ಮಧ್ಯಪ್ರದೇಶ ಶಾಲಾ ದಿನಚರಿಯ ನಕ್ಷೆಯಲ್ಲಿ ಜಮ್ಮು-ಕಾಶ್ಮೀರ ಭಾಗಗಳು ಭಾರತದಿಂದ ಹೊರಗೆ
ಮಾಲಕ, ಪ್ರಾಚಾರ್ಯ ವಿರುದ್ಧ ರಾಷ್ಟ್ರದ್ರೋಹದ ದೂರು
ಭೋಪಾಲ್, ಜು.20: ಶಾಲೆಯ ದಿನಚರಿ ಪುಸ್ತಕದಲ್ಲಿ ಭಾರತದ ನಕ್ಷೆಯನ್ನು ತಪ್ಪಾಗಿ ಮುದ್ರಿಸಿ, ಜಮ್ಮು ಮತ್ತು ಕಾಶ್ಮೀರದ ಕೆಲ ಭಾಗಗಳನ್ನು ಭಾರತದಿಂದ ಹೊರಗಿದೆ ಎಂದು ಮುದ್ರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಧ್ಯಪ್ರದೇಶದ ಸಹ್ದೋಲ್ ಜಿಲ್ಲೆಯ ಶಾಲೆಯೊಂದರ ಮಾಲಕ ಹಾಗೂ ಪ್ರಾಚಾರ್ಯ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂವರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಲಾಗಿದೆ. ಶಾಲೆಯಿಂದ ವಿದ್ಯಾರ್ಥಿಗಳಿಗೆ ನೀಡಲಾದ ದಿನಚರಿ ಪುಸ್ತಕದ ನಕ್ಷೆಯಲ್ಲಿ ಜಮ್ಮು-ಕಾಶ್ಮೀರದ ಕೆಲ ಪ್ರದೇಶಗಳು ಭಾರತದ ಗಡಿ ರೇಖೆಯಿಂದ ಹೊರಗಿವೆ. ಈ ಸಂಬಂಧ ಗ್ರೀನ್ ಬೆಲ್ಸ್ ಪಬ್ಲಿಕ್ ಸ್ಕೂಲ್ನ ಮಾಲಕ ಮುಹ್ಮದ್ ಶರೀಫ್, ಪ್ರಾಚಾರ್ಯ ಗೋವಿಂದಚಂದ್ರ ದಾಸ್ ಹಾಗೂ ಮುದ್ರಣಾಲಯದ ಮಾಲಕ ಎ.ಕೆ.ಅಗರ್ವಾಲ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಭಾರತೀಯ ಜನತಾ ಪಕ್ಷದ ಯುವಮೋರ್ಚಾ ಕಾರ್ಯಕರ್ತರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಪ್ರಮಾದವಶಾತ್ ಈ ತಪ್ಪುಆಗಿದೆ ಎಂದು ಶರೀಫ್ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಈ ಶಾಲೆ ಜಿಲ್ಲಾ ಕೇಂದ್ರದಿಂದ 22 ಕಿ.ಮೀ. ದೂರದ ಬುಧಾರ್ ಎಂಬ ಪಟ್ಟಣದಲ್ಲಿದ್ದು, 1,110 ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ.