ಕೆಎಸ್ಸಾರ್ಟಿಸಿ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕ ರ
ಜು.25 ರಿಂದ ರಾಜ್ಯ ವ್ಯಾಪಿ ಬಸ್ ಸಂಚಾರ ಸ್ಥಗಿತ

ಮಡಿಕೇರಿ, ಜು. 21 : ವೇತನ ತಾರತಮ್ಯ ನಿವಾರಣೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಕೆಎಸ್ಸಾರ್ಟಿಸಿ ಸಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ನಿರ್ಧರಿಸಿದೆ.
ಸುಮಾರು 23 ಸಾವಿರ ಕೆಎಸ್ಸಾರ್ಟಿಸಿ ಬಸ್ಗಳು ಜು. 25 ರಿಂದ ಸಂಚಾರವನ್ನು ಸ್ಥಗಿತಗೊಳಿಸಲಿವೆ ಎಂದು ಯೂನಿಯನ್ನ ಪುತ್ತೂರು ವಿಭಾಗದ ಪ್ರಧಾನ ಕಾರ್ಯದರ್ಶಿ ರಿಹಾನ್ ಶೇಖ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಕೆಎಸ್ಸಾರ್ಟಿಸಿ ನೌಕರರ ಬೇಡಿಕೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣ ಮುಷ್ಕರಕ್ಕೆ ಮುಂದಾಗಿರುವುದಾಗಿ ತಿಳಿಸಿದರು. ಕೆಎಸ್ಸಾರ್ಟಿಸಿಯ ನಾಲ್ಕು ನಿಗಮಗಳು ಏಕಕಾಲಕ್ಕೆ ಮುಷ್ಕರವನ್ನು ಆರಂಭಿಸಲಿದ್ದು, ಸುಮಾರು 2 ಕೋಟಿ ಪ್ರಯಾಣಿಕರು ಇದರಿಂದ ತೊಂದರೆ ಅನುಭವಿಸಲಿದ್ದಾರೆ ಎಂದರು.
ಕೊಡಗು ಜಿಲ್ಲೆಯಲ್ಲಿ ಸುಮಾರು 500 ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಲಿದ್ದು, 113 ಕ್ಕೂ ಹೆಚ್ಚು ಬಸ್ಗಳು ಸಂಚಾರ ಮೊಟಕು ಗೊಳಿಸಲಿದೆ ಎಂದು ಅವರು ತಿಳಿಸಿದರು.
ಮೂಲ ವೇತನದಲ್ಲಿ ಶೇ. 35 ರಷ್ಟು ಹೆಚ್ಚಿಸಬೇಕು. ಎಲ್ಲಾ ಭತ್ತೆಗಳನ್ನು ಏರಿಕೆ ಮಾಡಬೇಕು. ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು. ಎನ್ಐಎನ್ಸಿ ಪ್ರಕರಣಗಳಲ್ಲಿ ನಿರ್ವಾಹಕರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಬಾರದು. ನಿರ್ವಾಹಕರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಗೊಳಿಸಬೇಕು. ಚಾಲಕರನ್ನು ಅಪಘಾತ ಪ್ರಕರಣಗಳಿಗೆ ಹೊಣೆಗಾರರನ್ನಾಗಿ ಮಾಡಬಾರದು. ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಅವರು ಇಚ್ಛೆ ಪಡುವ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಿ ಚಾಲಕ ಕಂ ನಿರ್ವಾಹಕ ಕ್ರಮವನ್ನು ಕೈಬಿಡಬೇಕು.ಸಿಬ್ಬಂದಿಯ ವೇತನದಲ್ಲಿ ಅಕ್ರಮ ಕಡಿತವನ್ನು ಪೂರ್ಣವಾಗಿ ರದ್ದು ಮಾಡಬೇಕು.ನೌಕರರು ಹಾಗೂ ಅವರ ಕುಟುಂಬ ವರ್ಗದ ವೈದ್ಯಕೀಯ ವೆಚ್ಚ ಭರಿಸಬೇಕು. ಚಾಲಕರು ಹಾಗೂ ನಿರ್ವಾಹಕರಿಗೆ ಅವರು ಮಾಡುವ ಕೆಲಸಕ್ಕೆ ಅನುಗುಣವಾಗಿ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನವನ್ನು ನೀಡಬೇಕು. ಮಹಿಳಾ ಸಿಬ್ಬಂದಿಯ ಮೇಲಿನ ಕಿರುಕುಳಗಳನ್ನು ತಡೆಯಬೇಕು ಮತ್ತು ಇವರಿಗೆ ವಿಶ್ರಾಂತಿ ಗೃಹದ ವ್ಯವಸ್ಥೆಯನ್ನು ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸುತ್ತಿರುವುದಾಗಿ ರಿಹಾನ್ ಶೇಖ್ ತಿಳಿಸಿದರು. ಕಾರ್ಯದರ್ಶಿ ಮುಹಮ್ಮದ್ ಮಾತನಾಡಿ, 2015 ಡಿ. 31 ರಂದು ವೇತನ ಪರಿಷ್ಕರಣೆಯ ಕಾಲಾವಧಿ ಮುಕ್ತಾಗೊಂಡು 8 ತಿಂಗಳು ಕಳೆದರೂ ನೌಕರರ ಬೇಡಿಕೆಗಳಿಗೆ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲವೆಂದು ಆರೋಪಿಸಿದರು.
ಸರಕಾರ ಶೇ. 8 ರಷ್ಟು ಮಾತ್ರ ವೇತನ ಹೆಚ್ಚಳ ಮಾಡಿದ್ದು, ಸಂಸ್ಥೆಗೆ ನಷ್ಟವಾಗುತ್ತಿದೆ ಎನ್ನುವ ಕಾರಣ ನೀಡಲಾಗುತ್ತಿದೆ. ನಷ್ಟಕ್ಕೆ ನೌಕರರು ಕಾರಣವಲ್ಲವೆಂದು ಸ್ಪಷ್ಟಪಡಿಸಿದ ಅವರು ಬಸ್ಗಳಿಗೆ ಕಳಪೆ ಗುಣಮಟ್ಟದ ಪರಿಕರಗಳನ್ನು ಒದಗಿಸಲಾಗುತ್ತಿದೆ ಎಂದು ಆರೋಪಿಸಿದರು. ಡೀಸೆಲ್ ಬೆಲೆ ಇಳಿಕೆಯಾದರೂ ಪ್ರಯಾಣ ದರದಲ್ಲಿ ಇಳಿಕೆಯಾಗಿಲ್ಲ ಮತ್ತು ಪ್ರಯಾಣಿಕರಿಗೆ ಯಾವುದೇ ಅನುಕೂಲ ಕಲ್ಪಿಸಿಲ್ಲ. ಈ ಎಲ್ಲಾ ಅವ್ಯವಸ್ಥೆಗಳಿಗೆ ಆಡಳಿತ ವ್ಯವಸ್ಥೆಯ ಕಾರ್ಯ ವೈಖರಿ ಕಾರಣ ಎಂದು ಅವರು ಟೀಕಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎಚ್.ಎಂ.ಕುಮಾರ್, ಕಾರ್ಯದರ್ಶಿ ನಂಜುಂಡ ಸ್ವಾಮಿ, ಸಂಘಟನಾ ಕಾರ್ಯದರ್ಶಿ ವಸಂತ್ ಕುಮಾರ್ ಉಪಸ್ಥಿತರಿದ್ದರು.







