ಬಿಜೆಪಿ ವಿಭಜಿಸಿ ಆಳುವ ಸುಳ್ಳು ಭರವಸೆ ನೀಡುವ ಪಕ್ಷ
ಹಾರ್ದಿಕ್ ಪಟೇಲ್
ಅಹ್ಮದಾಬಾದ್, ಜು.21: ‘‘ಬಿಜೆಪಿ ವಿಭಜಿಸಿ ಆಳುವ ಹಾಗೂ ಜಾತಿ, ಧರ್ಮಗಳ ಆಧಾರದಲ್ಲಿ ತಾರತಮ್ಯ ಮಾಡುವ ಪಕ್ಷವಾಗಿದೆ’’ ಎಂದು ಗುಜರಾತ್ ಪಟೇಲ್ ಆಂದೋಲನದ ನಾಯಕ, ಇತ್ತೀಚೆಗೆ ಜೈಲಿನಿಂದ ಬಿಡುಗಡೆ ಭಾಗ್ಯ ಕಂಡ ಹಾರ್ದಿಕ್ ಪಟೇಲ್ ಹೇಳಿದ್ದಾರೆ.
ಹಿಂದುಸ್ತಾನ್ ಟೈಮ್ಸ್ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ‘‘ಬಿಜೆಪಿಗೆ ಅಭಿವೃದ್ಧಿಯ ಮೇಲೆ ನಂಬಿಕೆಯಿಲ್ಲ. ಅದಕ್ಕೆ ಕೇವಲ ಜಾತಿ ಆಧರಿತ ಹಿಂಸೆ ನಡೆಯಬೇಕಿದೆ. ಗುಜರಾತ್ನ ದಲಿತ ಸಮುದಾಯದ ಪ್ರತಿಭಟನೆಯ ಹಿಂದೆಯೂ ಸರಕಾರದ ವಿರುದ್ಧ ಜನರ ಆಕ್ರೋಶವಿದೆ’’ ಎಂದು ಅವರು ತಿಳಿಸಿದರು. ‘‘ಬಿಜೆಪಿ ಯಾವತ್ತೂ ಹಿಂಸೆಯನ್ನು ಉತ್ತೇಜಿಸಿದೆ. 2002ರ ಗಲಭೆಗಳು ಇದಕ್ಕೆ ಸಾಕ್ಷಿ’’ ಎಂದವರು ಹೇಳಿದರು.
‘‘ಇಂದು ಗುಜರಾತ್ನ ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆಯಿದ್ದರೂ ದೇಶದಾದ್ಯಂತ ಗುಜರಾತ್ ಮಾದರಿಯ ಬಗ್ಗೆ ಭ್ರಮಾಲೋಕವನ್ನು ಸೃಷ್ಟಿಸಲಾಗುತ್ತಿದೆ’’ ಎಂದು ಆರೋಪಿಸಿದ ಹಾರ್ದಿಕ್ ‘‘ಜನರಿಗೆ ಅಭಿವೃದ್ಧಿ ಬೇಕಾಗಿದೆ. ಈಗಿನ ಅಗತ್ಯ ‘ಮೇಕ್ ಇನ್ ಇಂಡಿಯಾ’ ಅಲ್ಲ ಬದಲಾಗಿ ‘ಮೇಡ್ ಇನ್ ಇಂಡಿಯಾ’ ಎಂದು ಹಾರ್ದಿಕ್ ಅಭಿಪ್ರಾಯಪಟ್ಟರು.
‘‘ಯಾವತ್ತೂ ದೇಶದ ಹೊರಗೆ ಇರುವ ನರೇಂದ್ರ ಮೋದಿಯನ್ನು ಅನಿವಾಸಿ ಪ್ರಧಾನಿ ಎಂದು ಕರೆಯಬಹುದು’’ ಎಂದೂ ಅವರು ವ್ಯಂಗ್ಯವಾಡಿದರು.
‘‘ಪ್ರತಿ ದಿನ ದಯನೀಯ ಸ್ಥಿತಿಯಲ್ಲಿರುವ ಹಲವಾರು ಗೋವುಗಳನ್ನು ನಾವು ನೋಡುತ್ತೇವೆ. ಒಬ್ಬರಿಗೆ ನಿಜಾರ್ಥದಲ್ಲಿ ಗೋರಕ್ಷಕರಾಗಬೇಕೆಂದಿದ್ದರೆ ಗೋವುಗಳನ್ನು ಅವರೇಕೆ ಗೋಶಾಲೆಗೆ ಸೇರಿಸುವುದಿಲ್ಲ? ನೈತಿಕ ಪೊಲೀಸರ ದಾದಾಗಿರಿ ಕಸಾಯಿಖಾನೆಗಳನ್ನು ತಲುಪುವುದಿಲ್ಲ. ಅದರಿಂದ ಕೇವಲ ಸಾಮಾನ್ಯ ಜನರು ಬಾಧಿತರಾಗುತ್ತಾರೆ’’ ಎಂದು ಹಾರ್ದಿಕ್ ಹೇಳಿದರು.
‘‘ಬಿಜೆಪಿ ಗುಜರಾತ್ ಮೇಲೆ ತನ್ನ ಹಿಡಿತ ಕಳೆದುಕೊಳ್ಳುತ್ತಿದೆ. ಕಳೆದ ವರ್ಷದ ಪಂಚಾಯತ್ ಚುನಾವಣೆಯ ಫಲಿತಾಂಶವೇ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಮರುಕಳಿಸುವುದು’’ ಎಂದು ಹಾರ್ದಿಕ್ ಭವಿಷ್ಯ ನುಡಿದರು.