ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ: ಡಿಸಿ ಸೂಚನೆ
ಮಡಿಕೇರಿ: ಜನಸಂಪರ್ಕ ಸಭೆ

ಮಡಿಕೇರಿ, ಜು.22 :ಜನಸಂಪರ್ಕ ಸಭೆಗೆ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಶೇ.99 ರಷ್ಟು ಶೀಘ್ರ ವಿಲೇವಾರಿಗೆ ಯೋಗ್ಯವಾಗಿವೆ. ಆದ್ದರಿಂದ, ಅರ್ಜಿಗಳನ್ನು ಕಾಲ ಮಿತಿಯೊಳಗೆ ವಿಲೇವಾರಿ ಮಾಡಿ ಸಾರ್ವಜನಿಕರಿಗೆ ನ್ಯಾಯ ಒದಗಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ನಂತರ ಅವರು ಮಾತನಾಡಿದರು. ಹಲವು ಅರ್ಜಿಗಳು ಕಂದಾಯ ಇಲಾಖೆ, ಗ್ರಾಮೀಣ ಅಭಿವೃದ್ಧಿ, ಸಾರಿಗೆ ಸಂಪರ್ಕ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ್ದಾಗಿದೆ. ಸಲ್ಲಿಕೆಯಾದ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಿ ಸಾರ್ವಜನಿಕರು ಅಲೆಯುವುದನ್ನು ತಪ್ಪಿಸಿ ಎಂದು ಸಲಹೆ ನೀಡಿದರು. ಕಳೆದ ಬಾರಿ ನಡೆದ ಸಭೆಯ ಸಂದರ್ಭ ವಿವಿಧ ಇಲಾಖೆಗಳು ಜನಸಂಪರ್ಕ ಸಭೆ ಹಮ್ಮಿಕೊಳ್ಳುವಂತೆ ಸಲಹೆ ಮಾಡಲಾಗಿತ್ತು. ಆದರೆ ಯಾವುದೇ ಇಲಾಖೆಗಳು ಮುಂದಾಗಿಲ್ಲ. ಜಿಲ್ಲಾಡಳಿತ ವತಿಯಿಂದ ಜನಸಂಪರ್ಕ ಸಭೆ ನಡೆಸಿದಾಗ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚು ಒತ್ತು ನೀಡುತ್ತಾರೆ. ಇದರಿಂದ ವಿವಿಧ ಇಲಾಖೆಗಳ ಸಮಸ್ಯೆಗಳು ತಿಳಿಯುವುದಿಲ್ಲ. ಆದ್ದರಿಂದ ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಜನಸಂಪರ್ಕ ಸಭೆ ನಡೆಸಿದರೆ ಇನ್ನೂ ಸಮಸ್ಯೆಗಳು ತಿಳಿಯಲಿವೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟರು. ಹಲವು ಸಮಸ್ಯೆಗಳನ್ನು ಮಾನವೀಯ ದೃಷ್ಟಿಯಿಂದ ನೋಡ ಬೇಕಾಗಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರು ಸರಕಾರಿ ಕೆಲಸಕ್ಕಾಗಿ ಕಚೇರಿಗೆ ಆಗಮಿಸಿದ ಸಂದರ್ಭ ಸ್ಪಂದಿಸುವ ಕಾರ್ಯ ಮಾಡಬೇಕು ಎಂದರು. ಜನಸಂಪರ್ಕ ಸಭೆಯಲ್ಲಿ ಸುಮಾರು 31ಕ್ಕೂ ಹೆಚ್ಚು ಅರ್ಜಿ ಗಳು ಸಲ್ಲಿಕೆಯಾಗಿದ್ದು, ಒತ್ತುವರಿ ತೆರವು, ರಸ್ತೆ ಸುಧಾರಣೆ ಮಾಡುವುದು, ಆರ್ಟಿಸಿ ತಿದ್ದುಪಡಿ, ಕೊಡ್ಲಿಪೇಟೆ-ಮಡಿಕೇರಿ ಮಾರ್ಗ ಬಸ್ ಸೌಲಭ್ಯ ಕಲ್ಪಿಸುವುದು, ಖಾತೆ ವರ್ಗಾವಣೆ, ಆಸ್ತಿ ಅತಿಕ್ರಮಣ ತೆರವುಗೊಳಿಸುವುದು, ಬಂದೂಕು ಪರವಾನಿಗೆ, ಅರಣ್ಯ ಹಕ್ಕು ಕಾಯ್ದೆ ಸವಲತ್ತು, ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣ, ನಿವೇಶನ, ವಸತಿ, ಕಂದಾಯ ನಿಗದಿ, ತಡೆಗೋಡೆ ನಿರ್ಮಾಣ ಮತ್ತಿತರ ಸಂಬಂಧ ಸಾರ್ವಜನಿಕರು ಜಿಲ್ಲಾಧಿಕಾರಿ ಅವರಿಗೆ ಅಹವಾಲು ಸಲ್ಲಿಸಿದರು. ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಐಟಿಡಿಪಿ, ಸಾರ್ವಜನಿಕ ಶಿಕ್ಷಣ, ಪ್ರವಾಸೋದ್ಯಮ, ಅರಣ್ಯ ಹೀಗೆ ನಾನಾ ಇಲಾಖೆಗಳು ಜನಸಂಪರ್ಕ ಸಭೆಯನ್ನು ಹಮ್ಮಿಕೊಂಡು ಸಾರ್ವಜನಿಕರ ಅಹವಾಲುಗಳನ್ನು ಆಲಿಸುವಂತಾಗಬೇಕು ಎಂದು ಅವರು ಸಲಹೆ ನೀಡಿದರು. ಈ ಸಂದರ್ಭ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಉಪಸ್ಥಿತರಿದ್ದರು.





