ಭೂಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಪ್ರತಿಭಟನೆ

ಶಿವಮೊಗ್ಗ, ಜು. 20: ರಾಜ್ಯದಲ್ಲಿ ಸ್ವಂತ ಮನೆಯಿಲ್ಲದೆ ಜೀವನ ಸಾಗಿಸುತ್ತಿರುವ ಬಡವರು, ದಲಿತರು, ದುರ್ಬಲರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ಬಗರ್ಹುಕುಂ ಸಾಗುವಳಿದಾರರಿಗೆ ಭೂ ಒಡೆತನದ ಹಕ್ಕು ಕಲ್ಪಿಸಬೇಕು ಎಂದು ಆಗ್ರಹಿಸಿ, ಭೂಮಿ ಮತ್ತು ಹಕ್ಕು ವಂಚಿತರ ಹೋರಾಟ ಸಮಿತಿಯು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು. ನಂತರ ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಪತ್ರ ಅರ್ಪಿಸಿತು. ಸಾಗುವಳಿ ಭೂಮಿ ಹಾಗೂ ವಸತಿ ನಿವೇಶನ ನಾಡಿನ ಪ್ರತಿಯೊಬ್ಬರ ಹಕ್ಕು ಎಂದು ಘೋಷಿಸಬೇಕು. ಇದರ ಅನುಷ್ಠಾನಕ್ಕಾಗಿ ಕರ್ನಾಟಕ ಭೂ ಸುಧಾರಣೆ ಅಧಿನಿಯಮ 1961 ಮತ್ತು 1974 ಕ್ಕೆ ತಿದ್ದುಪಡಿ ತರಬೇಕು. ಕೃಷಿಕರಿಗೆ ಸ್ವಂತ ಭೂಮಿ, ಸ್ವಾವಲಂಬಿ ಕೃಷಿ ಮತ್ತು ಆಹಾರ ಸ್ವಾವಲಂಬನೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಸ್ವಂತ ಭೂಮಿ ನೀಡಲು ಕಾನೂನಿನ ತೊಡಕಿದ್ದರೆ ಅದನ್ನು ನಿವಾರಿಸಿಕೊಳ್ಳಬೇಕು. ಪ್ರತಿ ಕುಟುಂಬಕ್ಕೆ 5 ಎಕರೆ ಭೂಮಿ ಹಾಗೂ ವಸತಿರಹಿತ ಕುಟುಂಬಕ್ಕೆ 30x
40 ಚದರಡಿಯ ನಿವೇಶನ ಹಂಚಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ನಿಜವಾದ ಫಲಾನುಭವಿಗಳಿಗೆ ಭೂ ಮಂಜೂರಾತಿ ಮಾಡಲು ಸರಕಾರ ವಿಫಲವಾಗಿದೆ. ಭೂ ಕಬಳಿಸಿದ ಬಲಾಢ್ಯರ ವಿಷಯದಲ್ಲಿ ಸರಕಾರಗಳು ರಾಜಿಯಾಗಿವೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕವಾಗಿದೆ. ವ್ಯವಸ್ಥೆಯಲ್ಲಿ ಮನೆ ಮಾಡಿರುವ ತಾರತಮ್ಯ ಧೋರಣೆಗೆ ಸಾಕ್ಷಿಯಾಗಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಹಾಗೂ ಸರಕಾರಿ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡು ಉದ್ದೇಶಿತ ಕೆಲಸಕ್ಕೆ ಬಳಸಲು ಮುಖ್ಯಮಂತ್ರಿ ನೇತೃತ್ವದಲ್ಲಿ ಉನ್ನತ ಸಮಿತಿ ರಚಿಸಬೇಕು. ಈ ಸಮಿತಿಗೆ ರಾಜ್ಯದ ಭೂಮಿಯ ಆಡಿಟಿಂಗ್ ನಡೆಸಬೇಕು. ಭೂಕಬಳಿಕೆ ನೀತಿಯನ್ನು ಪ್ರಕಟಿಸಬೇಕು. ಕನಿಷ್ಠ ಭೂಮಿ ಮತ್ತು ವಸತಿ ಇಲ್ಲದವರ ಪಟ್ಟಿ ತಯಾರಿಸಬೇಕು. ವಸತಿ, ಕೃಷಿ, ಸಣ್ಣ ಕೈಗಾರಿಕೆಗೆ ಬೇಕಾಗುವ ಭೂಮಿ ಪ್ರಮಾಣವನ್ನು ನಿಗದಿ ಮಾಡಬೇಕು. ಕಾರ್ಪೊರೇಟ್ ಶಕ್ತಿಗಳಿಂದ ರೈತರನ್ನು ಕಾಪಾಡಬೇಕು. ಕೃಷಿಯ ಸಮಗ್ರ ಉಳಿವಿಗೆ ಸಮಗ್ರ ನೀತಿ ರೂಪಿಸಬೇಕು. ಮೀಟರ್ ಬಡ್ಡಿಗೆ ಕಡಿವಾಣ ಹಾಕಬೇಕು. ಕೃಷಿ ಸಹಾಯಧನ ನೀಡಬೇಕು. ಕೃಷಿ ಬೆಲೆ ನೀತಿಯನ್ನು ರೂಪಿಸಿ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ಕೆ.ಎಲ್.ಅಶೋಕ್, ಎಂ. ಗುರುಮೂರ್ತಿ, ವೀರೇಶ್, ರಾಘವೇಂದ್ರ, ಶ್ರೀಪಾಲ್, ಶಿವಾನಂದ ಕುಗ್ವೆ, ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.







