ರಾವ್ ಆ್ಯಂಡ್ ರಾವ್ ವೃತ್ತದ ದುರವಸ್ಥೆ ಖಂಡಿಸಿ ಸಿಪಿಎಂನಿಂದ ಪ್ರತಿಭಟನೆ
ಮಂಗಳೂರು, ಜು.20; ನಗರದ ಹೃದಯಭಾಗದಲ್ಲಿರುವ ರಾವ್ ಆ್ಯಂಡ್ ರಾವ್ ವೃತ್ತದ ಬಳಿಯ ಅವ್ಯವಸ್ಥೆಯನ್ನು ವಿರೋಧಿಸಿ ಸಿಪಿಎಂ ಮಂಗಳೂರು ನಗರ ಕೇಂದ್ರ ವಿಭಾಗ ಸಮಿತಿ ವತಿಯಿಂದ ಪ್ರತಿಭಟನಾ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸುನಿಲ್ಕುಮಾರ್ ಬಜಾಲ್ ಮಾತನಾಡಿ, ಜೂನ್ 15ರಿಂದ ಅಕ್ಟೋಬರ್ 15ರ ಮಳೆಗಾಲದ ಅವಧಿಯಲ್ಲಿ ಮಂಗಳೂರು ನಗರದಲ್ಲಿ ಯಾವ ರಸ್ತೆ ಒಡೆಯುವ ಕಾಮಗಾರಿ ಮಾಡಬಾರದೆಂದು ಪಾಲಿಕೆ ನಿರ್ಣಯ ಕೈಗೊಂಡಿದ್ದರೂ, ರಾವ್ ಆ್ಯಂಡ್ ರಾವ್ ವೃತ್ತ ದಲ್ಲಿ ಚರಂಡಿ ಕಾಮಗಾರಿಗಾಗಿ ರಸ್ತೆ ಒಡೆದು ಕೈಬಿಟ್ಟಿರುತ್ತಾರೆ. ತುರ್ತು ಕಾಮಗಾರಿಗಾಗಿ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿಯನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೂ ಕಾಮಗಾರಿಯನ್ನು ಆರಂಭಿಸದೆ ನಗರ ಕೇಂದ್ರವನ್ನು ದುರ್ನಾತಗೊಳಿಸಿರುವುದು ಖಂಡನೀಯ ಎಂದು ಹೇಳಿದರು.
ಈ ಸಂದರ್ಭ ಮಾತನಾಡಿದ ಸಿಪಿಎಂ ಮಂಗಳೂರು ನಗರ ಸಮಿತಿ ಸದಸ್ಯ ವಾಸುದೇವ ಉಚ್ಚಿಲ್, ರಾವ್ ಆ್ಯಂಡ್ ರಾವ್ ವೃತ್ತದಲ್ಲಿ ನಗರದ ಮೂರು ವಾರ್ಡುಗಳು ಸಂಧಿಸಿದ್ದು ಮೂವರು ಕಾರ್ಪೊರೇಟರುಗಳು ಅಭಿವೃದ್ಧಿಯ ಜವಾಬ್ದಾರಿ ಹೊಂದಿದ್ದಾರೆ. ಸ್ವಚ್ಛತಾ ಅಭಿಯಾನದ ದೀಕ್ಷೆ ತೊಟ್ಟಿರುವ ಬಿಜೆಪಿಯ ಇಬ್ಬರು ಕಾರ್ಪೊರೇಟರುಗಳಿದ್ದೂ, ದುರಸ್ತಿ ಕಾರ್ಯ ನಡೆಯದಿರುವುದು ಆ ಪಕ್ಷದ ನಾಯಕರ ಇಬ್ಬಂದಿತನವನ್ನು ತೋರಿಸುತ್ತದೆ ಎಂದು ಆಪಾದಿಸಿದರು.
ಇದೇ ವೇಳೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ನಗರಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಿಪಿಎಂ ಮಂಗಳೂರು ನಗರ ಸಮಿತಿ ಸದಸ್ಯ ಯೋಗೀಶ್ ಜಪ್ಪಿನಮೊಗರು, ಬೀದಿಬದಿ ಕಾರ್ಮಿಕರ ಸಂಘಟನೆಯ ಸಂತೋಷ್ ಆರ್.ಎಸ್., ಸಿಪಿಎಂ ನಗರ ಮುಖಂಡರಾದ ಲಿಂಗಪ್ಪ ನಂತೂರು, ಭಾರತಿ ಬೋಳಾರ, ಸುರೇಶ್ ಬಜಾಲ್ ಭಾಗವಹಿಸಿದ್ದರು.







