![ಬಂಟ್ವಾಳ : ಅಂಚೆ ಮೂಲಕ ನದಿ ನೀರು ಪರವಾನಿಗೆ ಬಂಟ್ವಾಳ : ಅಂಚೆ ಮೂಲಕ ನದಿ ನೀರು ಪರವಾನಿಗೆ](https://www.varthabharati.in/sites/default/files/images/articles/2016/07/20/post-box.jpg)
ಬಂಟ್ವಾಳ, ಜು. 20: ನದಿ ನೀರು ಬಳಕೆದಾರರು ಪರವಾನಿಗೆ ನವೀಕರಣ ಖಾತೆ ಬದಲಾವಣೆ ಹೊಸದಾಗಿ ಪಡೆಯಲು ಇನ್ನು ಮುಂದೆ ಹಾಸನಕ್ಕೆ ಹೋಗದೆ ಅಂಚೆ ಮೂಲಕ ಪಡೆಯಬಹುದು. 2011ರ ತನಕ ಮಂಗಳೂರಿನಲ್ಲಿ ನಡೆಯುತ್ತಿದ್ದ ನದಿ ನೀರು ಪರವಾನಿಗೆ ನವೀಕರಣ ಖಾತೆ ಬದಲಾವಣೆ ಹೊಸದಾಗಿ ಪಡೆಯುವ ಪ್ರಕ್ರಿಯೆ ಅಧಿಕಾರಿ ಹಾಸನದ ಜಲಮಾಪನ ವಿಭಾಗಕ್ಕೆ ವರ್ಗಾವಣೆಗೊಂಡು ಉಭಯ ಜಿಲ್ಲೆಯ ನದಿ ನೀರು ಬಳಕೆದಾರರು ಸಂಕಷ್ಟಕ್ಕೀಡಾಗಿದ್ದರು. ಈ ಬಗ್ಗೆ ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ಕೃಷಿಕ ಎಂ.ಸುಬ್ರಹ್ಮಣ್ಯ ಭಟ್ ಸಂಬಂಧಿತ ಇಲಾಖೆ ಜನಪ್ರತಿನಿಧಿಗಳಿಗೆ ಲಿಖಿತ ಮನವಿ ಮಾಡಿ ಸಮಸ್ಯೆ ಇತ್ಯರ್ಥವಾಗದಿದ್ದಾಗ ಲೋಕಾಯುಕ್ತರಿಗೆ ಲಿಖಿತ ದೂರು ನೀಡಿ ಸಮಸ್ಯೆ ಪರಿಹರಿಸಿ ರೈತರ ಹಿತಾಸಕ್ತಿ ಕಾಯುವಂತೆ ಮನವಿ ಸಲ್ಲಿಸಿದರು.ಇದಕ್ಕೆ ಸಂಬಂಧಿಸಿ ಲೋಕಾಯುಕ್ತದಿಂದ ಕಾರ್ಯನಿರ್ವಾಹಕ ಇಂಜಿನಿಯರ್ ಜಲಮಾಪನಾ ಇಲಾಖೆಗೆ ಪತ್ರ ಬರೆದು ಪರವಾನಿಗೆ ರೈತರಿಗೆ ಜಿಲ್ಲೆಯಲ್ಲೆ ದೊರೆಯುವಂತಾಗಬೇಕು. ಹಾಸನಕ್ಕೆ ಅಲೆದಾಡುವ ಪರಿಸ್ಥಿತಿಯನ್ನು ತಪ್ಪಿಸುವಂತೆ ಕ್ರಮಕೈಗೊಳ್ಳಲು ಸೂಚಿಸಿದ ಪ್ರಕಾರ ಅಂಚೆ ಮೂಲಕ ರೈತರು ಸಂಬಂಧಿಸಿದ ದಾಖಲೆ ಒದಗಿಸಿದರೆ ಪ್ರತಿಯಾಗಿ ಅಂಚೆ ಮೂಲಕ ಪರವಾನಿಗೆ ನೀಡುವುದಾಗಿ ಲಿಖಿತವಾಗಿ ತಿಳಿಸಿರುತ್ತಾರೆ.