ದ.ಕ.: ಪ್ರತೀ ಗುರುವಾರ ಜನಸಂಪರ್ಕ ಸಭೆ
ಮಂಗಳೂರು, ಜು.20: ದ.ಕ ಜಿಲ್ಲೆಯಲ್ಲಿ ಇನ್ನು ಮುಂದೆ ಪ್ರತೀ ಗುರುವಾರ ಒಂದೊಂದು ತಾಲೂಕಿನಲ್ಲಿ ಜನ ಸಂಪರ್ಕ ಸಭೆಯನ್ನು ಆಯೋಜಿಸಲಾಗಿದೆ.
ಪ್ರತೀ ತಿಂಗಳ ಮೊದಲ ಗುರುವಾರ ಮಂಗಳೂರು ತಾಲೂಕು, ಎರಡನೆ ಗುರುವಾರ ಬಂಟ್ವಾಳ, ಮೂರನೆ ಗುರುವಾರ ಬೆಳಗ್ಗೆ ಪುತ್ತೂರು, ಮಧ್ಯಾಹ್ನ ಸುಳ್ಯ ಹಾಗೂ ನಾಲ್ಕನೆ ಗುರುವಾರ ಬೆಳ್ತಂಗಡಿ ತಾಲೂಕಿನಲ್ಲಿ ಜನ ಸಂಪರ್ಕ ಸಭೆ ನಡೆಯಲಿದೆ.
ಆಯಾ ತಾಪಂ ಸಭಾಂಗಣದಲ್ಲಿ ಜನಸಂಪರ್ಕ ಸಭೆ ನಡೆಯಲಿದ್ದು, ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಸಭೆ ನಡೆಯುವ 5 ದಿನ ಮೊದಲು ಆಯಾ ತಾಲೂಕು ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ತೆರೆದು ಸಾರ್ವಜನಿಕರ ಅರ್ಜಿ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಜನಸಂಪರ್ಕ ಸಭೆಯಲ್ಲಿ ಈ ಅರ್ಜಿಗಳ ಮೇಲೆ ಅಗತ್ಯ ಕ್ರಮದೊಂದಿಗೆ ಹಾಜರಾಗಲಿದ್ದಾರೆ. ಇದಲ್ಲದೇ, ಜನ ಸಂಪರ್ಕ ದಿನದಂದು ಸಾರ್ವಜನಿಕರ ಅಹವಾಲು ಅರ್ಜಿ ಸ್ವೀಕರಿಸಲು ಕಾರ್ಯಕ್ರಮ ಸ್ಥಳದಲ್ಲಿ ಕೌಂಟರ್ ತೆರೆಯಲಾಗುತ್ತದೆ.
ಜನಸಂಪರ್ಕ ಸಭೆಯ ಬಗ್ಗೆ ಗ್ರಾಪಂ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಮುಂಚಿತವಾಗಿಯೇ ತಿಳಿಸಬೇಕು. ಈ ಸಭೆಯಲ್ಲಿ ಪಡೆದ ಅರ್ಜಿಗಳನ್ನೂ ಅಧಿಕಾರಿಗಳು ಸ್ಥಳದಲ್ಲೇ ಇತ್ಯರ್ಥಗೊಳಿಸಬೇಕು. ಸಾಧ್ಯವಾಗದಿದ್ದಲ್ಲಿ, ಮುಂದಿನ ಜನಸಂಪರ್ಕ ಸಭೆಯೊಳಗೆ ಕಡ್ಡಾಯವಾಗಿ ಇತ್ಯರ್ಥ ಮಾಡಬೇಕು ಎಂದು ಜಿಲ್ಲಾಧಿಕಾರಿ ಪ್ರಕಟನೆ ಯಲ್ಲಿ ತಿಳಿಸಿದ್ದಾರೆ.